Friday, 20th September 2024

Sexual Abuse : ಹಾಡಹಗಲೇಮಹಿಳೆಯ ಅತ್ಯಾಚಾರ; ತಪ್ಪಿಸುವ ಬದಲು ವಿಡಿಯೊ ಚಿತ್ರೀಕರಿಸಿ ವೈರಲ್ ಮಾಡಿದ ದಾರಿಹೋಕ!

Sexual Abuse

ಬೆಂಗಳೂರು: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನನಿಬಿಡ ರಸ್ತೆಯಲ್ಲಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ(Sexual Abuse) . ಸ್ಥಳದಲ್ಲಿದ್ದ ಜನರು ಮಧ್ಯಪ್ರವೇಶಿಸುವ ಬದಲು ಲೈಂಗಿಕ ದೌರ್ಜನ್ಯದ ಕೃತ್ಯವನ್ನು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಶೀಘ್ರವಾಗಿ ವೈರಲ್ ಆಗಿದ್ದು ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತಗೊಂಡಿವೆ. ಪ್ರಮುಖವಾಗಿ ಜನರ ಮನಸ್ಥಿತಿ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ.

ನಗರದ ಅತ್ಯಂತ ಜನನಿಬಿಡ ಜಂಕ್ಷನ್ ಗಳಲ್ಲಿ ಒಂದಾದ ಕೊಯ್ಲಾ ಫಟಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅತ್ಯಾಚಾರ ಮಾಡಿರುವ ಆರೋಪಿಯನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ಚಿಂದಿ ಆಯುವವ ಕೆಲಸ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಲೋಕೇಶ್ ಆಕೆಯನ್ನು ಭೇಟಿಯಾಗಿದ್ದ. ಮದುವೆಯ ಮಾಡಿಕೊಳ್ಳುವ ನೆಪದಲ್ಲಿ ಆಕೆಯನ್ನು ಆಕರ್ಷಿಸ ತನ್ನೊಂದಿಗೆ ಬರುವಂತೆ ಮನವೊಲಿಸಿದ್ದ.

ಆರೋಪಿ ಲೋಕೇಶ್‌ ಮಹಿಳೆಗೆ ಮದ್ಯಪಾನ ಮಾಡಿಸಿದ್ದ. ಆಕೆ ನಶೆಯಲ್ಲಿದ್ದಾಗ, ಅವನು ಅವಳನ್ನು ರಸ್ತೆ ಬದಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಪ್ರತ್ಯಕ್ಷದರ್ಶಿಯೊಬ್ಬರು ಅವರನ್ನು ಬಿಡಿಸುವ ಬದಲು ಚಿತ್ರೀಕರಿಸಿ ವೀಡಿಯೊವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಆರೋಪಿ ಮಹಿಳೆಗೆ ಬೆದರಿಕೆ ಹಾಕಿದ ನಂತರ ಸ್ಥಳದಿಂದ ಪರಾರಿಯಾಗಿದ್ದ.

ಇದನ್ನೂ ಓದಿ: RG Kar Hospital: CBI ಕೇಸ್‌ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಸಂದೀಪ್‌ ಘೋಷ್‌ಗೆ ಮುಖಭಂಗ

ವೈರಲ್ ವೀಡಿಯೊದ ಬಳಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿಸಿದ್ದಾರೆ. ಬಳಿಕ ಆಕೆಯನ್ನು ಠಾಣೆಗೆ ಕರೆದೊಯ್ಡು ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿಡಿಯೊ ಆಧಾರದಲ್ಲಿ ಆರೋಪಿ ಲೋಕೇಶ್‌ನನ್ನು ಬಂಧಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಆಡಳಿತಾರೂಢ ಬಿಜೆಪಿ ಕಾರಣ ಎಂದು ಹೇಳಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಲೈಂಗಿಕ ದೌರ್ಜನ್ಯದ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಪವಿತ್ರ ನಗರವಾದ ಉಜ್ಜಯಿನಿ ಮತ್ತೊಮ್ಮೆ ನಾಚಿಕೆ ಪಡುವಂತಾಗಿದೆ. ಅಧಿಕಾರದಲ್ಲಿರುವವರು ನಾಚಿಕೆಯಿಂದ ಸಾಯಬೇಕು ಅಥವಾ ರಾಜೀನಾಮೆ ನೀಡಬೇಕು” ಎಂದು ಹೇಳಿಕೆ ನೀಡಿದೆ.

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಟ್ವೀಟ್ ಮಾಡಿ, “ಪವಿತ್ರ ನಗರ ಉಜ್ಜಯಿನಿ ಮತ್ತೊಮ್ಮೆ ಕಳಂಕಿತವಾಗಿದೆ. ಮಧ್ಯಪ್ರದೇಶದಲ್ಲಿ ಈಗ ಹಾಡಹಗಲೇ ತೆರೆದ ಬೀದಿಗಳಲ್ಲಿ ಅತ್ಯಾಚಾರಗಳು ನಡೆಯುತ್ತಿವೆ. ಕಾನೂನು ಮತ್ತು ಸರ್ಕಾರ ಸಂಪೂರ್ಣವಾಗಿ ಕಣ್ಮರೆಯಾದಾಗ ಮಾತ್ರ ಇದು ಸಾಧ್ಯ. ಮುಖ್ಯಮಂತ್ರಿಗಳ ತವರು ಜಿಲ್ಲೆಯ ಪರಿಸ್ಥಿತಿ ಹೀಗಿದ್ದರೆ, ರಾಜ್ಯದ ಉಳಿದ ಭಾಗಗಳ ಸ್ಥಿತಿಯನ್ನು ಊಹಿಸಬಹುದು ಎಂದು ಬರೆದುಕೊಂಡಿದ್ದಾರೆ.