Saturday, 7th September 2024

ಕುಡಿಯುವ ನೀರು ಪೂರೈಕೆಯಲ್ಲಿ ಶಾಸಕರಿಗೆ ಮೋಸ ಮಾಡುವ ಸಂಚು!!

ಎಚ್.ಕೆ.ಪಾಟೀಲ ಆರೋಪ-ಆಕ್ರೋಶ

-ವಾಲ್ಮನ್ಗಳಿಗೆ ಸುಮಾರು 5 ತಿಂಗಳಿನಿಂದ ಸಂಬಳವಿಲ್ಲ.
-ನೀರಿನ ಸಮಸ್ಯೆ ನಿವಾರಣೆಗೆ ಜನರನ್ನೊಳಗೊಂಡ ಸಮಿತಿ
-ಐದು ಅಂಶಗಳನ್ನು ಪ್ರಸ್ತಾಪಿಸಿ ಜಿಲ್ಲಾಧಿಕಾರಿಗೆ ದೂರು
ಗದಗ: ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದ್ದು, ಉದ್ದೇಶಪೂರ್ವಕವಾಗಿ  ವ್ಯತ್ಯಯ ಮಾಡಬೇಕೆಂದು ಸಂಚು ರೂಪಿಸಿ, ಮೋಸ ಮಾಡುವ ದುರಾಲೋಚನೆ ಕೆಲವರಿಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲಾಗಿದೆ. ಈಗ ನಗರದ ಕೆಲ ವಾರ್ಡ್ಗಳಲ್ಲಿ 10-12 ದಿನ ಕಳೆದರೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಕೇಳಿದಾಗಲೂ ಸಬೂಬು ಹೇಳುತ್ತಿದ್ದರು. ಮಂಗಳವಾರ ಜಾಕ್ವೆಲ್ ಬಳಿ ಹೋದಾಗ ನೀರಿನ ಫ್ಲೋ ಮೀಟರ್ ಕೆಡಿಸಿರುವುದು ಗಮನಕ್ಕೆ ಬಂದಿದೆ. ಇದರ ಹಿಂದೆ ಏನೋ ದುರುದ್ದೇಶ ಇದೆ ಎಂದು ಅವರು ಕಿಡಿ ಕಾರಿದರು.
ಪ್ರತಿದಿನ ನೀರಿನ ಒಳ ಹರಿವು  ಹಾಗೂ ಹೊರ ಹರಿವಿನ ಪ್ರಮಾಣವನ್ನು ಮುಚ್ಚಿಡಲಾಗಿದೆ. ಹಾಗೂ ನೀರು ಯಾವ ರೀತಿ ಶುದ್ಧೀ ಕರಣ  ಮಾಡಲಾಗುತ್ತಿದೆ ಎಂಬುದನ್ನು ನೋಡಿದ ಮೇಲೆ ಫ್ಲೋ ಮೀಟರ್ ಹಾಳಾಗಿರುವುದು ಗಮನಕ್ಕೆ ಬಂದಿದೆ ಎಂದರು.
ಕೆಲವರು ಗದಗ ನಗರದ ಮಹಾ ಜನತೆಗೆ ಹಾಗೂ ಶಾಸಕರಾಗಿರುವ ತಮಗೆ ಮೋಸ ಮಾಡುತ್ತಿದ್ದಾರೆ. ಅವರು ಯಾರೆಂದು ಹೆಸರು ಉಲ್ಲೇಖಿಸಲಾರೆ. ಮುಂದಿನ ದಿನಗಳಲ್ಲಿ ಅದು ತಾನಾಗೇ ಬಹಿರಂಗವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳನ್ನು ಇದನ್ನೆಲ್ಲ ನೋಡಿಯೂ ಸುಮ್ಮನಿದ್ದಾರೆ ಎಂದರೆ ಏನರ್ಥ? ಎಂದು ಅವರು ಪ್ರಶ್ನಿಸಿದರು.
ನದಿ ತೀರದ ಜಾಕ್ವೆಲ್ನಿಂದ ನೀರಿನ ಶುದ್ಧಿಕರಣ ಘಟಕಕ್ಕೆ  ಪೂರೈಕೆಯಾಗಬೇಕಾದ ನೀರಿನ ಪ್ರಮಾಣ ಕಡಿಮೆಯಾಗಿದೆ.  44 ಎಂಎಲ್ಡಿ ನೀರು ಬರಬೇಕಾಗಿತ್ತು. ಆದರೂ 32 ಎಂಎಲ್ಡಿ ನೀರು ಬರುತ್ತಿದೆ. ನೀರಿನ ಪ್ರಮಾಣ ಅಳತೆ ಮಾಡುವ ಮೂರು ಫ್ಲೋ ಮೀಟರ್ಗಳಲ್ಲಿ ಎರಡು ಫ್ಲೋ ಮೀಟರ್ಗಳು ಕೆಟ್ಟಿವೆ. ಇವು ಈ ದುಃಸ್ಥಿತಿ ತಲುಪಿ 11 ತಿಂಗಳು ಕಳೆದರೂ ಹಲವು ಸಭೆ ನಡೆಸಿದಾಗ್ಯೂ ಯಾವ ಅಧಿಕಾರಿಯೂ ಈ ಬಗ್ಗೆ ಗಮನಕ್ಕೆ ತರಲಿಲ್ಲ ಎಂದು ಅವರು ದೂರಿದರು.
