Monday, 16th September 2024

ಕಡಲೆಕಾಯಿ ಪರಿಷೆಗೆ ಇಂದು ಸಂಜೆ ಚಾಲನೆ

ಬೆಂಗಳೂರು: ಪಾರಂಪರಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ ಚಾಲನೆ ಸಿಗಲಿದೆ. ಪರಿಷೆಯ ಜೊತೆಗೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ಸಹ ಆಯೋಜನೆ ಮಾಡಲಾಗಿದೆ.

ಭಾನುವಾರ ಸಂಜೆ ಸುಮಾರಿಗೆ ಬಸನವಗುಡಿ ಕಡಲೆಕಾಯಿ ಪರಿಷೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸ ಲಿದ್ದಾರೆ. ಸಚಿವರು, ಸಂಸದರು, ಶಾಸಕರು ಹಾಗೂ ನೂರಾರು ಜನರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಕಡಲೆಕಾಯಿ ಪರಿಷೆ ಮಂಗಳವಾರದ ತನಕ ನಡೆಯಲಿದೆ. ಈ ಸಂದರ್ಭ ದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿಯ ಮಹಾ ಅಭಿಷೇಕ ಸೋಮವಾರ ಬೆಳಗ್ಗೆ ನಡೆಯಲಿದೆ.

ಭಾನುವಾರ, ಸೋಮವಾರ ಮತ್ತು ಮಂಗಳವಾರ ನಡೆಯುವ ಬಸನವಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ. ಈಗಾಗಲೇ ನೂರಾರು ಅಂಗಡಿಗಳು ಬುಲ್ ಟೆಂಪಲ್ ರಸ್ತೆಯಲ್ಲಿ ಕಾಣಸಿಗುತ್ತಿವೆ. ಶನಿವಾರ ರಜೆ ದಿನವಾದ್ದರಿಂದ ಜನರು ಪರಿಷೆಗೆ ಆಗಮಿಸಿ ಕಡಲೆಕಾಯಿ ಸವಿದರು.

ಕಡಲೆಕಾಯಿ ಪರಿಷೆ ಅಂಗವಾಗಿ ಬ್ಯೂಗಲ್ ರಾಕ್ ಉದ್ಯಾನವನ, ನರಸಿಂಹಸ್ವಾಮಿ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.

ಬುಲ್ ಟೆಂಪಲ್ ರಸ್ತೆಯ ಒಂದು ಕಿ. ಮೀ. ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು 600 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಬುಲ್ ಟೆಂಟಲ್ ರಸ್ತೆಯಲ್ಲಿ ಜನರ ಸಂಚಾರಕ್ಕೆ ತೊಂದರೆ ಆಗದಂತೆ ಪಾದಚಾರಿ ಮಾರ್ಗದಲ್ಲಿ 2 ಸಾವಿರ ಅಂಗಡಿಗಳನ್ನು ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ.

ಕಡಲೆಕಾಯಿ ಪರಿಷೆಗೆ ಆಗಮಿಸುವ ಜನರು ವಾಹನಗಳನ್ನು ನಿಲ್ಲಿಸಲು ಎಪಿಎಸ್ ಕಾಲೇಜು ಮೈದಾನ, ಕೊಹಿನೂರು ಆಟದ ಮೈದಾನ ಮತ್ತು ಆಶ್ರಮ ವೃತ್ತದಲ್ಲಿ ಜಾಗ ಕಲ್ಪಿಸಲಾಗಿದೆ. ದೇವರ ದರ್ಶನವನ್ನು ಎಲ್‌ಇಡಿ ಮೂಲಕ ಪಡೆಯಲು ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮೂರು ದಿನಗಳ ಪರಿಷೆಗೆ ಸುಮಾರು 5 ಲಕ್ಷ ಜನರು ಸೇರಬಹುದು ಎಂದು ಬಿಬಿಎಂಪಿ ಅಂದಾಜಿಸಿದೆ. ಶನಿವಾರವೇ ರಜಾ ದಿನವಾದ್ದರಿಂದ ನೂರಾರು ಜನರು ಆಗಮಿಸಿದ್ದರು. ಬುಲ್ ಟೆಂಪಲ್ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರ ಕಳೆಗಟ್ಟಿತ್ತು.