Sunday, 22nd September 2024

Anura Kumara Dissanayake : ಮಾರ್ಕ್ಸ್‌ವಾದಿ ದಿಸ್ಸಾನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷ

Anura Kumara Dissanayake

ಕೊಲೊಂಬೊ: ಮಾರ್ಕ್ಸ್‌ವಾದಿ ನಿಲುವು ಹೊಂದಿರುವ (ಪೀಪಲ್ಸ್ ಲಿಬರೇಶನ್ಸ್‌ ಫ್ರಂಟ್‌ ಪಕ್ಷದ ) ಅನುರಾ ಕುಮಾರ ದಿಸ್ಸಾನಾಯಕೆ (Anura Kumara Dissanayake) ಭಾನುವಾರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ (Srilanka President) ಚುನಾಯಿತರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮತ್ತು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಅನುರಾ ಕುಮಾರ ದಿಸ್ಸಾನಾಯಕೆ ಅವರ ಭರವಸೆಯನ್ನು ನಂಬಿದ ಅಲ್ಲಿನ ಮತದಾರರು ಮತಗಳನ್ನು ಹಾಕಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಕೆಲವು ಪ್ರತಿಸ್ಪರ್ಧಿಗಳಂತೆ ಯಾವುದೇ ರಾಜಕೀಯ ವಂಶಾವಳಿ ಹೊಂದಿರದ ದಿಸ್ಸಾನಾಯಕೆ ಕೊನೆವರೆಗೂ ಮುನ್ನಡೆ ಸಾಧಿಸಿ ಗೆದ್ದಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Vikramasinghe) ಮತ್ತು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದ ಅನುವಾರ ಶ್ರೀಲಂಕಾದ 10ನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಪೀಪಲ್ಸ್ ಲಿಬರೇಶನ್ ಫ್ರಂಟ್‌ 55 ವರ್ಷದ ನಾಯಕ ಅನುರಾ ಕುಮಾರ ದಿಸ್ಸಾನಾಯಕ ಅವರು ಶೇಕಡಾ 42.31 ರಷ್ಟು ಮತಗಳೊಂದಿಗೆ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ ಎಂದು ಶ್ರೀಲಂಕಾದ ಚುನಾವಣಾ ಆಯೋಗ ತಿಳಿಸಿದೆ. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಶೇ.32.76 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ರಾಷ್ಟ್ರದ ದುರ್ಬಲ ಆರ್ಥಿಕ ಚೇತರಿಕೆಯ ನೇತೃತ್ವ ವಹಿಸಿದ್ದ ವಿಕ್ರಮಸಿಂಘೆ 17% ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.

1970 ಮತ್ತು 1980 ರ ದಶಕಗಳಲ್ಲಿ ದಿಸ್ಸಾನಾಯಕಾ ವರ ಮಾರ್ಕ್ಸ್‌ವಾದ ಪಕ್ಷವು ಎರಡು ವಿಫಲ ದಂಗೆಗಳನ್ನು ಮುನ್ನಡೆಸಿತ್ತು. ಇದು 80,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು.

ಶ್ರೀಲಂಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಸ್ಪರ್ಧೆಯನ್ನು ಎರಡನೇ ಸುತ್ತಿನ ಎಣಿಕೆಯ ಮೂಲಕ ನಿರ್ಧರಿಸಲಾಯಿತು. ಅಗ್ರ ಇಬ್ಬರು ಅಭ್ಯರ್ಥಿಗಳು ಕಡ್ಡಾಯ 50% ಮತಗಳನ್ನು ಗೆಲ್ಲಲು ವಿಫಲರಾದರು. 2024 ರ ರಾಷ್ಟ್ರಪತಿ ಚುನಾವಣೆಯಲ್ಲಿ ದಿಸ್ಸಾನಾಯಕೆ ಮತ್ತು ಪ್ರೇಮದಾಸ ಗರಿಷ್ಠ ಮತಗಳನ್ನು ಪಡೆದಿದ್ದರೂ, ಇಬ್ಬರೂ ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಪಡೆದಿಲ್ಲ, ಆದ್ದರಿಂದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಸಿ ದಿಸ್ಸಾನಾಯಕ ಅವರ ಮುನ್ನಡೆಯನ್ನು ಪರಿಗಣಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧ್ಯಕ್ಷ ಆರ್.ಎಂ.ಎ.ಎಲ್.ರತ್ನನಾಯಕೆ ಹೇಳಿದ್ದಾರೆ.

