Thursday, 19th September 2024

ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ಅಧಿಕಾರಿಗಳೇ ಡಿಬಾರ್​..!

ಭೋಪಾಲ್: ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಯಲ್ಲಿ ಕೇಳಿದ ಒಂದು ಪ್ರಶ್ನೆ ಯಿಂದ ಪ್ರಶ್ನೆ ಪತ್ರಿಕೆ ತಯಾರು ಮಾಡಿರುವ ಅಧಿಕಾರಿಗಳನ್ನೇ ಡಿಬಾರ್‌ ಮಾಡಿರುವುದು ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ ಲೋಕಸೇವಾ ಆಯೋಗದ ರಾಜ್ಯ ಸೇವೆ ಮತ್ತು ಅರಣ್ಯ ಸೇವೆಯ ಪೂರ್ವ ಭಾವಿ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆ ಯೊಂದು ವಿವಾದಕ್ಕೆ ಕಾರಣವಾಗಿದ್ದು, ಅಧಿಕಾರಿ ಗಳು ಕೆಲಸ ಕಳೆದುಕೊಂಡಿದ್ದಾರೆ. ಹಾಗೂ ಬೇರೆಲ್ಲೂ ಕೆಲಸ ನೀಡದಂತೆಯೂ ಎಂಪಿಪಿಎಸ್‌ಸಿ ಆದೇಶಿಸಿದೆ.

ಪ್ರಶ್ನೆ ಏನೆಂದರೆ, ‘ಭಾರತವು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬೇಕೆ?’ ಎಂಬುದು! ಜೂ. 19 ರಂದು ನಡೆದ ಎಂಪಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಪತ್ರಿಕೆಯಲ್ಲಿ ಕೇಳಲಾಗಿತ್ತು.

ಪ್ರಶ್ನೆ- ಆಯ್ಕೆಯ ಉತ್ತರಗಳು ಹೀಗಿದ್ದವು:

ಆಯ್ಕೆ 1: ಹೌದು, ಇದು ಭಾರತಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತದೆ
ಆಯ್ಕೆ 2: ಇಲ್ಲ, ಅಂತಹ ನಿರ್ಧಾರವು ಇದೇ ರೀತಿಯ ಬೇಡಿಕೆಗಳ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗುತ್ತದೆ.

ಪ್ರಶ್ನೆ ಭಾರಿ ವಿವಾದ ಹುಟ್ಟುಹಾಕಿದ್ದೂ ಅಲ್ಲದೇ ಪೇಪರ್​ ಸಿದ್ದಪಡಿಸಿದ  ಅಧಿಕಾರಿಗಳನ್ನು ಡಿಬಾರ್ ಮಾಡಲಾಯಿತು. ಅಲ್ಲದೇ, ಅವರಿಗೆ ಎಲ್ಲಿಯೂ ಕೆಲಸ ನೀಡಬಾರದು ಎಂದು ಎಂಪಿಪಿಎಸ್‌ಸಿ ಸೂಚಿಸಿದೆ.

ಮಧ್ಯಪ್ರದೇಶ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ‘ಎಂಪಿಪಿಎಸ್‌ಸಿ ಪರೀಕ್ಷೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ವಿವಾದಿತ ಪ್ರಶ್ನೆ ಕೇಳುವ ಸಂದರ್ಭ ಆಕ್ಷೇಪಾರ್ಹವಾಗಿದೆ. ವಿವಾದಾತ್ಮಕ ಪ್ರಶ್ನೆ ಕೇಳಿದ ಪೇಪರ್ ಸೆಟ್ಟರ್‌ಗಳು ಮಧ್ಯಪ್ರದೇಶ ಮತ್ತು ಮಹಾ ರಾಷ್ಟ್ರದವರು. ಭವಿಷ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇವರೇ ಸಿದ್ಧಪಡಿಸುವುದರಿಂದ ಅವರನ್ನು ಪಿಎಸ್‌ಸಿ ಡಿಬಾರ್ ಮಾಡಿದೆ ಎಂದಿದ್ದಾರೆ.