Thursday, 19th September 2024

ಅನಗತ್ಯವಾಗಿ ಅಡ್ಡಿಪಡಿಸಬೇಡಿ, ತಾಳ್ಮೆಯಿಂದಿರಿ: ನ್ಯಾಯಮೂರ್ತಿ ಡಿವೈ ಚಂದ್ರಚೂಡ್

ನವದೆಹಲಿ: ಅಗ್ನಿಪಥ್​ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ನಲ್ಲಿ ಕೆಲವೊಂದು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಎಲ್ಲಾ ಅರ್ಜಿಗಳನ್ನು ಒಟ್ಟಿಗೇ ಹೈಕೋರ್ಟ್​ ನಡೆಸಲಿ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅಗ್ನಿಪಥ್ ನೇಮಕಾತಿ ಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್​ ದೆಹಲಿ ಹೈಕೋರ್ಟ್​ಗೆ ವರ್ಗಾಯಿಸಿದೆ.

ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್‌ಗೆ ಸೂಚಿಸಿದೆ. ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೂರು ಅರ್ಜಿಗಳು ಸಲ್ಲಿಕೆ ಯಾಗಿದ್ದವು. ಅಗ್ನಿಪಥ ಯೋಜನೆ ನಿಷೇಧಿಸ ಬೇಕು, ಇವುಗಳ ಕುರಿತು ಪುನರ್​ ಪರಿಶೀಲನೆ ಮಾಡಬೇಕು ಹಾಗೂ ಈ ಯೋಜನೆಯನ್ನು ಶಾಶ್ವತವಾಗಿ ರದ್ದು ಮಾಡಬೇಕು ಎಂದು ಮೂರು ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿತ್ತು.

ಇದನ್ನು ದೆಹಲಿ ಹೈಕೋರ್ಟ್​ಗೆ ವರ್ಗಾಯಿಸಿ ನ್ಯಾಯಮೂರ್ತಿಗಳು ಆದೇಶ ಹೊರಡಿಸುತ್ತಿರುವಾಗ ಅರ್ಜಿದಾರ ಮನೋಹರ್ ಲಾಲ್ ಶರ್ಮಾ ಏನನ್ನೋ ಹೇಳಲು ಮುಂದಾದಾಗ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಅಸಮಾಧಾನ ವ್ಯಕ್ತಪಡಿಸಿ, ನೀನು ಧೈರ್ಯಶಾಲಿಯಾಗಿರಬಹುದು, ಆದರೆ ಅಗ್ನಿವೀರ್ ಅಲ್ಲ ಎಂಬುದುನ್ನು ನೆನಪಿಡಿ. ನೀವು ಮುಂದೆ ಕೂಡ ಅಗ್ನಿವೀರರಾಗುವುದಿಲ್ಲ. ಆದ್ದರಿಂದ ಅನಗತ್ಯವಾಗಿ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಎಂದು ತರಾಟೆಗೆ ತೆಗೆದುಕೊಂಡರು.

ಅಗ್ನಿಪಥ್ ಯೋಜನೆ ವಿರುದ್ಧ ವಿವಿಧ ಹೈಕೋರ್ಟ್‌ಗಳಲ್ಲಿ 6 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಒಂದೇ ಸ್ಥಳದಲ್ಲಿ ನಡೆಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.