Saturday, 28th September 2024

Murder Case: ಆಸ್ತಿ ಕೇಳಿದ ಮುಸ್ಲಿಂ ತಂಗಿಯ ಇರಿದು ಕೊಂದ ಹಿಂದೂ ಅಣ್ಣ!

gadag crime news murder case

ಗದಗ: ಮದುವೆಯಾದ ಬಳಿಕ ಮುಸ್ಲಿಂ ಆಗಿ ಮತಾಂತರಗೊಂಡಿದ್ದ (religious conversion) ತಂಗಿ ಆಸ್ತಿಯಲ್ಲಿ ಪಾಲು ಕೇಳಿದ್ದರಿಂದ ರೊಚ್ಚಿಗೆದ್ದ ಅಣ್ಣ ಆಕೆಯನ್ನು ಇರಿದು ಕೊಂದ ಘಟನೆ (Murder case) ಗದಗ ಜಿಲ್ಲೆ (Gadag news, Gadag Crime news) ಮುಂಡರಗಿ ತಾಲೂಕಿನ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ನಡೆದಿದೆ.

ಕಾಳಮ್ಮ ಕ್ಯಾದಿಗೆಹಳ್ಳಿ (35) ಅಲಿಯಾಸ್ ಖುರ್ಷಿದಾ ಹತ್ಯೆಯಾದ ಮಹಿಳೆ ಆಗಿದ್ದಾಳೆ. ಕಾಳಮ್ಮ‌ನ ಅಣ್ಣ ಈಶ್ವರಪ್ಪ ಕ್ಯಾದಿಗೇಹಳ್ಳಿ ಕೊಲೆ ಮಾಡಿದ ಆರೋಪಿ. ಹಿಂದೂ ಧರ್ಮದಲ್ಲಿ ಹುಟ್ಟಿ ಬೆಳೆದ ಕಾಳಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಮೆಹಬೂಬ್‌ನನ್ನು ಮದುವೆ ಮಾಡಿಕೊಂಡು ಖುರ್ಷಿದಾ ಆಗಿ ಮತಾಂತರ ಆಗಿದ್ದಳು. ಈಗ ಆಕೆಯ ಅಣ್ಣ ಈಶ್ವರನ ಮನೆಗೆ ಬಂದು ನನಗೆ 15 ಎಕರೆ ಪಿತ್ರಾರ್ಜಿತ ಆಸ್ತಿ ಬೇಕು ಎಂದು ಕೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಅಣ್ಣ ಈಶ್ವರ್ ಕಾಳಮ್ಮ ಅಲಿಯಾಸ್ ಖುರ್ಷಿದಾಳನ್ನು ಹತ್ಯೆ ಮಾಡಿದ್ದಾನೆ.

ನನಗೆ ಪಿತ್ರಾರ್ಜಿತ ಆಸ್ತಿ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದ ಕಾಳಮ್ಮ ಅಲಿಯಾಸ್ ಖುರ್ಷಿದಾ ಮನೆಗೆ ಆಸ್ತಿ ವ್ಯಾಜ್ಯ ವಾಪಸ್ ಪಡೆಯುವಂತೆ ಆಕೆಯ ಅಣ್ಣ ಈಶ್ವರ್ ತೆರಳಿದ್ದಾನೆ. ಈ ವೇಳೆ ಮಾತು ಕೇಳದ ತಂಗಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಚಾಕು ಚುಚ್ಚಿದ ನಂತರ ಆಕೆ ಚೀರಾಡುತ್ತಾ ಬೇರೊಬ್ಬರ ಸಹಾಯಕ್ಕಾಗಿ ಬೊಬ್ಬೆ ಹೊಡೆಯುತ್ತಿದ್ದಾಗ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ವಿಕೃತಿ ಮೆರೆದಿದ್ದಾನೆ.

ಮುಂಡರಗಿ ತಾಲೂಕಿನ ಬೆಣ್ಣಿಹಳ್ಳಿಯಲ್ಲಿ 15 ಎಕರೆ ಜಮೀನು ವಿಚಾರವಾಗಿ ವ್ಯಾಜ್ಯ ನಡೆಯುತ್ತಿತ್ತು. ಪಿತ್ರಾರ್ಜಿತ ಆಸ್ತಿಗಾಗಿ ಕಾಳಮ್ಮ ಅಲಿಯಾಸ್ ಖರ್ಷಿದಾ ಕೇಸ್ ದಾಖಲಿಸಿದ್ದಳು. ಕಳೆದ 4 ವರ್ಷದ ಹಿಂದೆ ಕಾಳಮ್ಮ ಮನೆಯವರ ವಿರೋಧ ಕಟ್ಟಿಕೊಂಡು ಮೆಹಬೂಬ್ ಬೆಟಗೇರಿ ಎಂಬಾತನೊಂದಿಗೆ ಅಂತರ್ ಧರ್ಮೀಯವಾಗಿ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಬಳಿಕ ಈಕೆ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕು ಎಂದು ವ್ಯಾಜ್ಯ ಹೂಡಿದ್ದಳು. ಅಪ್ಪನಿಗೆ ಸೇರಿದ್ದ ಚಿಕ್ಕ ಮನೆಯಲ್ಲಿ ಕಾಳಮ್ಮ ಹಾಗೂ ಮೆಹಬೂಬ್ ವಾಸವಾಗಿದ್ದರು.

ಮದುವೆ ನಂತರವೂ ಅಪ್ಪನಿಗೆ ಸೇರಿದ ಮನೆಯಲ್ಲಿ ವಾಸ ಮಾಡುತ್ತಿದ್ದೀಯ. ಮನೆಯವರ ವಿರೋಧದೊಂದಿಗೆ ಮದುವೆ ಮಾಡಿಕೊಂಡು ಹೋಗಿದ್ದರೂ ಅಪ್ಪನ ಆಸ್ತಿ ಮೇಲೇಕೆ ಕಣ್ಣು ಹಾಕಿದ್ದೀಯಾ ಎಂದು ಅಣ್ಣ ಈಶ್ವರ ಜಗಳ ತೆಗೆದಿದ್ದ. ಇದೀಗ ಅಣ್ಣ – ತಂಗಿ ಆಸ್ತಿ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Gujarat Horror: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪ್ರಿನ್ಸಿಪಾಲ್‌