Thursday, 19th September 2024

Accident: ಖಾಸಗಿ ಮತ್ತು ಬಸ್ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ ಓರ್ವ ಸಾವು


ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಶೆಟ್ಟಹಳ್ಳಿ ಬಳಿ ಘಟನೆ.

ಚಿಂತಾಮಣಿ : ಖಾಸಗಿ ಬಸ್ ಮತ್ತು ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೊಲೆರೋ ವಾಹನದ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ-ಚೇಳೂರು ರಸ್ತೆಯ ಸಿದ್ದೇಪಲ್ಲಿ ಕ್ರಾಸ್ ಬಳಿ ಮಂಗಳವಾರ ಬೆಳಿಗ್ಗೆ ಸುಮಾರು ೭ ಗಂಟೆ ಸಮಯದಲ್ಲಿ ನಡೆದಿದೆ.

ಅಪಘಾತದಲ್ಲಿ ಸಾವನ್ನಪ್ಪಿರುವ ಟೊಮೆಟೋ ಸಾಗಾಣೆಕೆ ಮಾಡುವ ಬೊಲೆರೋ ವಾಹನದ ಚಾಲಕನನ್ನು ಚೇಳೂರು ತಾಲ್ಲೂಕು ಪಾತಪಾಳ್ಯ ಸಮೀಪದ ಶಿವಪುರ ಗ್ರಾಮದ 35 ವರ್ಷದ ರೆಡ್ಡಪ್ಪ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಖಾಸಗಿ ಬಸ್ಸಿನ ಚಾಲಕ ಕಿರಣ್‌ಗೆ ಗಾಯವಾಗಿದ್ದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖ ಲಾಗಿದ್ದಾನೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದು ಎಲ್ಲರೂ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗಿದ್ದಾರೆ.

ಖಾಸಗಿ ಬಸ್ ಚಿಂತಾಮಣಿಯಿಂದ ನೆರೆಯ ಆಂಧ್ರಪ್ರದೇದ ಬಿ.ಕೊತ್ತಕೋಟೆ ಕಡೆ ಹೋಗುತ್ತಿದ್ದರೆ, ಬೊಲೆರೋ ವಾಹನ ನೆರೆ ಆಂಧ್ರಪ್ರದೇಶದಿಂದ ಚಿಂತಾಮಣಿ ಎಪಿಎಂಸಿಗೆ ಟೊಮೆಟೋ ಕ್ರೇಟುಗಳನ್ನು ಹೊತ್ತು ಬರುತ್ತಿತ್ತು ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಬೊಲೆರೋ ವಾಹನ ಬಸ್ಸಿಗೆ ಸಿಕ್ಕಿ ಹಾಕಿಕೊಂಡಿದ್ದು ಜೆಸಿಬಿ ಮೂಲಕ ಎರಡು ವಾಹನ ಗಳನ್ನು ಪರಸ್ಪರ ಬೇರ್ಪಡಿಸಬೇಕಾಯಿತು. ಇನ್ನು ಬೊಲೆರೋ ವಾಹನ ದಲ್ಲಿದ್ದ ಟೊಮೆಟೋ ಕ್ರೇಟ್‌ಗಳು ಚೆಲ್ಲಾಪಿಲ್ಲಿಯಾಗಿ  ರಸ್ತೆಗೆ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗಮಿಸಿದ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಎಲ್ಲವನ್ನೂ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡ್ಡಿದ್ದಾರೆ.