Thursday, 19th September 2024

Shot Dead: ಗೋಕಳ್ಳನೆಂದು ತಪ್ಪಾಗಿ ಭಾವಿಸಿ 30ಕಿ.ಮೀ ಚೇಸ್‌ ಮಾಡಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದೇ ಬಿಟ್ರು!

shot dead

ನವದೆಹಲಿ: ಗೋವು ಕಳ್ಳ(Cow Smuggler)ನೆಂದು ಭಾವಿಸಿ ಪಿಯುಸಿ ವಿದ್ಯಾರ್ಥಿಯೊಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣದ ಫರಿದಾಬಾದ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ದನ ಕಳ್ಳಸಾಗಣೆದಾರನೆಂದು ತಪ್ಪಾಗಿ ಭಾವಿಸಿ ಗೋರಕ್ಷಕರು ಕಾರಿನಲ್ಲಿ ಹಿಂಬಾಲಿಸಿ ಹತ್ಯೆ(Shot Dead)ಗೈದಿದ್ದಾರೆ.  ಇನ್ನು ಆಗಸ್ಟ್ 23 ರಂದು ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಆರ್ಯನ್‌ ಮಿಶ್ರಾ ಎಂದು ಗುರುತಿಸಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: 

ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್ಯನ್ ಮಿಶ್ರಾ ಮತ್ತು ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು, ಇವರನ್ನು ಗಮನಿಸಿದ ಆರೋಪಿಗಳು ಅವರ ಕಾರನ್ನು ಸುಮಾರು 30 ಕಿಲೋಮೀಟರ್ ವರೆಗೆ ಅವರ ಹಿಂಬಾಲಿಸಿದರು. ಕೊನೆಗೆ ಹರಿಯಾಣದ ಗಧಪುರಿ ಬಳಿ ಆರ್ಯನ್‌ ಮಿಶ್ರಾಗೆ ಶೂಟ್‌ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಆರ್ಯನ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಆರೋಪಿಗಳನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಆರ್ಯನ್ ಮಿಶ್ರಾ ಮತ್ತು ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ  ಅವರ ಕಾರನ್ನು ಹಿಂಬಾಲಿಸಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವು ಜಾನುವಾರು ಕಳ್ಳಸಾಗಣೆದಾರರು ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿತ್ತು.

ಬಂಧಿತ ಆರೋಪಿಗಳು ಜಾನುವಾರು ಕಳ್ಳಸಾಗಾಣಿಕೆದಾರರನ್ನು ಹುಡುಕುತ್ತಿದ್ದಾಗ ಪಟೇಲ್ ಚೌಕ್‌ನಲ್ಲಿ ಡಸ್ಟರ್ ಕಾರನ್ನು ನೋಡಿದ್ದಾರೆ. ನಂತರ ಕಾರು ಚಾಲಕ ಹರ್ಷಿತ್ ನನ್ನು ನಿಲ್ಲಿಸುವಂತೆ ಹೇಳಿದರು. ಆದಾಗ್ಯೂ, ಆರ್ಯನ್ ಮತ್ತು ಅವನ ಸ್ನೇಹಿತರು ನಿಲ್ಲಿಸಲಿಲ್ಲ. ಯಾರೋ ತಮ್ಮ ವಿರೋಧಿಗಳು ಕೊಲ್ಲಲು ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಅವರು ಭಾವಿಸಿ ಕಾರನ್ನು ವೇಗವಾಗಿ ಚಲಾಯಿಸಿದ್ದರು. ಅವರು ನಿಲ್ಲಿಸದ ಕಾರಣ, ಆರೋಪಿಗಳು ಕಾರಿಗೆ ಗುಂಡು ಹಾರಿಸಿದರು ಮತ್ತು ಗುಂಡು ಪ್ರಯಾಣಿಕರ ಸೀಟಿನಲ್ಲಿದ್ದ ಆರ್ಯನ್ ಅವರ ಕುತ್ತಿಗೆಗೆ ತಗುಲಿತು.

ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಆರ್ಯನ್‌ನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಇನ್ನು ಆರೋಪಿಗಳಿಂದ ಅಕ್ರಮ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ.