Sunday, 27th October 2024

ದಲಿತರ ಮನೆಯಲ್ಲಿ ಉಪಹಾರ ಸವಿದ ಕಂದಾಯ ಸಚಿವ

ಗ್ರಾಮ ವಾಸ್ತವ್ಯದಲ್ಲಿ ಸಚಿವರ ಪ್ರಶಂಸನೀಯ ನಡೆ
ತುಮಕೂಕು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಮಾಯಸಂದ್ರ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಭಾನುವಾರ ಬೆಳಗ್ಗೆ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು.
ಶನಿವಾರ ರಾತ್ರಿ ಮಾಯಸಂದ್ರದ ಆದಿಚುಂಚಗಿರಿಯ ಮಠದ ಶಾಲೆಯ ಆಶ್ರಮದಲ್ಲಿ ಶಾಸಕ ಮಸಾಲೆ ಜಯರಾಂ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡಿದ್ದರು.
ಜೂ.19ರಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ಗ್ರಾಮದ ಸುತ್ತಾಟ ನಡೆಸಿದ ಸಚಿವ ಅಶೋಕ್, ಮಾಯಸಂದ್ರದ ಗೂಡಂಗಡಿಗೆ ತೆರಳಿ ಚಹಾ ಸೇವಿಸಿ, ಪ್ರೀತಿಯಿಂದ ಐನೂರು ರುಪಾಯಿ ನೀಡಿದರು.
ನಂತರ ದಲಿತ ಕೇರಿಗೆ ತೆರಳಿದ ಸಚಿವರು ದಲಿತ ಕುಟುಂಬದ ವಿನೋದ್ ಎಂಬವರ ಮನೆಗೆ ತೆರಳಿ ಅವರ ಮನೆಯಲ್ಲಿ ಸಿದ್ದ ಪಡಿಸಿದ್ದ ಅಕ್ಕಿರೊಟ್ಟಿ, ಹುಚ್ಚೆಳ್ಳು ಚಟ್ನಿ, ಕೇಸರಿ ಬಾತ್, ಉಪ್ಪಿಟ್ಟು ಹಾಗೂ ಚಿತ್ರಾನ್ನ ಸವಿದರು.
ದಲಿತರ ಕೇರಿಗೆ ರಸ್ತೆ ನಿರ್ಮಾಣ : 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್ ಅವರು,  ದಲಿತ ಕೇರಿಯಲ್ಲಿ ಸುಮಾರು ೮೦ ಮನೆಗಳಿದ್ದು, ರಸ್ತೆ ಅಭಿವೃದ್ಧಿಯಾಗದಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ದಲಿತ ಕೇರಿಗಳ ರಸ್ತೆ ನಿರ್ಮಾಣಕ್ಕೆ ೧೫ ದಿನದಲ್ಲಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ದಲಿತ ಕೇರಿಯಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣಕ್ಕೆ ನಮ್ಮ ಇಲಾಖೆಯಿಂದ ೨೫ ಲಕ್ಷ ರು. ಹಾಗೂ ಉಳಿದ ಹಣವನ್ನು ನರೇಗಾದಡಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ನಾನು ದಲಿತ ಕೇರಿಗೆ ಬಂದಿದ್ದೇನೆ. ಅವರು ಮಾಡಿರುವಂತಹ ಉಪಹಾರವನ್ನು ಅವರ ಜತೆಯಲ್ಲೆ ಸೇವಿಸಿದ್ದೇನೆ. ಒಳ್ಳೆಯ ರುಚಿ ತಿಂಡಿ ಕೊಟ್ಟಿದ್ದಾರೆ. ಈ ಮನೆಯ ಹುಡುಗ ಬಾಡಿಗೆ ಆಟೋ ಓಡಿಸುತ್ತಿದ್ದು, ಈತನಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಬ್ಸಿಡಿಯಲ್ಲಿ ಆಟೋ ಖರೀದಿಸಲು ಸೌಲ ಸೌಲಭ್ಯ ಕಲ್ಪಿಸಿ ಆತನ ಸ್ವಂತ ಕಾಲ ಮೇಲೆ ನಿಲ್ಲಲು ಅವಕಾಶ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದಲಿತ, ಸವರ್ಣೀಯ ಎಲ್ಲ ಜಾತಿಯೂ ಒಂದೇ. ಹಾಗಾಗಿ ಗ್ರಾಮ ವಾಸ್ತವ್ಯದಲ್ಲಿ ದಲಿತ ಕೇರಿಗಳು ಸಮಾಜಮುಖಿಯಾಗಿ ಬಾಳುವ ಕೆಲಸವಾಗಬೇಕು. ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ದಲಿತರ ಕೇರಿಗೆ ಬಂದು ಅವರ ಮಾಡಿರುವ ತಿಂಡಿ ಸವಿಯುತ್ತೇನೆ. ಎಲ್ಲರಲ್ಲೂ ಸಮಾನತೆ, ಸೌಹಾರ್ದತೆ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನನಗೆ ಬಹಳ ತೃಪ್ತಿ ತಂದಿದೆ. ಗ್ರಾಮ ವಾಸ್ತವ್ಯ ನನಗೆ ಒಂದು ಪಾಠಶಾಲೆ ಇದ್ದಂತೆ. ಇದರಿಂದ ಹಳ್ಳಿ ಜನರ ಬಹುತೇಕ ಸಮಸ್ಯೆಗಳು ನನ್ನ ಅರಿವಿಗೆ ಬರುತ್ತಿವೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರ ಆಹವಾಲು ಆಲಿಸಿ, ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಮಸಾಲೆ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್, ನಟರಾಜು, ತಹಶೀಲ್ದಾರ್‌ಗಳಾದ ನಯೀಂ ಉನ್ನೀಸಾ, ಆರತಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಾಕ್ಸ್
ಟೀಕಿಸುವುದೇ ವಿರೋಧ ಪಕ್ಷಗಳ ಕೆಲಸ
ಮೊಸರಲ್ಲಿ ಕಲ್ಲು ಹುಡುಕುವುದು, ಟೀಕೆ ಮಾಡುವುದೇ ವಿರೋಧ ಪಕ್ಷಗಳ ಕೆಲಸ. ಪಠ್ಯ ಪುಸ್ತಕಗಳ ಪರಿಷ್ಕರಣೆ ವಿಚಾರದಲ್ಲಿ ನೂರಕ್ಕೆ ನೂರರಷ್ಟು ರಾಜಕಾರಣ ಮಾಡುತ್ತಿದ್ದಾರೆ.  ಕೆಲವರಿಗೆ ಸರಕಾರದ ನೆಗೆಟಿವ್ ಹುಡುಕುವುದೇ ಕಾಯಕವಾಗಿದೆ. ಅವರಿಗೆ ಬೇರೆ ಕೆಲಸ ಇಲ್ಲ. ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಅವರು ನೋಡುವುದೇ ಇಲ್ಲ ಎಂದು
ಎಂದು ಕಂದಾಯ ಸಚಿವ ಆರ್. ಅಶೋಕ್  ವಾಗ್ದಾಳಿ ನಡೆಸಿದರು.
ಕೋಟ್
ಡಿ.ಕೆ. ಶಿವಕುಮಾರ್ ಅವರ ಮಂತ್ರಿಗಳಾಗಿ ಕೆಲಸ ಮಾಡಿದಂತಹವರು. ಈಗ ಪಠ್ಯವನ್ನು ಹರಿದು ಹಾಕಿ ಬಿಟ್ಟರೆ ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ಸಿಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಹೊಸ ಪಠ್ಯ ಪುಸ್ತಕವನ್ನು ಯಾರು ಓದಿದ್ದಾರೆ . ಈ ಹಿಂದೆ ಕಾಗೇರಿ ಅವರು ಶಿಕ್ಷಣ ಮಂತ್ರಿಯಾಗಿದ್ದಾಗ ಯಾವ ರೀತಿ ಪಠ್ಯ ಪುಸ್ತಕ ಇತ್ತು. ಸಿದ್ದರಾಮಯ್ಯನವರ ಸರಕಾರ ಬಂದ ಮೇಲೆ ಯಾರ ರೀತಿಯ ಪಠ್ಯ ಪುಸ್ತಕ ಇತ್ತು. ಆ ಬಗ್ಗೆಯೆಲ್ಲಾ ಯಾರೂ ಮಾತನಾಡುತ್ತಿಲ್ಲ. ಕೇವಲ ಸರ್ಕಾರದ ವಿರುದ್ಧ ಟೀಕೆ ಮಾಡುವುದೇ ಇವರ ಕೆಲಸವಾಗಿದೆ: ಅಶೋಕ್,ಕಂದಾಯ ಸಚಿವ.
ಪೋಟೋ: ಮಾಯಸಂದ್ರದ ದಲಿತರ ಮನೆಯಲ್ಲಿ ಸಚಿವ ಅಶೋಕ್ ಉಪಹಾರ ಸವಿದರು. ಅಧಿಕಾರಿಗಳು ಇದ್ದರು.