Saturday, 26th October 2024

ವಿದ್ಯಾರ್ಥಿಗಳು ವಾಹನ ಚಾಲನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ: ನ್ಯಾ.ಸಿ.ರಾಜಶೇಖರ್ ಸಲಹೆ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ವಾಹನಗಳ ಚಾಲನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ರಾಜಶೇಖರ್ ತಿಳಿಸಿದರು.

ತಾಲೂಕಿನ ಮುದ್ದೇನಹಳ್ಳಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಚಿಕ್ಕಬಳ್ಳಾಪುರ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಕಾನೂನು ಅರಿವು ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕಾನೂನಿನಲ್ಲಿರುವ ನಿಯಮಗಳನ್ನು ಭೋದಿಸಿ, ವಾಹನಗಳ ಚಾಲನೆ ಮಾಡುವ ಸಮಯದಲ್ಲಿ ಚಾಲನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಲಿಸುವಾಗ ವಾಹನ ಚಾಲನಾಪತ್ರ, ವಾಹನ ವಿಮೆ, ಹೊಗೆ ನಿಯಂತ್ರಣ ಪತ್ರಗಳನ್ನು ಕಡ್ಡಾಯವಾಗಿ ಮಾಡಿಸಿ ತಮ್ಮ ಜೊತೆ ಇರಿಸಿಕೊಂಡಿರಬೇಕು. ಈಗಿನ ಯುವ ಪೀಳಿಗೆಯು ಬರಿ ತಂತ್ರಜ್ಞಾನಕ್ಕೆ ಹೊಗ್ಗಿಕೊಳ್ಳದೆ ಚಾಲನಾ ನಿಯಮಗಳ ಕಡೆಗೆ ಗಮನ ಹರಿಸಬೇಕು ಎಂದರು.

೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಅರುಣಾಕುಮಾರಿ ಮಾತನಾಡಿ, ಬಾಲ್ಯವಿವಾಹವು ಒಂದು ಅನಿಷ್ಟ ಪದ್ದತಿಯಾಗಿದ್ದು, ಅದನ್ನು ಬೇರು ಸಮೇತ ಕಿತ್ತು ಹಾಕಬೇಕು. ಮಗು ತಾಯಿಯ ಹೊಟ್ಟೆಯಲ್ಲಿ ಭ್ರೂಣವಾದಾಗಿನಿಂದ ಪ್ರಾರಂಭವಾಗಿ ಹೆರಿಗೆ ಆಗುವವರೆಗೂ ಕಾನೂನು ನಿಯಮಗಳು ಅಳವಡಿಕೆಯಾಗುತ್ತದೆ. ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ ಎಂದು ತಿಳಿಸಿದ ಅವರು ವಿವಿಧ ಕಾಯ್ದೆಗಳನ್ನು ಬಿಡಿಬಿಡಿಯಾಗಿ ತಿಳಿಸಿದರು. ಹಿಂದು, ಮುಸ್ಲಿಂ, ಕೈಸ್ತರ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯು ಹೇಗೆ ವಿಂಗಡೆಯಾಗುತ್ತದೆ ಎಂದು ಮನವರಿಕೆ ಮಾಡಿಸಿದ ಅವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸೈಬರ್ ಕ್ರೈಂ ಬಗ್ಗೆಯೂ ಮಾಹಿತಿ ನೀಡಿದರು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಲಕ್ಷ್ಮೀಕಾಂತ್ ಜೆ ಮಿಸ್ಕಿನ್ ಅವರು ಮಾತನಾಡಿ, ಹೆಣ್ಣು ಮಕ್ಕಳಿಗೆ ಇರುವ ಕಾನೂನು ಬಲ ಮತ್ತು ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿದರು. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಅವರದ್ದೇ ಸ್ಥಾನವಿದ್ದು,ನಾಗರೀಕರು ಅವರ ಜೊತೆ ಗೌರವದಿಂದ ವರ್ತಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕ ವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬನೆ ಸಾಧಿಸಿ ಮೇಲೆ ಬರಬೇಕು. ಸಮಾಜವೂ ಕೂಡ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಪಣತೊಟ್ಟು ದುಡಿಯಬೇಕೆಂದು ಕರೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಮಾತನಾಡಿ, ತಾಯಿಯೇ ಮೊದಲ ಗುರು. ಹೆಣ್ಣು ಅಂದರೆ ತಾಯಿ ಹಾಗಾಗಿ ಸಮಾಜದಲ್ಲಿ ಹೆಣ್ಣು ಮಕ್ಕಳೆಂದರೆ ಅತಿ ಉನ್ನತ ಮಟ್ಟದಲ್ಲಿ ಇರುವವರೆಂದು ನಮ್ಮ ಪರಂಪರೆ ಸಾರಿದೆ. ಈಗಿನ ಕಾಲದ ವಯಸ್ಕರು ನವಮಾಧ್ಯಮಗಳ ಕಾರಣ ತಪ್ಪುಗಳನ್ನು ಮಾಡದಂತೆ ಎಚ್ಚರಿಸಿದ ಅವರು ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸಿಕೊಡುವುದು ದೊಡ್ಡ ತಪ್ಪೆಂದು ತಿಳಿಸಿದರು. ಹೆಣ್ಣು ಮಕ್ಕಳ ಜೊತೆ ವಿನಯದಿಂದ ನಡೆದುಕೊಂಡು ಅವರ ಏಳಿಗೆಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.