Thursday, 19th September 2024

ಆಂಜನೇಯ ಸ್ವಾಮಿ ಪ್ರತಿಮೆ ಸ್ಥಾಪನೆ ವಿಚಾರ: ನಿಷೇಧಾಜ್ಞೆ ಜಾರಿ

ಭೋಪಾಲ್‌: ಮಧ್ಯಪ್ರದೇಶದ ನೀಮಚ್‌ ಜಿಲ್ಲೆಯಲ್ಲಿ ಆಂಜನೇಯ ಸ್ವಾಮಿ ಪ್ರತಿಮೆ ಸ್ಥಾಪನೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಹಿನ್ನೆಲೆಯಲ್ಲಿ ನೀಮಚ್‌ ನಗರ ದಾದ್ಯಂತ ಸಿಆರ್ ಪಿಸಿ 144 ಸೆಕ್ಷನ್‌ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನೀಮಚ್‌ ನಗರದ ಹಳೇ ಕೋರ್ಟ್ ಪ್ರದೇಶದಲ್ಲಿರುವ ದರ್ಗಾದಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ಹನುಮಂತನ ಪ್ರತಿಮೆ ಸ್ಥಾಪಿಸಿದೆ. ಇದು ಎರಡು ಸಮುದಾಯಗಳ ನಡುವೆ ಮಾರಾಮಾರಿಗೆ ಮತ್ತು ಕಲ್ಲು ತೂರಾಟಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಮೂರು ದಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ನೀಮಚ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇಹಾ ಮೀನಾ ಅವರು, ಪೂರ್ವಾನುಮತಿಯಿಲ್ಲದೇ ಮೆರವಣಿಗೆ, ಧರಣಿ, ಸಭೆಗಳನ್ನು ಆಯೋಜಿಸಲು ಸಂಪೂರ್ಣ ನಿಷೇಧ ವಿಧಿಸಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅನುಮತಿ ಇಲ್ಲದೇ ಸಭೆ ಅಥವಾ ಸಮಾರಂಭ ಆಯೋಜಿಸುವಂತಿಲ್ಲ. ಧ್ವನಿವರ್ಧಕಗಳ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.