Wednesday, 23rd October 2024

Niira Radia: ನ್ಯಾನೋ ಹುಟ್ಟಿದ ಕಥೆ, ಟಾಟಾ ಜೊತೆಗಿನ ನೆನಪು ಹಂಚಿಕೊಂಡ ನೀರಾ ರಾಡಿಯಾ

Niira Radia

ಟಾಟಾ ಗ್ರೂಪ್ (tata Group) ಕಂಪೆನಿಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಮಾಜಿ ಕಾರ್ಪೊರೇಟರ್ ನೀರಾ ರಾಡಿಯಾ (Niira Radia) ಉದ್ಯಮಿ ಯಾಗೂ ಟಾಟಾ ಸನ್ಸ್ ನ (tata son’s) ಮಾಜಿ ಅಧ್ಯಕ್ಷರಾದ ದಿ. ರತನ್ ಟಾಟಾ (Ratan Tata) ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸುಮಾರು 12 ವರ್ಷಗಳ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಟಾಟಾ ಅವರ ಔದ್ಯಮಶೀಲತೆಯನ್ನು ಹೊಗಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ರತನ್ ಟಾಟಾ ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ನೆನಪಿಸಿಕೊಂಡರು ಮತ್ತು ಟಾಟಾ ಅವರು ನ್ಯಾನೋವನ್ನು ಉತ್ಪಾದಿಸಲು ಏಕೆ ನಿರ್ಧರಿಸಿದರು ಎಂಬುದನ್ನು ಹೇಳಿಕೊಂಡಿದ್ದಾರೆ.
ಟಾಟಾ ಮೋಟಾರ್ಸ್‌ನ ಹ್ಯಾಚ್‌ಬ್ಯಾಕ್ ಇಂಡಿಕಾ ಬಿಡುಗಡೆ, ಫೋರ್ಡ್‌ನಿಂದ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿ ಮತ್ತು 1 ಲಕ್ಷ ರೂ. ಕಾರು ನ್ಯಾನೋ ಬಿಡುಗಡೆ.. ಇವೆಲ್ಲವುಗಳ ಹಿಂದಿನ ಕಥೆಯನ್ನು ರಾಡಿಯಾ ಹೇಳಿಕೊಂಡಿದ್ದಾರೆ.

ಟಾಟಾ ಅವರು ಕನಸುಗಾರರು ಮತ್ತು ದಾರ್ಶನಿಕರಾಗಿದ್ದರು. ಭಾರತ ಅವರ ಹೆಮ್ಮೆಯಾಗಿತ್ತು. ಅವರು ತಮ್ಮ ದೇಶ, ಜನರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಜಾಗತೀಕರಣ ಮಾಡುವುದು ತುಂಬಾ ಮುಖ್ಯ ಎಂದು ಅವರು ಸದಾ ಹೇಳುತ್ತಿದ್ದರು. ಜಾಗತೀಕರಣವನ್ನು ನಾನು ಇಷ್ಟ ಪಡಲು ಏಕೈಕ ಕಾರಣವೆಂದರೆ ಭಾರತಕ್ಕೆ ತಂತ್ರಜ್ಞಾನ ತರಬೇಕು ಮತ್ತು ಉತ್ತಮ ಅವಕಾಶಗಳನ್ನು ನಿರ್ಮಿಸಲು ನಮ್ಮ ಕಂಪನಿಗಳನ್ನು ಅಪ್‌ಗ್ರೇಡ್ ಮಾಡಬೇಕು ಎಂದು ಟಾಟಾ ಹೇಳುತ್ತಿದ್ದರು ಎಂಬುದಾಗಿ ರಾಡಿಯಾ ತಿಳಿಸಿದ್ದಾರೆ.

