Thursday, 24th October 2024

Shivaji statue Collapsed: ಶಿವಾಜಿ ಪ್ರತಿಮೆ ಕುಸಿತ; ಪ್ರತಿಪಕ್ಷಗಳಿಂದ ಚಪ್ಪಲಿ ಹಿಡಿದು ಜೋಡೆ ಮಾರೋ ಪ್ರೊಟೆಸ್ಟ್‌

Shivaji statue collapsed

ಮುಂಬೈ: ಲೋಕಾರ್ಪಣೆಗೊಂಡು ಒಂದೇ ವರ್ಷ ಪೂರೈಸುವ ಮುನ್ನವೇ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು(Shivaji statue Collapsed) ಬಿದ್ದಿರುವ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಪ್ರತಿಪಕ್ಷ ಮಹಾ ವಿಕಾಸ್‌ ಅಘಾಡಿ(MVA) ರಾಜ್ಯ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನೆ ಕೈಗೊಂಡಿದೆ. ಜೋಡೆ ಮಾರೋ ಆಂದೋಲನ(ಚಪ್ಪಲಿಯಲ್ಲಿ ಹೊಡೆಯಿರಿ) ಎಂಬ ವಿನೂತನ ಪ್ರತಿಭಟನೆ ಕೈಗೆತ್ತಿಕೊಂಡಿರುವ MVA ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಗೊಂಡ ಕೇವಲ ಎಂಟೇ ತಿಂಗಳಲ್ಲಿ ಕುಸಿದು ಬಿದ್ದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಆಡಳಿತದಲ್ಲಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕಿಡಿ ಕಾರಿವೆ. ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಪ್ರತಿಮೆ ನಿರ್ಮಾಣದ ವಿಷಯದಲ್ಲಿ ಆಡಳಿತಾರೂಢ ಸರ್ಕಾರದ ಭ್ರಷ್ಟಾಚಾರ ಎಸಗಿದೆ. ಅದರ ಪರಿಣಾಮವಾಗಿಯೇ ಇಂತಹ ದುರಂತ ಸಂಭವಿಸಿದೆ ಎಂದು ದೂರಿದೆ. ಅಲ್ಲದೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆಗೆ ಒತ್ತಾಯಿಸಿತ್ತು. ಇಂದು  ಇದರ ಮುಂದುವರೆದ ಭಾಗವಾಗಿ ಹುತಾತ್ಮ ಚೌಕ್‌ರಿಂದ ಇಂಡಿಯಾ ಗೇಟ್‌ವರೆಗೆ ಎಂವಿಎ ಚಪ್ಪಲಿ ಕೈಯಲ್ಲಿ ಹಿಡಿದು ಮೆರವಣಿಗೆ ನಡೆಸಿ ಪ್ರತಿಭಟನೆ ಕೈಗೆತ್ತಿಕೊಂಡಿದೆ.

ಇನ್ನು ಈ ವೇಳೆ ಮಾತನಾಡಿದ ಸಂಸದ ಅರವಿಂದ ಸಾವಂತ್‌, ಶಿವಾಜಿ ಮಹಾರಾಜ್‌ ನಮಗೆ ದೇವರಿದ್ದಂತೆ. ಅವರ ಪ್ರತಿಮೆ ಕುಸಿದು ಬೀಳುವ ಮೂಲಕ ನಮ್ಮ ಭಕ್ತಿ, ಗೌರವ, ಸ್ವಾಭಿಮಾನವೂ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ:  https://x.com/ANI/status/1830108822838657371

ಏನಿದು ಪ್ರಕರಣ?

ಕಳೆದ ವರ್ಷ ಡಿಸೆಂಬರ್ 4 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಸಿಂಧುದುರ್ಗದಲ್ಲಿ ಮೊದಲ ಬಾರಿಗೆ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ಪ್ರತಿಮೆಯು ಮರಾಠಾ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕಡಲ ರಕ್ಷಣೆ ಮತ್ತು ಭದ್ರತೆಯ ಪರಂಪರೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ ಮತ್ತು ಆಧುನಿಕ ಭಾರತೀಯ ನೌಕಾಪಡೆಯೊಂದಿಗೆ ಅದರ ಐತಿಹಾಸಿಕ ಸಂಬಂಧವನ್ನು ಹೊಂದಿದೆ.   35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಇನ್ನು ಈ ಘಟನೆ ತನಿಖೆಗಾಗಿ ಭಾರತೀಯ ನೌಕಾಪಡೆಯ ನೇತೃತ್ವದ ಜಂಟಿ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಮತ್ತು ತಾಂತ್ರಿಕ ತಜ್ಞರ ಪ್ರತಿನಿಧಿಗಳೊಂದಿಗೆ ರಚಿಸಲಾಗುತ್ತಿದೆ. ಸಿಂಧುದುರ್ಗದ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಪತನಗೊಂಡ ಪ್ರತಿಮೆಯ ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ಅವರನ್ನು ಗುರುವಾರ ರಾತ್ರಿ ಕೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಈ ಘಟನೆ ನಡೆದಿದ್ದು, ಬಳಿಕ ಪಾಟೀಲ್ ಪರಾರಿಯಾಗಿದ್ದರು, ಇದು ಭಾರೀ ಸಾರ್ವಜನಿಕ ಆಕ್ರೋಶ ಮತ್ತು ರಾಜಕೀಯ ಕೋಲಾಹಲವನ್ನು ಹುಟ್ಟುಹಾಕಿತ್ತು. ಇನ್ನು ಪ್ರತಿಮೆಯ ನಿರ್ಮಿಸಿದ ಶಿಲ್ಪಿ ಜಯದೀಪ್ ಆಪ್ಟೆ ಇನ್ನೂ ಪೊಲೀಸ್ ಕಣ್ತಪ್ಪಿಸಿ ಭುಗತಗೊಂಡಿದ್ದಾರೆ. ಕೊಲ್ಹಾಪುರ ಪೊಲೀಸರು, ಸಿಂಧುದುರ್ಗ ಪೊಲೀಸರು ಮತ್ತು ಥಾಣೆ ಪೊಲೀಸರ ಕನಿಷ್ಠ ಆರು ತನಿಖಾ ತಂಡಗಳು ಪಾಟೀಲ್‌ ಮತ್ತು ಆಪ್ಟೆಯ ಪತ್ತೆಗಾಗಿ ಬಲೆ ಬೀಸಿದ್ದವು. ಭಾರೀ ಹುಡುಕಾಟದ ಬಳಿಕ ನಿನ್ನೆ ರಾತ್ರಿ ಪಾಟೀಲ್ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ ಈ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi)ಕ್ಷಮೆಯಾಚಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ದೇವರು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ತಲೆಬಾಗಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