Saturday, 7th September 2024

ಅರ್ಚಕರ ಗುಂಪಿನಲ್ಲಿ ಗಲಾಟೆ: ಮೂವರಿಗೆ ಗಾಯ

ಚಾಮರಾಜನಗರ: ಪೂಜೆ ಹಾಗೂ ದೀಕ್ಷೆ ಕೊಡುವ ವಿಚಾರಕ್ಕೆ ಅರ್ಚಕರ ಗುಂಪಿನಲ್ಲಿ ಗಲಾಟೆ ನಡೆದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಾತ್ರಸ್ಥಳ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಡೆದಿದೆ.

ಚಿಕ್ಕಲೂರು ದೇವಸ್ಥಾನದ ಅರ್ಚಕರಾದ ಶಂಕರಪ್ಪ(65), ಶಿವಕುಮಾರಸ್ವಾಮಿ(40) ಹಾಗೂ ನಂಜುಂಡಸ್ವಾಮಿ(32) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಿದ್ದಪ್ಪಾಜಿ ದೇವರ ಗುಡ್ಡ ದೀಕ್ಷೆ ಪಡೆಯಲು ನೂರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದು, ದೀಕ್ಷೆ ಕೊಡಲು ಒಂದು ಗುಂಪು ದೇಗುಲದ ಹೊರಗೆ ತಯಾರಿ ಮಾಡಿಕೊಳ್ಳುವಾಗ ಈ ವೇಳೆ ಮತ್ತೊಂದು ಗುಂಪು ದೀಕ್ಷೆ ನಾವು ಕೊಡುತ್ತೇವೆ ಎಂದು ತಡೆ ಒಡ್ಡಿದೆ. ಆಗ ನಂಜುಂಡಸ್ವಾಮಿ ಮತ್ತು ಶಂಕರಪ್ಪನ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟದ ಹಂತಕ್ಕೂ ಹೋಗಿದೆ.

ಸಿದ್ದಪ್ಪಾಜಿ ಬೆತ್ತ ಮತ್ತು ತ್ರಿಶೂಲಗಳನ್ನು ಹಲ್ಲೆಗೆ ಆಯುಧವಾಗಿ ಬಳಸಿಕೊಂಡಿದ್ದು, ಶಂಕರಪ್ಪನ ತೊಡೆ ಮೂಳೆ ಮತ್ತು ಶಿವಕುಮಾರ್ ತಲೆಗೆ ಹಾಗೂ ಮತ್ತೊಂದು ಗುಂಪಿನ ನಂಜುಂಡಸ್ವಾಮಿಗೆ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!