Friday, 20th September 2024

ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಒಮ್ಮತದ ಆಯ್ಕೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಒಮ್ಮತದ ಆಯ್ಕೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ  ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ತಲೆ ಮೇಲೆ ಹೊತ್ತು ಕಾಲು ಸವೆಸಿಕೊಂಡಿರುವ ಕಾಂಗ್ರೆಸ್​ನವರು ಬಿಜೆಪಿ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುವ ಕಾಲ ಬರಲಿದೆ. ಅದಕ್ಕೆ ಉತ್ತರ ಬಿಜೆಪಿಯ ಕಾರ್ಯಕರ್ತರು ಕೊಡಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ವಿಜಯೇಂದ್ರ ಅವರಿಗೆ ಅವಕಾಶ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಜೋತುಬಿದ್ದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇಲ್ಲಿ ಯಾವುದೋ ಒಂದು ಅಕಸ್ಮಾತ್ ಒಬ್ಬ ಕಾರ್ಯಕರ್ತ ಒಬ್ಬ ಹಿರಿಯ ಮುತ್ಸದ್ಧಿ ಮಗ ಆಗಿದ್ದ ಎನ್ನುವ ಕಾರಣಕ್ಕೆ ಅವಕಾಶ ಕೊಟ್ಟಾಗ ಈ ರೀತಿ ಮಾತ ನಾಡುತ್ತೀರಲ್ಲ, ನೀವು ಇಂದು ಎಣಿಕೆ ಮಾಡಿ ನೋಡಿ ಎಷ್ಟು ಜನ ಶಾಸಕರು ನಿಮ್ಮ ಕುಟುಂಬಗಳಿಂದ ಮಾತ್ರ ಬಂದಿದ್ದಾರೆ? ಎಷ್ಟು ಜನ ಮಂತ್ರಿಗಳು ಕುಟುಂಬದ ಮಂತ್ರಿಗಳಿದ್ದಾರೆ? ಎಂದು ಮೆಲುಕು ಹಾಕಿ ನೋಡಿ ಎಂದು ಹೇಳಿದ್ದಾರೆ.

ಯಾಕೆಂದರೆ ಒಂದು ಕುಟುಂಬದ ಗುಲಾಮಗಿರಿ ಮಾಡುವ ಈ ಕಾಂಗ್ರೆಸ್ಸಿಗರು ಆ ಒಂದು ಕುಟುಂಬದ ಪಾದರಕ್ಷೆ ಹೊತ್ತು ಇಲ್ಲಿಯವರೆಗೂ ಕಾಲು ಸವೆಸಿ ದ್ದಾರೆ. ಅಂಥವರು ಇಂದು ಬಿಜೆಪಿಯ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಒಬ್ಬ ಉತ್ತಮ ಕಾರ್ಯಕರ್ತನನ್ನು ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ. ಆದರೆ, ಕಾಂಗ್ರೆಸ್​ನವರು ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ಹೊತ್ತು ಇಂತಹ ಮಾತು ಆಡುತ್ತಿದ್ದಾರೆ ಎಂದು ಟೀಕಿಸಿ ದ್ದಾರೆ.