ನೀರು ಶುದ್ಧೀಕರಣ ಘಟಕದಿಂದ ಗದಗ ನಗರಕ್ಕೆ ಪೂರೈಕೆಯಾಗಬೇಕಾದ ನೀರಿನ ಪ್ರಮಾಣ ಯಾರಿಗೂ ಗೊತ್ತಾಗಬಾರದು ಎನ್ನುವ ದುರುದ್ದೇಶದಿಂದಲೇ ಮೀಟರ್ನ್ನು ಕೆಡಿಸಿಟ್ಟಿದ್ದಾರೆ. 2021ರ ಆಗಸ್ಟ್ನಲ್ಲೇ ಪೂನಾದಿಂದ ಹೊಸ ಮೀಟರ್ ತಂದಿದ್ದರೂ ಅದನ್ನು ಅಳವಡಿಸುವ ಗೋಜಿಗೆ ಹೋಗಿಲ್ಲ ಎಂದು ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮನ್ಗಳಿಗೆ 5 ತಿಂಗಳಿನಿಂದ ವೇತನವಿಲ್ಲ: ಶುದ್ಧಿಕರಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಲ್ಮನ್, ಸಿಬ್ಬಂದಿಗೆ ಕಳೆದ 5-6 ತಿಂಗಳಿನಿಂದ ವೇತನವಿಲ್ಲ. ವೇತನವಿಲ್ಲದೇ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ?  ಅವರು ಒಂದು ವೇಳೆ ಕೆಲಸ ಬಿಟ್ಟರೆ, ನಿತ್ಯ ನಮಗೆಲ್ಲ ಯಾರು ನೀರು ಪೂರೈಕೆ ಮಾಡಬೇಕು  ಎಂದು ಅವರು ಪ್ರಶ್ನಿಸಿದರು.
ಈ ಕೂಡಲೇ ಆಯುಕ್ತರು, ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳು ಯಾವ ಯಾವ ನೀರಿನ ಮೀಟರ್ ಹಾಳಾಗಿದೆ ಎಂಬು ದನ್ನು ಅರಿತು ಅಲ್ಲಿ ಹೊಸ ಮೀಟರ್ ಜೋಡಣೆ ಮಾಡಬೇಕು. ಎಲ್ಲಾ ಅನಾಹುತಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣ. ಸಮಸ್ಯೆಯನ್ನೂ ಕೂಡಲೇ   ಬಗೆ ಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯದ ಹಾದಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ವಿರೋಧ ಪಕ್ಷದ ನಾಯಕ ಎಲ್. .ಡಿ ಚಂದಾವರಿ, ನಗರಸಭೆ ಮಾಜಿ ಅಧ್ಯಕ್ಷ ಬಿ ಬಿ ಅಸೋಟಿ, ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಉಮರ ಫಾರೂಕ್, ಕಾಂಗ್ರೆಸ್ ಮುಖಂಡರಾದ ಕರಿಸೋಮನಗೌಡ್ರು, ಪ್ರಭು ಬುರಬುರೆ ಇದ್ದರು.
ಕ್ರಿಮಿನಲ್ ಕೇಸ್ ದಾಖಲಿಸುವಂತೆ ಡೀಸಿಗೆ ಪತ್ರ: ನದಿಯಲ್ಲಿ ನೀರಿದೆ. ವಿದ್ಯುತ್ ಪೂರೈಕೆ ಇದೆ. ಆದರೆ ನೀರು ಬಳಸಿಕೊಂಡು ನಗರದ ಜನತೆಗೆ ನೀರು ಪೂರೈಸುತ್ತಿಲ್ಲ. ಇದು ಅತ್ಯಂತ ಗಂಭೀರ ಲೋಪ ಮತ್ತು ದುರುದ್ದೇಶದಿಂದ ಕೂಡಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು, ಲೋಪವೆಸಗಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಾಸಕ ಎಚ್.ಕೆ.ಪಾಟೀಲ ಬುಧವಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸಮಿತಿ ರಚನೆ:
ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆ ಕೆಲವರ ಅಸಡ್ಡೆಯಿಂದ ಹದಗೆಟ್ಟಿದೆ. ಇದಕ್ಕಾಗಿ ನೀರು ಪೂರೈಕೆಯ ನಿತ್ಯ ನಿರ್ವಹಣೆಯ ನಿಗಾ ವಹಿಸಲು ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಎಲ್.ಡಿ.ಚಂದಾವರಿ, ಸಂಚಾಲಕರಾಗಿ ಬಿ.ಬಿ.ಅಸೂಟಿ, ಪ್ರಭು ಬುರಬುರೆ, ಭರತ್ ಅಲಿ ಮುಲ್ಲಾ, ಎಂ.ಸಿ.ಶೇಖ್, ಅಜಿತ್ ಹೊಂಬಾಳೆ, ಡಾ.ಪ್ಯಾರ್ ಅಲಿ ನೂರಾನಿ, ಎಲ್..ಜಿ.ಪತ್ತಾರ, ಬಸವರಾಜ ಬಿದರಕಟ್ಟಿ, ನಿರ್ಮಲಾ, ಚಂದ್ರ ಚಹ್ವಾಣ ಇವರನ್ನು ಶಾಸಕರು ನೀರಿನ ಪೂರೈಕೆಯ ವ್ಯವಸ್ಥೆ ತಹಬದಿಗೆ ಬರುವವರೆಗೂ ನೇಮಕ ಮಾಡಿದ್ದಾರೆ.

error: Content is protected !!