Saturday, 26th October 2024

ಸಮಾಜ ಸೇವೆಗೆ ಮಾಡಿದ ಖರ್ಚು ವ್ಯರ್ಥವಾಗುವುದಿಲ್ಲ: ಕ್ಯಾ.ಸೋಮಶೇಖರ್

ಚಿಕ್ಕನಾಯಕನಹಳ್ಳಿ: ಸಮಾಜ ಸೇವೆಗಾಗಿ ಮಾಡಿದ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ. ಸಮಾಜ ಸೇವೆಗಾಗಿ ನೀವು ನಿಮ್ಮ ಹಣವನ್ನು ವ್ಯಯ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚುತ್ತದೆ. ನೀವು ಯಶಸ್ಸನ್ನು ಪಡೆಯುತ್ತೀರಿ ಎಂದು ಪರಶು ಪ್ರತಿಷ್ಠಾನದ ಅಧ್ಯಕ್ಷ ಕ್ಯಾ. ಸೋಮಶೇಖರ್ ಅಭಿಪ್ರಾಯಪಟ್ಟರು.

ಹುಳಿಯಾರಿನ ಸಮೀಪ ಹೆಚ್. ತಮ್ಮಡಿಹಳ್ಳಿ ಗ್ರಾಮದಲ್ಲಿರುವ ಸರಕಾರಿ ಪ್ರೌಢಶಾಲೆ ಯಲ್ಲಿ ಪರಶು ಪ್ರತಿಷ್ಠಾನದಿಂದ ಆಯೋಜಿಸ ಲಾಗಿದ್ದ ಶಬ್ದಕೋಶ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡಲು ಮಾಡಿದ ಖರ್ಚು ಎಂದಿಗೂ ವ್ಯರ್ಥವಾಗುವುದಿಲ್ಲ. ನೀವು ಯಾರಿಗಾದರೂ ಊಟ ನೀಡಿದರೆ, ಶಿಕ್ಷಣಕ್ಕೆ ಪುಸ್ತಕ ಮತ್ತು ಇತರೆ ಸೌಲಭ್ಯ ಗಳನ್ನು ನೀಡಿದರೆ ಅದು ಉತ್ತಮ ವಾದ ಕೆಲಸವಾಗಿರುತ್ತದೆ. ಒಬ್ಬ ವ್ಯಕ್ತಿಯು ಖಂಡಿತವಾಗಿಯೂ ತನ್ನ ಆದಾಯದ ಸ್ವಲ್ಪ ಭಾಗ ವನ್ನು ಅಂತಹ ಉದಾತ್ತ ಕೆಲಸಗಳಲ್ಲಿ ವಿನಿಯೋಗಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿ ಹೊಂದಿರಬೇಕು ಸತತ ಪ್ರಯತ್ನ, ಶಿಸ್ತುಬದ್ದವಾದ ಯೋಜನಾ ಕ್ರಮ ರೂಢಿಸಿ ಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಸಾಧನೆ ಮಾಡಬೇಕೆಂಬ ಛಲ ಹಾಗು ಗುರಿ ಹೊಂದ ಬೇಕು. ಆತ್ಮ ವಿಶ್ವಾಸ ಪ್ರಮಾಣಿಕ ಪ್ರಯತ್ನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

***

ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇಂತಹ ಮಹನೀಯರು ಪ್ರಮುಖ ಪಾತ್ರವನ್ನು ನಿರ್ವಹಿ ಸುತ್ತಿದ್ದಾರೆ. ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯ ಕಬ್ಬಿಣದ ಕಡಲೆಯಾಗಿದ್ದು ಅದನ್ನು ಸುಲಭಗೊಳಿಸಲು ಪರುಶು ಪ್ರತಿಷ್ಠಾನದಿಂದ ಡಿಕ್ಷನರಿಗಳು ಮಕ್ಕಳ ಕೈಗೆ ಉಚಿತವಾಗಿ ಸಿಗುವಂತಾಗಿದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಶೈಕ್ಷಣಿಕ ಅಭಿವೃದ್ದಿ ಹೊಂದಿ ಎಂದು ಹಾರೈಸಿದರು.

ಈ ವೇಳೆ ಮಾಜಿ ಸೈನಿಕ ಚಂದ್ರಪ್ಪ, ನಿವೃತ್ತ ಎಎಸ್‌ಐ ನಿರ್ವಾಣಯ್ಯ, ಶಿಕ್ಷಕರಾದ ತಿಮ್ಮಪ್ಪ, ಶ್ರೀಧರ್, ಅಶೋಕ್, ಶೇಖರಯ್ಯ, ದ್ರಾಕ್ಷಾಯಿಣಿ, ಸೌಭಾಗ್ಯ, ಶಾಂತನಾಯಕ್ ಹಾಗು ವಿದ್ಯಾರ್ಥಿಗಳು ಹಾಜರಿದ್ದರು.