Thursday, 24th October 2024

ಎನ್​ಸಿಪಿ ನಾಯಕ ನವಾಬ್​ ಮಲಿಕ್ ಬಂಧನ

ಮುಂಬೈ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಮತ್ತು ಅಂಡರ್​ವರ್ಲ್ಡ್​​ನ ಇನ್ನಿತರ ಕೇಸ್​ಗೆ ಸಂಬಂಧಪಟ್ಟಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನತ್ತಿರುವ ಜಾರಿ ನಿರ್ದೇಶನಾಲಯ, ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲಿಕ್​ರನ್ನೂ ವಿಚಾರಣೆ ನಡೆಸಿ ಬಂಧಿಸಿದ್ದಾರೆ.ಕಳೆದ ವಾರ ಇ.ಡಿ. ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು.

ಭೂಗತ ಪಾತಕಿ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ದಾವೂದ್​ ಇಬ್ರಾಹಿಂ, ಆತನ ಸಹೋದರ ಅನೀಸ್​ ಇಕ್ಬಾಲ್​, ಸಹಾಯಕ ಚೋಟಾ ಶಕೀಲ್​ ಮತ್ತು ಇತರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಅಕ್ರಮ ಹಣವರ್ಗಾವಣೆ ಕೇಸ್​ ದಾಖಲಿ ಸಿರುವ ಇ.ಡಿ., ಇದೇ ವಿಚಾರದಲ್ಲಿ ಅನೇಕ ರಾಜಕಾರಣಿಗಳ ಮೇಲೆ ಕಣ್ಗಾವಲು ಇಟ್ಟಿತ್ತು. ಹಾಗೇ, ನವಾಬ್​ ಮಲಿಕ್​​ರನ್ನು ಇಂದು ಬೆಳಗ್ಗೆ 8ಗಂಟೆಯಿಂದ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.

ಕಳೆದ ವಾರ ಇ.ಡಿ. ಮುಂಬೈನಲ್ಲಿ ದಾವೂದ್​ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರೇಡ್​ ಮಾಡಿತ್ತು. ರಾಷ್ಟ್ರೀಯ ತನಿಖಾ ದಳ (NIA) ದಾಖಲಿಸಿದ್ದ ಎಫ್​ಐಆರ್​ ಆಧಾರದಲ್ಲಿ ಇ.ಡಿ. ಈ ದಾಳಿ ನಡೆಸಿ, ತನಿಖೆ ಕೈಗೆತ್ತಿಕೊಂಡಿದೆ.

ಬಂಧಿತರಾದ ಬಳಿಕ ಪ್ರತಿಕ್ರಿಯೆ ನೀಡಿದ ನವಾಬ್​ ಮಲಿಕ್​, “ನಾನು ಖಂಡಿತ ಗೆಲ್ಲುತ್ತೇನೆ, ಯಾವುದೇ ಕಾರಣಕ್ಕೂ ತಲೆ ಬಾಗುವುದಿಲ್ಲ,” ಎಂದು ಹೇಳಿದ್ದಾರೆ. ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಂಧನವಾದಾಗ, ಸಮೀರ್​ ವಾಂಖೆಡೆ ಜಾತಿಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಮೀರ್ ವಾಂಖೆಡೆ, ಡ್ರಗ್ಸ್​ ಕೇಸ್​​​ನಲ್ಲಿ ನವಾಬ್​ ಮಲಿಕ್ ಅಳಿಯನನ್ನು ಅಂದರೆ ಮಗಳ ಗಂಡನನ್ನು ಬಂಧಿಸಿದ್ದಕ್ಕೆ ನನ್ನ ವಿರುದ್ಧ ದ್ವೇಷ ಸಾಧಿಸುತ್ತಾರೆ ಎಂದಿದ್ದರು. ಹೀಗೆ ನವಾಬ್​ ಮಲಿಕ್​ ಕಳೆದ ಹಲವು ತಿಂಗಳುಗಳಿಂದಲೂ ವಿವಾದದ ಕೇಂದ್ರಬಿಂದುವಾಗಿ ಉಳಿದಿದ್ದರು.

ಮಹಾರಾಷ್ಟ್ರದಲ್ಲಿ ಇ.ಡಿ.ಬಂಧಿಸುತ್ತಿರುವ ಎರಡನೇ ಸಚಿವ ಈ ನವಾಬ್​ ಮಲಿಕ್​. ಈ ಹಿಂದೆ 2021ರ ನವೆಂಬರ್​1ರಂದು ತಡರಾತ್ರಿ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.