Thursday, 19th September 2024

Ganeshotsava Gauribidanur: ಗೌರಿಬಿದನೂರು ಬೈಪಾಸ್ ಗಣೇಶೋತ್ಸವಕ್ಕೆ 21ರ ಸಂಭ್ರಮ  

ಗೌರಿಬಿದನೂರು : ನಗರದ ಬೈಪಾಸ್ ಗಣೇಶೋತ್ಸವಕ್ಕೆ ೨೧ರ ಸಂಭ್ರಮ.೧೬ ದಿನಗಳು ಪರ್ಯಂತ ನಡೆಯುವ ಉತ್ಸವದಲ್ಲಿ ಹತ್ತು ಹಲವು ವಿಶೇಷಗಳಿದ್ದು ಗೌರಿಬಿದನೂರು ಗ್ರಾಮದ ಕೀರ್ತಿಯನ್ನು ದಶದಿಕ್ಕುಗಳಿಗೂ ಪಸರಿಸಿದೆ.

ಸೆಪ್ಟಂಬರ್ 7ರಂದು  ನಗರದ ಬೈಪಾಸ್ ವೃತ್ತದಲ್ಲಿ ಪ್ರತಿಷ್ಠಾಪನೆಯಾಗಿರುವ ಬೃಹತ್ ಗಣೇಶ ಮೂರ್ತಿಗೆ ನಿತ್ಯ ಹೋಮ ಹವನ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ತಂಡೋಪ ತಂಡವಾಗಿ ಕುಟುಂಬ ಸಮೇತವಾಗಿ ಬಂದು ದರ್ಶನ ಪಡೆಯುತ್ತಾರೆ. ಬೈಪಾಸ್ ವೃತ್ತದಲ್ಲಿ ನಡೆಯುವ ಹಿನ್ನಲೇ ಈ ಗಣಪನಿಗೆ ಬೈಪಾಸ್ ಗಣೇಶ ಎಂದೇ ಪ್ರಖ್ಯಾತಿ.

ಪ್ರತಿ ವರ್ಷದಂತೆ ಈ ಬಾರಿಯೂ 16 ದಿನಗಳ ಕಾಲ ನಡೆಯುವ ಪೂಜಾ ಕಾರ್ಯಗಳ ಜೊತೆಗೆ ಪ್ರತಿಭೆಗಳ ಅನಾ ವರಣಕ್ಕೆ ಬೈಪಾಸ್ ಗಣೇಶೋತ್ಸವ ಉತ್ತಮ ವೇದಿಕೆಯಾಗುತ್ತಿದೆ. ಸೆ.22 ರಂದು ಭಾನುವಾರ ಬೈಪಾಸ್ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ಮತ್ತು ವಿಜೃಂಭಣೆಯಾಗಿ ಆಚರಿಸಲು ವಿವಿಧ ಕಾರ್ಯಗಳನ್ನು ಆಯೋಜಿಸ ಲಾಗಿದೆ.

ಬೈಪಾಸ್ ಗಣೇಶೋತ್ಸವ ಕಾರ್ಯವು ಗೌರಿಬಿದನೂರು ಇತಿಹಾಸದ ಪುಟದಲ್ಲಿ ಈ ಬಾರಿಯೂ ಚಿರಸ್ಥಾಯಿಯಾಗಿ ಉಳಿಯಲು ಸಿದ್ದವಾಗುತ್ತಿದೆ. 16 ದಿನಗಳ ಸಂಭ್ರಮದ ಬೈಪಾಸ್ ಗಣೇಶೋತ್ಸವ ಶ್ರದ್ಧಾಭಕ್ತಿ ಪೂರ್ವಕ ಆಚರಣೆ ಮಾಡಲಾಗುತ್ತಿದ್ದು ಪ್ರತಿನಿತ್ಯ ಹೋಮ ಹವನ ಪೂಜಾ ಕೈಕಂರ್ಯಗಳ ಜೊತೆಗೆ ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿದ್ದವಾಗುತ್ತಿದೆ.