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯು ಪ್ರಾಶಸ್ತ್ಯದ ಮತದಾನ ವ್ಯವಸ್ಥೆ ಬಳಸುತ್ತದೆ. ಅಲ್ಲಿ ಮತದಾರರು ಪ್ರಾಶಸ್ತ್ಯ ಕ್ರಮದಲ್ಲಿ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಒಬ್ಬ ಅಭ್ಯರ್ಥಿಯು ಮೊದಲ ಆಯ್ಕೆಯ ಮತಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪಡೆದರೆ ಅದು ಸಂಪೂರ್ಣ ಬಹುಮತವಾಗಿರುತ್ತದೆ. ಇಲ್ಲದಿದ್ದರೆ ಎರಡನೇ ಸುತ್ತಿನ ಎಣಿಕೆ ಪ್ರಾರಂಭವಾಗುತ್ತದೆ. ನಂತರ ಎರಡನೇ ಮತ್ತು ಮೂರನೇ ಆಯ್ಕೆಯ ಮತಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಶ್ರೀಲಂಕಾದಲ್ಲಿ ಇತಿಹಾಸದಲ್ಲಿ ಇದುವರೆಗೆ ಎರಡನೇ ಸುತ್ತಿನ ಎಣಿಕೆ ಮಾಡಿಲ್ಲ. ಏಕೆಂದರೆ ಮೊದಲ ಆದ್ಯತೆಯ ಮತಗಳ ಆಧಾರದ ಮೇಲೆ ಅಭ್ಯರ್ಥಿಗಳು ಯಾವಾಗಲೂ ಸ್ಪಷ್ಟ ವಿಜೇತರಾಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ: Yogi Adityanath : ಹಳೆ ಪಾರ್ಟಿ ಕಾಂಗ್ರೆಸ್‌ ಬಾಬರಿ ಮಸೀದಿಯಷ್ಟು ಶಿಥಿಲಗೊಂಡಿದೆ ಎಂದು ಲೇವಡಿ ಮಾಡಿದ ಯೋಗಿ

ಕೊಲಂಬೋದ ರಾಷ್ಟ್ರಪತಿ ಸಚಿವಾಲಯದಲ್ಲಿ ಸೋಮವಾರ ಬೆಳಿಗ್ಗೆ ದಿಸ್ಸಾನಾಯಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.ಎಂಟು ವಾರಗಳ ಅಭಿಯಾನದಲ್ಲಿ ಆರ್ಥಿಕ ವಿಷಯಗಳು ಮೇಲುಗೈ ಸಾಧಿಸಿದವು, ಎರಡು ವರ್ಷಗಳ ಹಿಂದೆ ಬಿಕ್ಕಟ್ಟಿನ ಉತ್ತುಂಗದಿಂದ ಅನುಭವಿಸಿದ ಕಷ್ಟಗಳ ಬಗ್ಗೆ ವ್ಯಾಪಕ ಸಾರ್ವಜನಿಕ ಆಕ್ರೋಶವಿತ್ತು.

ಆರ್ಥಿಕ ಚೇತರಿಕೆಯ ಸವಾಲು

ಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಸುಧಾರಣೆಯಾಗಿಲ್ಲ. ಹಿಂದಿನ ಅಧ್ಯಕ್ಷರಾದ ವಿಕ್ರಮ ಸಿಂಘೆ ಚೇತರಿಕೆಗಾಗಿ ಮಿತವ್ಯಯದ ಕಾನೂನುಗಳನ್ನು ತಂದಿದ್ದರು. ಅದು ಜನ ವಿರೋಧವಾಗಿ ಮಾರ್ಪಟ್ಟು ಸೋಲಿಗೆ ಕಾಣವಾಯಿತು. ಹೀಗಾಗಿ ದಿಸ್ಸಾನಾಯಕೆ ಅವರಿಗೂ ಈ ಸವಾಲು ಇದೆ.

ದಿಸ್ಸಾನಾಯಕ ಅವರು ಐಎಂಎಫ್ ಒಪ್ಪಂದವನ್ನು ಕಿತ್ತುಹಾಕುವುದಿಲ್ಲ ಆದರೆ ಅದನ್ನು ಮಾರ್ಪಡಿಸಲು ಪ್ರಯತ್ನಿಸುತ್ತಾರೆ ಎಂದು ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರೊಬ್ಬರು ತಿಳಿಸಿದ್ದಾರೆ. ಆದರೆ, ವಿಕ್ರಮಸಿಂಘೆ ಆಡಳಿತದಲ್ಲಿ ದ್ವಿಗುಣಗೊಳಿಸಿದ ಆದಾಯ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಮತ್ತು ಆಹಾರ ಮತ್ತು ಔಷಧಿಗಳ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ.