Friday, 25th October 2024

ನಾನು ಕೆಳಜಾತಿಯವನೆಂದು ಹೆಗಡೆವಾರ್‌ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಲಾಗಿದೆ: ಗೂಳಿಹಟ್ಟಿ ಅಸಮಧಾನ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ನಾನು ಕೆಳಜಾತಿಯವನೆಂಬ ಕಾರಣದಿಂದ ನನಗೆ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗಡೆವಾರ್‌ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅಸಮಧಾನ ಹೊರಹಾಕಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರಿಗೆ ಕಳಿಸಿರುವ ಆಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಹಿಂದುತ್ವ, ಹಿಂದೂ ದೇವರಲ್ಲಿ ಅತ್ಯಂತ ವಿಶ್ವಾಸ ಮತ್ತು ನಂಬಿಕೆಯಿರುವ ನಾನು ನಾಗಪುರದ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿರುವ ಹೆಗ್ಡೆವಾರ್‌ ನಿವಾಸ ವಸ್ತುಸಂಗ್ರಹಾಲಯಕ್ಕೆ ಹೋಗಿದ್ದೆ. ಆದರೆ ವಿಸಿಟರ್‌ ಬುಕ್‌ ನಲ್ಲಿ ನನ್ನ ಹೆಸರು ಬರೆಯಲು ಹೇಳಿದರು. ಬಳಿಕ ಅಲ್ಲಿನ ಸಿಬ್ಬಂದಿ ದಯವಿಟ್ಟು ತಪ್ಪು ತಿಳಿಯಬೇಡಿ. ನೀವು ಎಸ್‌ಸಿ ಜನಾಂಗಕ್ಕೆ ಸೇರಿದವರೇ ಎಂದು ಪ್ರಶ್ನಿಸಿದರು. ನಾನು ಹೌದೆಂದು ಉತ್ತರಿಸಿದಾಗ, ದಯವಿಟ್ಟು ತಪ್ಪು ತಿಳಿಯಬೇಡಿ. ಎಸ್‌ಸಿ ಜನಾಂಗಕ್ಕೆ ಪ್ರವೇಶಾವಕಾಶವಿಲ್ಲ ಎಂದರು.

ಈ ಘಟನೆಯಿಂದ ತನಗೆ ತೀವ್ರವಾಗಿ ನೋವಾಗಿದೆ ಎಂದು ಗೂಳಿಹಟ್ಟಿ ಶೇಖರ್‌ ವಿಷಾದ ವ್ಯಕ್ತಪಡಿಸಿದ್ದಾರೆ.