Sunday, 22nd September 2024

Tirupati Laddoo Row: ಕಠಿಣ ಪ್ರಾಯಶ್ಚಿತ ಕಾರ್ಯ ಆರಂಭಿಸಿದ ಆಂ‍ಧ್ರ ಡಿಸಿಎಂ ಪವನ್‌ ಕಲ್ಯಾಣ

Tirupati laddoo

ಹೈದ್ರಾಬಾದ್‌: ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddoo Row) ಆಗಿರುವುದಕ್ಕೆ ಭಗವಂತ ವೆಂಕಟೇಶ್ವರನನ್ನು ಸಂತೈಸಲು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್(Pawan Kalyan) 11 ದಿನಗಳ ಕಠಿಣ ಪ್ರಾಯಶ್ಚಿತ ವೃತವನ್ನು ಇಂದಿನಿಂದ ಆರಂಭಿಸಿದ್ದಾರೆ. 11 ದಿನಗಳ ಕಠಿಣ ವೃತಾಚರಣೆ ಬಳಿಕ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡುವುದಾಗಿ ಅವರು ಘೋಷಿಸಿದ್ದಾರೆ.

ಅವರು ಇಂದು ಗುಂಟೂರು ಜಿಲ್ಲೆಯ ನಮ್ಮೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಪಾಪ ಪ್ರಾಯಶ್ಚಿತ ಕಾರ್ಯವನ್ನು ಆರಂಭಿಸಿದ್ದಾರೆ. ಇದು ಪೂರ್ಣಗೊಂಡ ಬಳಿಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಪಡೆಯಲಿದ್ದಾರೆ.

ಈ ಕುರಿತು ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಹಿಂದಿನ ಸರ್ಕಾರದ ಹೀನ ಧೋರಣೆಯಿಂದ ಪವಿತ್ರ ಎನಿಸುವ ತಿರುಮಲ ಲಡ್ಡು ಪ್ರಸಾದ ಅಶುದ್ಧವಾಗಿದೆ. ಭಕ್ತರು ಮೋಸ ಹೋಗಿದ್ದಾರೆ. ಆರಂಭದಲ್ಲಿ ಈ ಪಾಪದ ಅರಿವು ನಮಗೆ ಬಂದಿಲ್ಲ ಎಂಬುದು ನನಗೆ ನೋವುಂಟು ಮಾಡಿದೆ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರೂ ಕಲಿಯುಗದ ದೇವತೆಗೆ ಮಾಡಿದ ಭಯಾನಕ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಅವರು ನಂಬುತ್ತಾರೆ. ಹೀಗಾಗಿ ನಾನು ಈ ಪ್ರಾಯಶ್ಚಿತ ಕಾರ್ಯ ಮಾಡುತ್ತಿದ್ದೇನೆ ಎಂದು ಪವನ್ ಕಲ್ಯಾಣ್‌ ಹೇಳಿದ್ದಾರೆ. ಇನ್ನು ಕಠಿಣ ಪ್ರಾಯಶ್ಚಿತ ಕ್ರಿಯೆ ಪೂರ್ಣಗೊಂಡ ಬಳಿ ಅ.1ಅಥವಾ 2ರಂದು ತಿರುಪತಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಇತ್ತೀಚೆಗೆ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ವೈಎಸ್ಆರ್‌ಪಿ ಸರ್ಕಾರವು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಸಹ ಬಿಡಲಿಲ್ಲ. ಪವಿತ್ರ ತಿರುಪತಿ ಲಡ್ಡುಗಳನ್ನು ತಯಾರಿಸಲು ಕಳಪೆ ಗುಣಮಟ್ಟದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಆರೋಪಿಸಿದ್ದರು. ನಾಯ್ಡು ಅವರ ಆರೋಪಗಳು ದೇಶಾದ್ಯಂತ ಭಾರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದವು.

ಈ ಸುದ್ದಿಯನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ವಿವಾದ; ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಶಾಕಿಂಗ್‌ ಮಾಹಿತಿ ಬಹಿರಂಗ