Thursday, 19th September 2024

Bulldozer Justice : ತನ್ನ ಅನುಮತಿಯಿಲ್ಲದೆ ‘ಬುಲ್ಡೋಜರ್ ಜಸ್ಟಿಸ್‌’ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

bulldozer justice

ನವದೆಹಲಿ: ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಶಂಕೆ ಮೇಲೆ ಅವರ ಆಸ್ತಿಗಳನ್ನು ಬುಲ್ಡೋಜರ್‌ಗಳನ್ನು ಹರಿಸುವ ( ‘ಬುಲ್ಡೋಜರ್ ಜಸ್ಟೀಸ್’ ) ಕ್ರಮಗಳನ್ನು (Bulldozer Justice) ತಕ್ಷಣವೇ ನಿಲ್ಲಿಸಬೇಕು ಎಂಬ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಹೊರಡಿಸಿದೆ. ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಲು ಅಥವಾ ಅಭಿವೃದ್ಧಿ ಕಾರ್ಯಗಳಿಗಾಗಿ ಮಾಡುವ ತೆರವು ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದ್ದು, ಕನಿಷ್ಠ ಅಕ್ಟೋಬರ್ 1ರವರೆಗೆ ಮಧ್ಯಂತರ ಆದೇಶ ಮುಂದುವರಿಯುತ್ತದೆ ಎಂದು ಹೇಳಿದೆ. “ಮುಂದಿನ ದಿನಾಂಕದವರೆಗೆ ನ್ಯಾಯಾಲಯದ ಅನುಮತಿ ಪಡೆಯದೆ ಯಾವುದೇ ನೆಲಸಮ ಮಾಡುವಂತಿಲ್ಲ. ಸಾರ್ವಜನಿಕ ಬೀದಿಗಳು, ಫುಟ್ಪಾರ್‌ಗಳು ರೈಲ್ವೆ ಮಾರ್ಗಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿರ್ಮಾಣಗಳನ್ನು ನೆಲಸಮ ಮಾಡುವುದಿದ್ದರೆ ಅಂಥ ಪ್ರಕರಣಗಳಿಗೆ ಆದೇಶ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ಆದೇಶಿಸಿದೆ. ದೇಶದ ಪುರಸಭೆಯ ಕಾನೂನುಗಳ ಅಡಿಯಲ್ಲಿ ಆಸ್ತಿಗಳನ್ನು ಯಾವಾಗ ಮತ್ತು ಹೇಗೆ ನೆಲಸಮಗೊಳಿಸಬಹುದು ಎಂಬುದರ ಕುರಿತು ನಿರ್ದೇಶನಗಳನ್ನು ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ದಂಡನಾತ್ಮಕ ಕ್ರಮವಾಗಿ ಕ್ರಿಮಿನಲ್ ವಿಚಾರಣೆಗಳಲ್ಲಿ ಆರೋಪಿಗಳ ಮನೆಗಳು ಅಥವಾ ಅಂಗಡಿಗಳನ್ನು ನೆಲಸಮಗೊಳಿಸದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಎರಡು ಎರಡು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.

ಹಿಂದಿನ ವಿಚಾರಣೆಯಲ್ಲಿ, ನ್ಯಾಯಪೀಠವು ಬುಲ್ಡೋಜರ್ ಜಸ್ಟಿಸ್‌ ನೀಡುವ ಪ್ರವೃತ್ತಿಯನ್ನು ಟೀಕಿಸಿತ್ತು. ಬುಲ್ಡೋಜರ್ ನ್ಯಾಯದ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಹೇಳಿತ್ತು. ಈ ನಡುವೆ ಕಟ್ಟಡವು ಕಾನೂನುಬಾಹಿರವಾಗಿದ್ದರೆ ನೆಲಸಮ ಮಾಡಬಹುದು ಎಂದು ಉತ್ತರ ಪ್ರದೇಶ ರಾಜ್ಯವು ತೆಗೆದುಕೊಂಡ ನಿಲುವನ್ನು ಕೋರ್ಟ್‌ ಶ್ಲಾಘಿಸಿತ್ತು.

ಇದನ್ನೂ ಓದಿ: Atishi Marlena: ದೆಹಲಿಯ ಮೂರನೇ ಮಹಿಳಾ ಸಿಎಂ ಆಗಿರುವ ಆತಿಶಿ ಹಿನ್ನೆಲೆ ಏನು? ರಾಜಕೀಯ ಪಯಣ ಹೇಗೆ ಶುರುವಾಯ್ತು? ಇಲ್ಲಿದೆ ಡಿಟೇಲ್ಸ್‌

ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವೂ ಇತ್ತೀಚೆಗೆ ಬುಲ್ಡೋಜರ್‌ಗಳಿಗೆ ಕಾನೂನು ಮೀರುವ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಕಳೆದ ವಾರ, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು “ಬುಲ್ಡೋಜರ್ ನ್ಯಾಯ” ವನ್ನು ಟೀಕಿಸಿತ್ತು ಕಾನೂನು ಸರ್ವೋಚ್ಚವಾಗಿರುವ ದೇಶದಲ್ಲಿ ಇಂತಹ ಬೆದರಿಕೆಗಳನ್ನು ಊಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ಪುರಸಭೆ ಅಧಿಕಾರಿ ವಿರುದ್ಧ ಕೋರ್ಟ್‌ಗೆ

ಗುಜರಾತ್‌ನ ಖೇಡಾ ಜಿಲ್ಲೆಯ ಕತ್ಲಾಲ್‌ನಲ್ಲಿರುವ ಜಮೀನಿನ ಸಹ ಮಾಲೀಕರಾಗಿರುವ ಅರ್ಜಿದಾರರು ಪುರಸಭೆಯ ಅಧಿಕಾರಿಗಳ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಕುಟುಂಬದ ಮೂರು ತಲೆಮಾರುಗಳು ಸುಮಾರು ಎರಡು ದಶಕಗಳಿಂದ ಈ ಮನೆಗಳಲ್ಲಿ ವಾಸಿಸುತ್ತಿವೆ. ಆದರೆ ಪುರಸಭೆ ಅಧಿಕಾರಿ ನೆಲಸಮ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.