Thursday, 19th September 2024

SC verdict on Kejriwal bail: ಕೇಜ್ರಿವಾಲ್‌ಗೆ ಬೇಲ್‌- ಆಪ್‌ ಸಂಭ್ರಮಾಚರಣೆ; ಕೇವಲ ಜಾಮೀನು ಅಷ್ಟೇ ಎಂದು ಬಿಜೆಪಿ ಟಾಂಗ್‌

Arvind Kejriwal

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (Delhi Excise Policy Case) ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal)‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು (SC verdict on Kejriwal bail) ಮಾಡಿರುವ ಬೆನ್ನಲ್ಲೇ ಆಪ್‌(AAP) ನಾಯಕರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲದೇ ಇದು ಸತ್ಯಕ್ಕೆ ಸಂದ ಜಯ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಟಾಂಗ್‌ ಕೊಟ್ಟಿರುವ ಬಿಜೆಪಿ ಇದು ಕೇವಲ ಜಾಮೀನು ಅಷ್ಟೇ ಪ್ರಕರಣದಿಂದ ದೋಷಮುಕ್ತರಾಗಿದ್ದಲ್ಲ ಎಂದು ಹೇಳಿದೆ.

ಕೇಜ್ರಿವಾಲ್‌ಗೆ ಜಾಮೀನು ಮಂಜೂರಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ದಿಲ್ಲಿಯ ಮಾಜಿ ಡಿಸಿಎಂ ಮನೀಷ್‌ ಸಿಸೋಡಿಯಾ, ಕೋರ್ಟ್‌ ತೀರ್ಪಿನಿಂದ ಬಿಜೆಪಿಯ ಸುಳ್ಳು ಬಯಲಾಗಿದೆ. ಅರವಿಂದ ಕೇಜ್ರಿವಾಲ್‌ ಅವರಷ್ಟು ಸತ್ಯವಂತ, ಪ್ರಾಮಾಣಿಕ, ದೇಶಭಕ್ತ ಇನ್ನೊಬ್ಬರಿಲ್ಲ. ಅವರು ಜನರ ಜೀವನ ಮಟ್ಟ ಸುಧಾರಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಅವರನ್ನೇ ಜೈಲಿಗೆ ನೂಕಲಾಯಿತು. ಪ್ರಜಾಪ್ರಭುತ್ವದಲ್ಲಿ ಇದಕ್ಕಿಂತ ದೊಡ್ಡ ಪಾಪ ಕೃತ್ಯ ಇನ್ನೊಂದಿಲ್ಲ ಎಂದಿದ್ದಾರೆ.

ಕೇಜ್ರಿವಾಲ್‌ ಪತ್ನಿ ಸಂತಸ

ಮತ್ತೊಂದೆಡೆ ಪತಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾಮೀನು ದೊರೆತಿರುವ ಬಗ್ಗೆ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಸಂತಸ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ಆಪ್‌ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆಗಳು. ನಿಮ್ಮ ತಾಳ್ಮೆ, ದೃಢತೆಗೆ ಸಲಾಂ ಎಂದು ಪೋಸ್ಟ್‌ ಮಾಡಿದ್ದಾರೆ.

ಬಿಜೆಪಿ ಟಾಂಗ್‌

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ಕುರಿತು ಬಿಜೆಪಿ ನಾಯಕ ಗೌರವ್ ಭಾಟಿಯಾ ಪ್ರತಿಕ್ರಿಯಿಸಿದ್ದು, ಅಪ್ರಮಾಣಿಕ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮತ್ತೊಮ್ಮೆ ಕನ್ನಡಿ ತೋರಿಸಿದೆ. ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ‘ಜೈಲ್ ವಾಲಾ’ ಸಿಎಂ ಈಗ ‘ಬೇಲ್ ವಾಲಾ’ ಸಿಎಂ. ಅರವಿಂದ್ ಕೇಜ್ರಿವಾಲ್ ಸಿಎಂ ರಾಜೀನಾಮೆ ನೀಡಬೇಕೆನ್ನುವುದೇ ದಿಲ್ಲಿಯ ಜನ ಪ್ರಮುಖ ಆಗ್ರಹ. ಆದರೆ ಅವರಿಗೆ ಒಂದು ಹನಿ ನೈತಿಕತೆಯೂ ಇಲ್ಲ. ಆರೋಪ ಬಂದರೂ ರಾಜಿನಾಮೆ ನೀಡಬೇಕು ಎಂದು ಹೇಳುತ್ತಿದ್ದ ಅವರು 6 ತಿಂಗಳು ಜೈಲಿನಲ್ಲಿದ್ದರೂ ರಾಜೀನಾಮೆ ನೀಡುತ್ತಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: SC verdict on Kejriwal bail: ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್‌; ಜಾಮೀನು ನೀಡಿದ ಸುಪ್ರೀಂ