Thursday, 19th September 2024

Physical Abuse: ಲೈಂಗಿಕ ದೌರ್ಜನ್ಯ ಎಸಗಿದ ಎಸಿಪಿ ಚಂದನ್‌? ಸಿಸಿಟಿವಿ ವಿಡಿಯೊ ನೀಡುವವರೆಗೂ ಧರಣಿ ನಡೆಸಲು ಮುಂದಾದ ಪುನೀತ್‌ ಕೆರೆಹಳ್ಳಿ

puneeth kerehalli

ಬೆಂಗಳೂರು: ತನ್ನನ್ನು ಬಂಧಿಸಿದ್ದ ಎಸಿಪಿ ಚಂದನ್ ಕುಮಾರ್ ನನ್ನ ಮೇಲೆ ಹಲ್ಲೆ ಮಾಡಿ, ಲೈಂಗಿಕ ದೌರ್ಜನ್ಯ (Physical Abuse) ನಡೆಸಿದ್ದು, ಇದಕ್ಕೆ ಸಂಬಂಧಿಸಿದ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡುವವರೆಗೂ ಆಹೋರಾತ್ರಿ ಧರಣಿ ಮಾಡುತ್ತೇನೆಂದು ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ (Puneeth Kerehalli) ಎಚ್ಚರಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಆರೆಸ್ಟ್ ಮಾಡಿ ಹೀರೋ ಆಗಿದ್ದ ಎಸಿಪಿ ಚಂದನ್ ಕುಮಾರ್ ಮೇಲೆ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಆಕ್ರೋಶ ಹೊರಹಾಕಿದ್ದಾರೆ. ನಾಯಿ ಮಾಂಸ ಮಾರಾಟ ಆರೋಪ ಸಂಬಂಧ ನಡೆಸಿದ ಹೋರಾಟಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಠಾಣೆಯಲ್ಲಿ ನನ್ನ ಮೇಲೆ ಎಸಿಪಿ ಚಂದನ್ ಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದರು.

ಇದೀಗ ಈ ಪ್ರಕರಣ ಸಂಬಂಧ ಪುನೀತ್ ಅವರು ಠಾಣೆಯ ಅಂದಿನ ಸಿಸಿಟಿವಿ ಫೂಟೇಜ್‌ ಅನ್ನು ನೀಡುವಂತೆ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿಕೊಂಡಿದ್ದಾರೆ. ಆದರೆ ಇದೀಗ 25 ದಿನಗಳ ನಂತರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಸಹಾಯಕ ಆಯುಕ್ತರು ಬ್ಯಾಟರಾಯನಪುರ ಅವರ ಕಛೇರಿಗೆ RTI ಅರ್ಜಿ ಹಾಕಿ ಪಡೆಯುವಂತೆ ತಿಳಿಸಿದ್ದಾರೆ . ಈ ಮೂಲಕ ವಿಡಿಯೋ ಡಿಲೀಟ್ ಮಾಡುವ ಕುತಂತ್ರ ನಡೆಯುತ್ತಿದೆ ಎಂದು ಪುನೀತ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಎಸಿಪಿ ಚಂದನ್ ಕುಮಾರ್ ದಿನಾಂಕ 26/07/2024 ರಂದು ರಾತ್ರಿ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಬಟ್ಟೆ ಬಿಚ್ಚಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಕಾಟನ್ ಪೇಟೆ ಪೊಲೀಸ್ ಠಾಣ ಕೊಠಡಿಯಲ್ಲಿ C C ಕ್ಯಾಮರಾವಿದ್ದು ಅದರ CC TV ದೃಶ್ಯಗಳನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದರೆ ಬೇಕೆಂದೇ 25 ದಿನಗಳ ವರೆಗೂ ಸಮಯ ವ್ಯರ್ಥ ಮಾಡಿ ಈಗ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಸಹಾಯಕ ಆಯುಕ್ತರು ಬ್ಯಾಟರಾಯನಪುರ ಅವರ ಕಛೇರಿಗೆ RTI ಅರ್ಜಿ ಹಾಕಿ ಪಡೆಯುವಂತೆ ತಿಳಿಸಿದ್ದಾರೆ. ಇದು ಬೇಕೆಂದೇ ತಡ ಮಾಡುತ್ತಿದ್ದು ವಿಡಿಯೋ ಡಿಲೀಟ್ ಮಾಡುವ ಕುತಂತ್ರವಾಗಿದೆ. ತಪ್ಪು ಮಾಡಿಲ್ಲ ಎನ್ನುವುದಾದರೆ C C Tv ದೃಶ್ಯವಳಿ ನೀಡಲು ಭಯವೇಕೆ? ಅದ್ದರಿಂದ ನಾನು CCTV ದೃಶ್ಯ ನೀಡುವವರೆಗೂ ಆಹೋರಾತ್ರಿ ಧರಣಿ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.