Thursday, 19th September 2024

Director Nagashekhar: ನಿರ್ದೇಶಕ ನಾಗಶೇಖರ್ ಕಾರು ಅಪಘಾತ; ಮಹಿಳೆಗೆ ಗಾಯ

Director Nagashekhar

ಬೆಂಗಳೂರು: ಸಂಜು ವೆಡ್ಸ್ ಗೀತಾ ಸೇರಿ ಹಲವು ಖ್ಯಾತ ಸಿನಿಮಾಗಳ ನಿರ್ದೇಶನ ಮಾಡಿರುವ ನಿರ್ದೇಶಕ ನಾಗಶೇಖರ್ (Director Nagashekhar) ಅವರ ಕಾರು ಶುಕ್ರವಾರ ಅಪಘಾತಕ್ಕೀಡಾಗಿದೆ. ಕಾರು ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ್ದು, ಈ ವೇಳೆ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.

ನಗರದ ಜ್ಞಾನಭಾರತಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗುವ ಮೊದಲು ಮಹಿಳೆಯೊಬ್ಬರಿಗೆ ಗುದ್ದಿದೆ. ನಂತರ ನಿರ್ದೇಶಕ ನಾಗಶೇಖರ್ ಕಾರನ್ನು ಅಲ್ಲೇ ಬಿಟ್ಟು, ಮತ್ತೊಬ್ಬರ ಬೈಕ್‌ನಲ್ಲಿ ಹೋಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಅಕ್ಕಪಕ್ಕದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಬೆಂಜ್‌ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿಯಾಗಿ ನಂತರ ನಿಯಂತ್ರಣ ತಪ್ಪಿಮರಕ್ಕೆ ಗುದ್ದಿದೆ ಎಂದು ತಿಳಿದುಬಂದಿದ್ದು, ಸದ್ಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ನಾಗಶೇಖರ್,​ ಕಾರು ನಿಯಂತ್ರಣ ತಪ್ಪಿ ಫುಟ್ ಪಾತ್ ಮೇಲೆ ಹತ್ತಿದೆ. ಅದೃಷ್ಟವಶಾತ್ ಏನೂ ಆಗಿಲ್ಲ.ನಾನು ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Fraud Case: ಪೋಲೀಸ್ ಅಧಿಕಾರಿ ಎಂದು ನಂಬಿಸಿ 10 ಲೇಡಿ ಕಾನ್ಸ್‌ಸ್ಟೇಬಲ್‍ಗಳ ಜತೆ ಸರಸ!

ಎರಡು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಮೂವರ ದುರ್ಮರಣ

ಬಾಗಲಕೋಟೆ: ಎರಡು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವತಿಯರು ಹಾಗೂ ಒಬ್ಬ ಯುವಕ ದುರ್ಮರಣ (Bike Accident) ಹೊಂದಿರುವುದು ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ನಡೆದಿದೆ. ಗಣೇಶ ಹಬ್ಬಕ್ಕೆಂದು ಊರಿಗೆ ಬಂದಿದ್ದ ಯುವತಿ, ದೂರದ ಸಂಬಂಧಿ ಜತೆ ನಗರಕ್ಕೆ ಬಂದಿದ್ದ ವೇಳೆ ದುರಂತ ಸಂಭವಿಸಿದೆ.

ಬೆಂಗಳೂರಿನ ಸಾಪ್ಟವೇರ್ ಎಂಜಿನಿಯರ್ ರಜನಿ ಒಂದಕುದರಿ (34), ಬಾಗಲಕೋಟೆಯ ಬಿವಿವಿ ಸಂಘದ ದಂತ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಶೃತಿ ಒಂದಕುದರಿ (32) ಹಾಗೂ ಅಭಿಷೇಕ ದೋತ್ರೆ (20) ಮೃತರು. ಬೈಕ್‌ನಲ್ಲಿದ್ದ ಇನ್ನೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಯುವತಿಯರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ, ಹೆಲಿಪ್ಯಾಡ್ ರಸ್ತೆಯ ಬಳಿ ರಸ್ತೆಯ ತಿರುವು ತೆಗೆದುಕೊಂಡು ಹೋಗುತ್ತಿದ್ದಾಗ, ವೇಗವಾಗಿ ಬಂದ ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಒಬ್ಬ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಯುವತಿ ಹಾಗೂ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Yogaraj Bhat: ಶೂಟಿಂಗ್‌ ವೇಳೆ ಲೈಟ್‌ಮ್ಯಾನ್‌ ಸಾವು, ಯೋಗರಾಜ್‌ ಭಟ್‌ ಮೇಲೆ ಕೇಸು

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರಜನಿ, ರಜೆಗೆಂದು ಬಾಗಲಕೋಟೆಗೆ ಬಂದಿದ್ದರು. ತನ್ನ ದೂರದ ಸಂಬಂಧಿ ಶೃತಿ ಜತೆಗೆ ಹೊರಗಡೆ ಹೋಗಿ, ಮನೆಗೆ ಮರಳಿದ್ದಾಗ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.