Thursday, 19th September 2024

ಔಷಧಿ ತಯಾರಿಕಾ ಘಟಕದಲ್ಲಿ ಸ್ಫೋಟ: ಮೂವರ ಸಾವು

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೌರಿಪಟ್ನಂನಲ್ಲಿ ಔಷಧಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.
ಜಿಲ್ಲಾಧಿಕಾರಿ ಕೆ.ಮಾಧವಿ ಲತಾ ಅವರು ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟಕ ದಲ್ಲಿನ ನಿರ್ವಹಣಾ ಕೊರತೆಯೇ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯು ತ್ತಿದೆ. ಗೌರಿಪಟ್ಟಣಂನಲ್ಲಿರುವ ವಿಷನ್ ಡ್ರಗ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲೆಂದು ಮುಂದಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚಿನ ತಾಪಮಾನದಿಂದಾಗಿ ಉಂಟಾದ ಒತ್ತಡದಿಂದ ಪೈಪ್ಲೈನ್ ಸ್ಫೋಟಗೊಂಡಿದ್ದು, ಉಪ ವ್ಯವಸ್ಥಾಪಕರು, ಶಿಫ್ಟ್ ಇನ್ಚಾರ್ಜ್ ಮತ್ತು ರಸಾಯನಶಾಸ್ತ್ರಜ್ಞರು ಕೆಲಸದಲ್ಲಿದ್ದರು’ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದ ಪ್ರಭಾವ ಎಷ್ಟರಮಟ್ಟಿಗಿತ್ತು ಎಂದರೆ, ಒಡೆದ ಗಾಜಿನ ಚೂರುಗಳು ಮತ್ತು ತಗಡಿನ ಹಾಳೆಗಳು ಹಾರಿ ಅಲ್ಲಿದ್ದ ಮೂವರಿಗೆ ಚುಚ್ಚಿವೆ. ಈ ವೇಳೆ ಘಟಕದಲ್ಲಿದ್ದ ಇತರ ಕಾರ್ಮಿಕರು ಈ ಮೂವರನ್ನು ಕೊವ್ವೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.