Friday, 20th September 2024

ವಿದ್ಯಾರ್ಥಿವೇತನ ಸಮಸ್ಯೆ: ಕಾಲೇಜು ತೊರೆದ ಎರಡು ಲಕ್ಷ ವಿದ್ಯಾರ್ಥಿಗಳು

ನವದೆಹಲಿ: ಪಂಜಾಬ್ ಸರ್ಕಾರವು ₹2,000 ಕೋಟಿಯಷ್ಟು ವಿದ್ಯಾರ್ಥಿವೇತನ ಪಾವತಿಸದ ಕಾರಣ, ಸುಮಾರು ಎರಡು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಎಂದು ಪರಿಶಿಷ್ಟ ಜಾತಿಗಾಗಿರುವ ರಾಷ್ಟ್ರೀಯ ಆಯೋಗ ಬುಧವಾರ ತಿಳಿಸಿದೆ.

‘ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನದ ಬಾಕಿ ಪಾವತಿಸಿದ್ದರೂ, ಕಾಲೇಜುಗಳಿಗೆ ಏಕೆ ಹಣವನ್ನು ಪಾವತಿಸಿಲ್ಲ ಎಂಬ ಬಗ್ಗೆ ಆಯೋಗವು ರಾಜ್ಯ ಸರ್ಕಾರವನ್ನು ಕೇಳಿದೆ. ನಾವು ಈ ವಿಷಯದಲ್ಲಿ ಸ್ವಯಂ ಪ್ರೇರಿತವಾಗಿ ಕ್ರಮ ತೆಗೆದುಕೊಂಡಿದ್ದೇವೆ. ಸರ್ಕಾರವು ತಮ್ಮ ಶುಲ್ಕವನ್ನು ಪಾವತಿಸದ ಕಾರಣ ಕಾಲೇಜುಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ಎನ್‌ಸಿಎಸ್‌ಸಿ ಅಧ್ಯಕ್ಷ ವಿಜಯ್ ಸಂಪ್ಲಾ ತಿಳಿಸಿದರು.

2017ರಲ್ಲಿ ಸುಮಾರು ಮೂರು ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನ ಪಡೆದಿದ್ದರು. 2020ರಲ್ಲಿ ಈ ಸಂಖ್ಯೆ 1 ರಿಂದ 1.25 ಲಕ್ಷಕ್ಕೆ ಇಳಿದಿದೆ.

ವಿದ್ಯಾರ್ಥಿಗಳು ತೊರೆದಿರುವ ಕಾಲೇಜುಗಳಿಗೆ ರಾಜ್ಯ ಸರ್ಕಾರ ₹2000 ಕೋಟಿ ರೂ.ಗಳ ಬಾಕಿ ಪಾವತಿಸಬೇಕಿದ್ದು, ಕೇಂದ್ರದಿಂದ ಯಾವುದೇ ಬಾಕಿ ನೀಡಬೇಕಿಲ್ಲ ಎಂಬುದು ಸಭೆಯಲ್ಲಿ ತಿಳಿದುಬಂದಿದೆ. ಕಾಲೇಜುಗಳಿಗೆ ಬಾಕಿ ಪಾವತಿಸಬೇಕಾಗಿದ್ದ ಹಣ ಎಲ್ಲಿಗೆ ಹೋಯಿತು?’ ಎಂದು ಅವರು ಪ್ರಶ್ನಿಸಿದರು.

ಮುಂದಿನ ಬುಧವಾರದೊಳಗೆ ವಿದ್ಯಾರ್ಥಿ ವೇತನ ಬಾಕಿ ಕುರಿತಂತೆ ವಿವರಣೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಸಂಪ್ಲಾ ಹೇಳಿದ್ದಾರೆ.

ಇದೇ ವೇಳೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆದಿದ್ದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ಮಾಡುವಂತೆ ಕಳೆದ ವಾರ ಆದೇಶಿಸಿದ್ದಾರೆ.