Thursday, 24th October 2024

ನವೆಂಬರ್ 10ರಂದು ದಕ್ಷಿಣ ಭಾರತಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ

ವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲು ದಕ್ಷಿಣ ಭಾರತ ಕ್ಕೂ ಪ್ರವೇಶಿಸಲಿದ್ದು, ಚೆನ್ನೈ-ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವೆಂಬರ್ 10ರಂದು ದಕ್ಷಿಣ ಭಾರತದಲ್ಲಿ ಪ್ರಯಾಣ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಚೆನ್ನೈ-ಬೆಂಗಳೂರು-ಮೈಸೂರು ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ಒಟ್ಟು 483 ಕಿ.ಮೀ. ದೂರ ವನ್ನು ಕ್ರಮಿಸಲಿದೆ.

ಚುನಾವಣೆ ಸಮೀಪಿಸುತ್ತಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗಷ್ಟೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನು ಭಾರತೀಯ ರೈಲ್ವೆ ಬಿಡುಗಡೆಗೊಳಿಸಿತ್ತು. ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.

ವಂದೇ ಭಾರತ್ 2.0 ರೈಲುಗಳು, ‘ಕವಚ’ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯ ಗಳನ್ನು ಹೊಂದಿದೆ.

ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕಿ.ಮೀ. ವೇಗವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ.