Tuesday, 24th September 2024

Bengaluru Woman Murder: ಪ್ರೇಯಸಿಯನ್ನು ಕೊಚ್ಚಿ ಫ್ರಿಜ್‌ನಲ್ಲಿ ತುಂಬಿದ ಪಾತಕಿ ಪಶ್ಚಿಮ ಬಂಗಾಳದಲ್ಲಿ ಕಣ್ಮರೆ

bengaluru woman murder case

ಬೆಂಗಳೂರು: ರಾಜಧಾನಿಯ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಎಂಬಾಕೆಯನ್ನು ಕೊಂದು ಕೊಚ್ಚಿ ಪೀಸ್‌ಗಳನ್ನು ಫ್ರಿಜ್‌ನಲ್ಲಿ ತುಂಬಿದ್ದ ಪಾತಕಿ (Bengaluru Woman Murder case) ಆಕೆಯ ಜೊತೆಯೇ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದವನು (Woman murder culprit) ಹಾಗೂ ಇದೀಗ ಆತ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದಾನೆ ಎಂದು ಗೊತ್ತಾಗಿದೆ.

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಆರೋಪಿ ಮೂಲತಃ ಒಡಿಶಾದವನು. ಮಹಾಲಕ್ಷ್ಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದ ಬಳಿಕ ಆತ ತನ್ನ ಸೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ನಂತರ ಇಲ್ಲಿಂದ ಪರಾರಿಯಾಗಿದ್ದಾನೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ (bangalore crime news) ಪತ್ತೆಯಾಗಿದೆ. ತಾಂತ್ರಿಕ ಮಾಹಿತಿ ಆಧರಿಸಿ, ಬೆಂಗಳೂರಿನಲ್ಲೇ ಇರುವ ಆರೋಪಿಯ ಸೋದರನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗಿದೆ.

ಮೃತ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದ ಮಾಲ್‌ನಲ್ಲೇ ಆರೋಪಿ ಕೂಡ ಸ್ಕೋರ್ ಮ್ಯಾನೇಜರ್ ಆಗಿದ್ದ ಎನ್ನಲಾಗಿದೆ. 9 ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಪತಿಯನ್ನು ತೊರೆದು ನಗರಕ್ಕೆ ಬಂದು ನೆಲೆಸಿದ್ದಳು. ಆ ವೇಳೆ ಮಾರಾಟ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿ ಆಕೆಗೆ ಆರೋಪಿಯ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಇತ್ತೀಚಿಗೆ ಈ ಜೋಡಿ ಮಧ್ಯೆ ಮನಸ್ತಾಪ ಮೂಡಿತ್ತು ಎಂದು ತಿಳಿದು ಬಂದಿದೆ. ನಂತರ ಬೇರೊಬ್ಬನ ಜೊತೆ ಮಹಾಲಕ್ಷ್ಮಿ ಸಲುಗೆ ಬೆಳೆಸಿಕೊಂಡಿದ್ದಳು. ಈ ವಿಚಾರ ತಿಳಿದು ಕೋಪಗೊಂಡಿದ್ದ ಆರೋಪಿ, ಆತನ ಸಂಗ ಬಿಡುವಂತೆ ಮಹಾಲಕ್ಷ್ಮಿಗೆ ತಾಕೀತು ಮಾಡಿದ್ದ.ಇದೇ ವಿಷಯವಾಗಿ ಮಹಾಲಕ್ಷ್ಮಿ ಹಾಗೂ ಆರೋಪಿಗೆ ಜಗಳವಾಗಿ ಆತ ಕೊಲೆ ಮಾಡಿದ್ದಾನೆ.

ಗೆಳತಿಯನ್ನು ಕೊಂದು ಬಚ್ಚಿಟ್ಟ ಬಳಿಕ ಒಡಿಶಾಕ್ಕೆ ಪರಾರಿಯಾಗಲು ಆರೋಪಿ ಯೋಜಿಸಿದ್ದ. ಅಂದು ರಾತ್ರಿ ತನ್ನ ಸೋದರನಿಗೆ ಕರೆ ಮಾಡಿದ ಆರೋಪಿ, ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದೇನೆ. ನನ್ನನ್ನು ಪೊಲೀಸರು ಬಂಧಿಸುತ್ತಾರೆ. ಹಾಗಾಗಿ ನಾನು ಬೆಂಗಳೂರು ತೊರೆದು ಹೋಗುತ್ತಿದ್ದೇನೆ. ನೀನೂ ಹೊರಟುಬಿಡು ಎಂದು ಹೇಳಿದ್ದೆ. ಆದರೆ ಸೋದರ ನಗರ ತೊರೆದಿರಲಿಲ್ಲ.

ಮೃತಳ ಮೊಬೈಲ್‌ ಕರೆ (ಸಿಡಿಆರ್)ಗಳನ್ನು ಪರಿಶೀಲಿಸಿದಾಗ ಆರೋಪಿ ಸೇರಿ ಮೂವರ ಜತೆ ಆಕೆ ಹೆಚ್ಚಿನ ಸಂಭಾಷಣೆ ನಡೆಸಿರುವುದು ಗೊತ್ತಾಗಿದೆ. ಈ ಸಿಡಿಆರ್‌ ಆಧರಿಸಿ ಮಹಾಲಕ್ಷ್ಮಿ ಜತೆ ನಿಕಟ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಲಾಯಿತು. ಆದರೆ ಮೂವರ ಪೈಕಿ ಇಬ್ಬರು ಮಾತ್ರ ಸಿಕ್ಕಿದ್ದರು. ಮತ್ತೊಬ್ಬ ಸಿಕ್ಕಿರಲಿಲ್ಲ. ಆತನ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿದಾಗ ಪಶ್ಚಿಮ ಬಂಗಾಳದಲ್ಲಿ ಕೊನೆಯ ಬಾರಿ ಲೋಕೇಷನ್ ಸಿಕ್ಕಿದೆ. ನಂತರ ಆರೋಪಿ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾನೆ.

ಹತ್ಯೆ ಪ್ರಕರಣ ಸಂಬಂಧ ಆರೋಪಿಯ ಸೋದರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಒಡಿಶಾ ರಾಜ್ಯದ ಹಳ್ಳಿಯಲ್ಲಿ ನೆಲೆಸಿರುವ ಆರೋಪಿಯ ಪೋಷಕರನ್ನು ಸಂಪರ್ಕಿಸಲಾಗಿದೆ. ಆದರೆ ಕೃತ್ಯ ಎಸಗಿದ ನಂತರ ಆರೋಪಿ ಊರಿಗೆ ಹೋಗದೆ ಬೇರೆಡೆ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಆರೋಪಿ ಪತ್ತೆಗೆ ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ವಿಶೇಷ ಪೊಲೀಸರ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bengaluru woman murder: ಬೆಂಗಳೂರಿನ ಮಹಿಳೆ ಹತ್ಯೆ ಪ್ರಕರಣ; ಅಶ್ರಫ್‌ ಸೇರಿ ನಾಲ್ವರ ಮೇಲೆ ಪತಿ ಅನುಮಾನ