Niira Radia

ನ್ಯಾನೋ ಹಿಂದಿನ ಕಥೆ

ರತನ್ ಟಾಟಾ ಅವರು 1 ಲಕ್ಷ ರೂ. ನ ಕಾರು ನ್ಯಾನೋ ತಯಾರಿಸಲು ನಿರ್ಧರಿಸಿದರು ಯಾಕೆಂದರೆ ಅವರು ಸಾಮಾನ್ಯ ವ್ಯಕ್ತಿಗೆ ಏನಾದರೂ ನೀಡಬೇಕೆಂದು ಬಯಸಿದ್ದರು. ಸಾಮಾನ್ಯ ವ್ಯಕ್ತಿಯೊಬ್ಬ ಬೈಕಿನಲ್ಲಿ ಹೋಗುವಾಗ ಮಳೆಯಲ್ಲಿ ಒದ್ದೆಯಾಗಬಾರದು ಎಂದು ಬಯಸಿದ್ದರು ಎಂದೂ ನೀರಾ ತಿಳಿಸಿದರು.

ತಮಗೆ ಬೇಕಾದಂತೆ ನ್ಯಾನೋ ಕಾರು ಬಾರದೇ ಇದ್ದಾಗ ರತನ್ ಟಾಟಾ ಬೇಸರಗೊಂಡಿದ್ದರು. ಅವರ ದೃಷ್ಟಿ ವ್ಯಾಪಾರ ಮತ್ತು ಪಶ್ಚಿಮ ಬಂಗಾಳ ರಾಜ್ಯವನ್ನು ಅಭಿವೃದ್ಧಿಪಡಿಸುವುದಾಗಿತ್ತು. ಈ ನಡುವೆ ಅವರು ರಾಜಕೀಯ ಹೋರಾಟದಲ್ಲಿ ಸಿಕ್ಕಿಹಾಕಿಕೊಂಡರು. ಟಾಟಾ ಅವರು ನ್ಯಾನೋ ನಿರ್ಮಾಣಕ್ಕೆ ಪಶ್ಚಿಮ ಬಂಗಾಳದ ಸಿಂಗೂರ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಯಾಕೆಂದರೆ ಅಲ್ಲಿ ಉದ್ಯೋಗ ಸೃಷ್ಟಿಸಲು ಬಯಸಿದ್ದರು. ಜೊತೆಗೆ ಪಶ್ಚಿಮ ಬಂಗಾಳಕ್ಕೆ ಕೈಗಾರಿಕೀಕರಣವನ್ನು ತರಲು ಬಯಸಿದ್ದರು ಎಂದು ಹೇಳಿದರು.

ಸಿಂಗೂರ್ ಆಯ್ಕೆ ನಮಗೆ ಆಶ್ಚರ್ಯ ತಂದಿದೆ. ಯಾಕೆಂದರೆ ಈ ಬಗ್ಗೆ ಅವರು ನಮಗೂ ಮೊದಲು ಹೇಳಿರಲಿಲ್ಲ ಎಂದು ರಾಡಿಯಾ ಹೇಳಿದರು. ಬಂಗಾಳದಲ್ಲಿ ನ್ಯಾನೋ ಸ್ಥಾವರದ ಕುರಿತಾದ ದೊಡ್ಡ ಗಲಾಟೆ ನಡೆದಾಗ ಟಾಟಾ ಗ್ರೂಪ್ ಬಿಗ್-ಟಿಕೆಟ್ ಕೋರಸ್ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿತ್ತು. ಎರಡು ನಿರ್ಣಾಯಕ ನಿರ್ಧಾರಗಳ ಮಧ್ಯೆ ಅವರು ಬಂಗಾಳದಲ್ಲಿದ್ದರು ಎಂದು ನೀರಾ ತಿಳಿಸಿದರು.

