Friday, 20th September 2024

ಸತಿ ಪದ್ಧತಿ ಹೇಳಿಕೆ: ಲೋಕಸಭೆ ಕಲಾಪ ಮುಂದೂಡಿಕೆ

ನವದೆಹಲಿ: ಬಿಜೆಪಿ ಸದಸ್ಯ ಸಿ.ಪಿ. ಜೋಶಿ ರದ್ದುಪಡಿಸಿರುವ ಸತಿ ಪದ್ಧತಿಯನ್ನು ವೈಭವೀ ಕರಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿದ್ದು, ಲೋಕಸಭೆ ಯನ್ನು ಕೆಲಕಾಲ ಮುಂದೂಡಲಾಯಿತು.
ರಾಜಸ್ಥಾನದ ಚಿತ್ತೋರ್ಗಢದ ಬಿಜೆಪಿ ಸದಸ್ಯ ಜೋಶಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಪ್ರಾರಂಭಿಸಿದಾಗ, ಆಕ್ರಮಣಕಾರ ಅಲ್ಲಾವುದೀನ್ ಖಿಲ್ಜಿಯಿಂದ ತನ್ನ ಗೌರವ ರಕ್ಷಿಸಲು ಮೇವಾರದ ರಾಣಿ ಪದ್ಮಾವತಿ ಸ್ವಯಂ ದಹನ ಮಾಡಿಕೊಂಡ ವಿಚಾರವನ್ನು ಉಲ್ಲೇಖಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯ ರಾದ ಸುಪ್ರಿಯಾ ಸುಳೆ (ಎನ್ಸಿಪಿ), ಕನಿಮೋಳಿ, ದಯಾನಿಧಿ ಮಾರನ್, ಎ ರಾಜಾ (ಡಿಎಂಕೆ), ಕೆ ಮುರಳೀಧರನ್ (ಕಾಂಗ್ರೆಸ್), ಇಮ್ತಿ ಯಾಜ್ ಜಲೀಲ್ (ಎಐಎಂಐಎಂ) ಜೋಶಿ ‘ಸತಿ’ ಪದ್ಧತಿಯನ್ನು ವೈಭವೀಕರಿಸಿದ್ದಾರೆ ಎಂದು ಪ್ರತಿಪಾದಿಸಿದರು.
ತಾನು ಸತಿ ಪದ್ದತಿ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ, ಪದ್ಮಾವತಿ ತನ್ನ ಗೌರವ ಕಾಪಾಡಲು ‘ಜೌಹರ್’ (ಸ್ವಯಂ ದಹನ) ಮಾಡಿಕೊಂಡಿದ್ದಾರೆ ಎಂದು ಹೇಳಿರುವುದಾಗಿ ಜೋಶಿ ಸಮರ್ಥಿಸಿಕೊಂಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಮುಂದುವರಿದಿದ್ದರಿಂದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು.