Saturday, 21st September 2024

ಮುಂಬೈ ದಾಳಿ: ಹುತಾತ್ಮ ಯೋಧರಿಗೆ ಗಣ್ಯರಿಂದ ಗೌರವ ಸಲ್ಲಿಕೆ

ಮುಂಬೈ: ಮುಂಬೈ ದಾಳಿ(12 ವರ್ಷಗಳ ಹಿಂದೆ) ಘಟನೆಯಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರಿಗೆ ಗುರುವಾರ ಗೌರವ ಸಲ್ಲಿಸಲಾಯಿತು.

‘ಯೋಧರ ತ್ಯಾಗ ಇತಿಹಾಸ ಮತ್ತು ಸ್ಮೃತಿಪಟಲದಿಂದ ಮರೆಯಾಗುವುದಿಲ್ಲ. ನಮ್ಮ ಉಳಿವಿವಾಗಿ ತ್ಯಾಗ ಮಾಡಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು’ ಎಂದು ‌ಮುಂಬೈನ ಪೊಲೀಸರು ಸ್ಮರಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶಮುಖ್, ಪರಿಸರ ಸಚಿವ ಅದಿತ್ಯ ಠಾಕ್ರೆ ಪೊಲೀಸ್‌ ಕೇಂದ್ರ ಕಚೇರಿ ಆವರಣದಲ್ಲಿನ ಹುತಾತ್ಮರ ನೂತನ ಸ್ಮಾರಕಕ್ಕೆ ನಮಿಸಿದರು.

2008ರ ನವೆಂಬರ್‌ 26ರಂದು ನಡೆದಿದ್ದ ಘಟನೆಯಲ್ಲಿ ಹುತಾತ್ಮರಾಗಿದ್ದ ಯೋಧರು, ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿ ಹಲವು ಪ್ರಮುಖರು ನುಡಿನಮನ ಸಲ್ಲಿಸಿದರು.

ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸಿದ ಪೊಲೀಸ್ ಕಮೀಷನರ್ ಪರಂ ವೀರ್ ಸಿಂಗ್ ಅವರು, ನಮ್ಮ ರಕ್ಷಣೆಗಾಗಿ ಜೀವತ್ಯಾಗ ಮಾಡಿದ ಧೈರ್ಯಶಾಲಿ ಯೋಧರು, ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

12 ವರ್ಷಗಳ ಹಿಂದೆ ಇದೇ ದಿನ ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಬಂದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. 60 ಗಂಟೆ ಕಾರ್ಯಾಚರಣೆ ನಡೆದಿತ್ತು. 18 ಭದ್ರತಾ ಸಿಬ್ಬಂದಿ ಸೇರಿ 166 ಜನರು ಮೃತಪಟ್ಟಿದ್ದರು.

ಭಯೋತ್ಪಾದನಾ ವಿರೋಧಿ ಪಡೆಯ ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್‌ ಉನ್ನಿಕೃಷ್ಣನ್, ಮುಂಬೈ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ, ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ ಸಲಾಸ್ಕರ್‌, ಎಎಸ್‌ಐ ತುಕಾರಾಂ ಒಂಬ್ಲೆ ಮೃತಪಟ್ಟವರಲ್ಲಿ ಸೇರಿದ್ದರು.

ದಾಳಿಯಲ್ಲಿ ಜೀವಂತವಾಗಿ ಸಿಕ್ಕುಬಿದ್ದಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು, 2012ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸ ಲಾಗಿತ್ತು.