ಇನ್ನೂ ಸೆ.22 ರಂದು ಭವ್ಯ ಮೆರವಣಿಯ ನಂತರ ವಿಸರ್ಜನೆ ಹಮ್ಮಿಕೊಂಡಿದ್ದು ತಾಲ್ಲೂಕಿನಲ್ಲಿ ಇತಿಹಾಸ ಮರುಕಳಿಸುತ್ತಿರುವುದು ಸಂತಸವಾಗಿದೆ.ಬೈಪಾಸ್ ಗಣೇಶೋತ್ಸವದ ಇತಿಹಾಸ ಈ ಪುಣ್ಯ ಭೂಮಿಯಲ್ಲಿ ದಶಕಗಳಿಂದ ಬೈಪಾಸ್ ಗಣೇಶೋತ್ಸವ ಧಾರ್ಮಿಕ ಆಚರಣೆ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಸತತ ಎರಡು ದಶಕಗಳನ್ನು ಪೂರೈಸಿದ ಬೈಪಾಸ್ ಗಣೇಶೋತ್ಸವಕ್ಕೆ ಈ ಬಾರಿ 21 ರ ಸಂಭ್ರಮವಾಗಿದೆ.ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬೈಪಾಸ್ ಗಣೇಶೋತ್ಸವ ಆಚರಣೆಯು ಯುವಕರಲ್ಲಿ ಧಾರ್ಮಿಕತೆಯ ಕಿಚ್ಚು ಮೂಡಿಸಿದ ಸ್ವಯಂ ಪ್ರೇರಿತರಾಗಿ ಯುವಕರು 3-4 ತಿಂಗಳು ಕಾಲ ಶ್ರಮಿಸುವ ಮೂಲಕ ಗಣೇಶೋತ್ಸವಕ್ಕೆ ಎಲ್ಲ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ

ನಗರದ ಬೈಪಾಸ್ ವೃತ್ತದಲ್ಲಿಯೇ ವಿಭಿನ್ನವಾದ ಬೃಹತ್ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡಿ ಆಕರ್ಷಕ ವಾಗಿ ಹೂವಿನ ಪ್ರವೇಶ ದ್ವಾರ, ದೀಪಾಲಂಕಾರ ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತದೆ. ನಿತ್ಯ ಸಾವಿರಾರು ಮಂದಿ ಭಕ್ತಾದಿಗಳು ಗಣೇಶ ಮೂರ್ತಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಬಾರಿ ಗಣೇಶೋತ್ಸವ ಆಚರಣೆ ವೇಳೆ ಸಾಂಸ್ಕೃತಿಕ ಧಾರ್ಮಿಕ ಮತ್ತು ಮನರಂಜನೆ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ, ಶೈಕ್ಷಣಿಕ ಪ್ರೋತ್ಸಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡುವುದು ವಿಶೇಷವಾಗಿದೆ.

ನಗರದಲ್ಲಿ ನಡೆಯುವ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಕ್ಕಳು, ಯುವಕರು,ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನತೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಾರೆ.ಪ್ರತಿ ವರ್ಷವೂ ಮಾಡುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ಪುಣ್ಯದ ಕೆಲಸವಾಗಿದೆ ಎನ್ನುತ್ತಾರೆ ಸ್ಥಳೀಯ ಯುವಕರು. ಗಣೇಶ ಉತ್ಸವದ ಅದ್ದೂರಿ ಮತ್ತು ಅರ್ಥಪೂರ್ಣ ಆಚರಣೆಗೆ ಸಾವಿರಾರು ಮಂದಿ ಭಕ್ತರು ಸಹಾಯ ಹಸ್ತ ನೀಡುವ ಮೂಲಕ ಧಾರ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಬೆನ್ನೆಲುಬಾಗಿ ನಿಂತಿದ್ದಾರೆ.

ರೈತರು,ಅಧಿಕಾರಿಗಳು,ಜನಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು, ಸಿನಿಮಾ ರಂಗದ ತಾರೆಯರು ಸೇರಿದಂತೆ ಎಲ್ಲಾ ವರ್ಗದ ಜನ ಭಾಗವಹಿಸಿ ವೈಭವದ ಧಾರ್ಮಿಕ ಆಚರಣೆಗೆ ನೆರವಾಗುತ್ತಾರೆ. ಇವರ ಸಹಕಾರ ಮತ್ತು ಪ್ರೋತ್ಸಾಹ ದಿಂದ ಬೈಪಾಸ್ ಗಣೇಶೋತ್ಸವ ಸಮಿತಿ ಎಲ್ಲಾ ಯುವಕರು ಮತ್ತು ಪದಾಧಿಕಾರಿಗಳು ಪ್ರತಿವರ್ಷವೂ ವಿಶೇಷವಾಗಿ ಆಚರಿಸುತ್ತಾ ಬಂದಿದ್ದಾರೆ.