ನ್ಯಾನೋ ರತನ್ ಟಾಟಾ ಊಹಿಸಿರಬಹುದಾದ ಎತ್ತರವನ್ನು ತಲುಪಲಿಲ್ಲ. ಅದು ಅವರಿಗೆ ಬೇಸರ ತರಿಸಿತ್ತು. ಬೆಲೆಯ ಹಂತವು ಬಳಿಕ ಬದಲಾಯಿತು. ಅವರ ದೃಷ್ಟಿ ಕೇವಲ ವ್ಯಾಪಾರದ ಕಡೆಗೆ ಇರಲಿಲ್ಲ. ಅವರು ಬಂಗಾಳದಲ್ಲಿ ಕೈಗಾರಿಕೀಕರಣ ನಡೆಸಬೇಕು ಎಂದು ನಿರ್ಧರಿಸಿದ್ದರು. ಅಲ್ಲಿ ಅವರು ಉದ್ಯೋಗಗಳನ್ನು ಸೃಷ್ಟಿಸಲು ಬಯಸಿದ್ದರು. ಇದರಿಂದಾಗಿಯೇ ಕೋಲ್ಕತ್ತಾದಿಂದ ಸಿಂಗೂರ್‌ಗೆ ಸಂಪೂರ್ಣ ರಸ್ತೆ ನಿರ್ಮಾಣ ಸಾಧ್ಯವಾಯಿತು. ರಾಜಕೀಯ ಸಮಸ್ಯೆಯ ಕಾರಣದಿಂದ ಬಳಿಕ ನ್ಯಾನೋ ಯೋಜನೆ ಗುಜರಾತ್ ನ ಸನಂದ್‌ಗೆ ಹೋಯಿತು. ಸಾನಂದ್ ಗುರುಗ್ರಾಮ್‌ನಂತಿದೆ ಎಂದು ರಾಡಿಯಾ ಹೇಳಿದರು.

ಈ ಹೋರಾಟವು ರಾಜಕೀಯ ಹೋರಾಟವಾಗಿತ್ತು. ಸಿಂಗೂರು ಆಗಿನ ಆಡಳಿತ ಪಕ್ಷದ ನಾಯಕರ ಕ್ಷೇತ್ರವಾಗಿತ್ತು. ನಾವು ಸ್ಥಳ ಹುಡುಕಲು ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೇವೆ. ನಮ್ಮನ್ನು ಪಂಜಾಬ್, ಕರ್ನಾಟಕ ಸೇರಿ ಇನ್ನೂ ಅನೇಕರು ಕರೆದರು. ಗುಜರಾತ್‌ ಸ್ವಲ್ಪ ಹೆಚ್ಚು ಕೈಗಾರಿಕೀಕರಣ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಅಲ್ಲಿ ಸ್ಥಾಪಿಸಲು ಸುಲಭವಾಗುತ್ತದೆ ಎಂದು ರಾಡಿಯಾ ತಿಳಿಸಿದರು. ಈ ಸಂದರ್ಭದಲ್ಲಿ ತಾವು ವೈಷ್ಣವಿ ಕಮ್ಯುನಿಕೇಷನ್ಸ್ ಮುಖ್ಯಸ್ಥರಾಗಿರುವುದನ್ನು ಅವರು ನೆನಪಿಸಿಕೊಂಡರು.

Aadhaar: ಸಿಮ್ ಖರೀದಿಗೆ ಆಧಾರ್ ಕಡ್ಡಾಯವೆ? ನಿಯಮ ಏನಿದೆ?

ಕೊನೆಯ ಭೇಟಿ

ಟಾಟಾ ಅವರನ್ನು ರಾಡಿಯಾ ಕೊನೆಯ ಬಾರಿಗೆ ಭೇಟಿಯಾಗಿದ್ದು ಸುಮಾರು ಎರಡು ಮೂರು ತಿಂಗಳ ಹಿಂದೆ. ಅದು ಫೋನ್ ಮೂಲಕ. ನಮಗೆ ಸಾಧ್ಯವಾದಾಗ ನಾವು ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಸಂತೋಷದ ಸಂಗತಿಯೆಂದರೆ ನಾವು ಉತ್ತಮ ಸ್ನೇಹಿತರಾಗಿದ್ದೇವೆ ಎಂದು ನೀರಾ ಹೇಳಿದರು. ರತನ್ ಟಾಟಾ ಅವರು ನಾಚಿಕೆ ಸ್ವಭಾವದ ವ್ಯಕ್ತಿಯಾಗಿದ್ದರು. ಅವರು ಸಾರ್ವಜನಿಕವಾಗಿ ಮಾತನಾಡುವುದಕ್ಕಿಂತ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ ಎಂದು ರಾಡಿಯಾ ತಿಳಿಸಿದರು.