Thursday, 19th September 2024

ಆಪರೇಷನ್ ಕಾವೇರಿ ಯಶಸ್ವಿಯಾಗಿ ಪೂರ್ಣ

ವದೆಹಲಿ: ಯುದ್ಧ ಪೀಡಿತ ಸುಡಾನ್‍ನಲ್ಲಿ ಸಿಲುಕಿರುವ ದೇಶದ ಪ್ರಜೆಗಳನ್ನು ರಕ್ಷಿಸಲು ಪ್ರಾರಂಭಿಸಲಾಗಿದ್ದ ಆಪರೇಷನ್ ಕಾವೇರಿಯನ್ನು ಭಾರತ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಸೇನಾಪಡೆ ಮತ್ತು ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದಾಗಿ ಸುಡಾನ್ ದೇಶವು ರಕ್ತಪಾತವನ್ನು ಅನುಭವಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ವಿಮಾನವು ಸುಡಾನ್‍ನಲ್ಲಿರುವ 47 ಭಾರತೀಯ ಪ್ರಜೆಗಳನ್ನು ದೇಶಕ್ಕೆ ವಾಪಸ್ ಕರೆತರಲು ತನ್ನ ಅಂತಿಮ ಹಾರಾಟವನ್ನು ನಡೆಸುವ ಮೂಲಕ ಅಂತ್ಯಗೊಳಿಸಿದೆ. ಸುಡಾನ್‍ನಿಂದ ತನ್ನ ಪ್ರಜೆಗಳನ್ನು ಸ್ಥಳಾಂತ ರಿಸಲು ಭಾರತವು ಏ.24ರಂದು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತ್ತು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿ, ಭಾರತೀಯ ವಾಯುಪಡೆಯು ಸಿ 130 ವಿಮಾನವು ಆಗಮಿಸಿದೆ. ಇದರೊಂದಿಗೆ ಆಪರೇಷನ್ ಕಾವೇರಿ ಮೂಲಕ 3,862 ಜನರನ್ನು ಸುಡಾನ್‍ನಿಂದ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಭಾರತೀಯ ವಾಯುಪಡೆಯು 17 ವಿಮಾನಗಳನ್ನು (Air Force Flights) ಸುಡಾನ್ ಕಾರ್ಯಾಚರಣೆಯಲ್ಲಿ ಬಳಸಿಕೊಂಡಿದೆ. ಭಾರತೀಯ ನೌಕಾಪಡೆಯ ಹಡಗುಗಳು ಭಾರತೀಯರನ್ನು ಸುಡಾನ್‍ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಸ್ಥಳಾಂತರಿಸಲು 5 ಹಡಗುಗಳು (Navy Ship) ಕಾರ್ಯಾಚರಣೆ ನಡೆಸಿವೆ.

ಸುಡಾನ್‍ನಿಂದ ಭಾರತೀಯರನ್ನು ರಕ್ಷಿಸಿ ಸ್ಥಳಾಂತರಿಸಲು ಸಹಾಯ ಮಾಡಿದ ಸೌದಿ ಅರೇಬಿಯಾಕ್ಕೆ ಕೃತಜ್ಞತೆ ಸಲ್ಲಿಸಿದರು.