Friday, 20th September 2024

ಸಾಮೂಹಿಕ ಅತ್ಯಾಚಾರ ಪ್ರಕರಣ: 10 ಮಂದಿಗೆ ಷರತ್ತುಬದ್ಧ ಜಾಮೀನು ಮಂಜೂರು

ಧಾರವಾಡ : ಕಳೆದ ಜನೆವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ 19 ಆರೋಪಿಗಳ ಪೈಕಿ 10 ಮಂದಿಗೆ ಮಂಗಳವಾರ ಧಾರವಾಡ ಹೈಕೋರ್ಟ್ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಆರೋಪಿಗಳಾದ ಇಮ್ರಾನ್ ಜೇಕಿನಕಟ್ಟಿ (ಎ-5), ರೆಹಾನ್ ವಾಲೀಕಾರ (ಎ-6), ಮುಫೀದ್ ಓಣಿಕೇರಿ (ಎ-9), ಇಬ್ರಾಹಿಂ ಬಂಕಾಪುರ (ಎ-10), ಇಸ್ಮಾಯಿಲ್ ಹುಬ್ಬಳ್ಳಿ (ಎ-12), ನಿಯಾಜ್ ದರ್ಗಾ (ಎ- 14), ಮತ್ತು ಮೊಹಮ್ಮದ್ ಸಾದಿಕ್ ಕುಸನೂರ್ (ಎ-16), ಇಸ್ಮಾಯಿಲ್ ಓಣಿಕೇರಿ (ಎ-17), ಆಸಿಫ ಖಾನ್ ಪಯಾನ್ ಖಾನವರ್ (ಎ-18), ಮುಜಾಮಿಲ್ ಇಮ್ಮುಸಾಬನವರ್ (ಎ-19) ಎಂಬವರಿಗೆ ಜಾಮೀನು ಮಂಜೂರಾಗಿದೆ.

ಜನವರಿ 11ರಂದು ಹಾನಗಲ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 19 ಆರೋಪಿಗಳ ಪೈಕಿ 10 ಮಂದಿಗೆ 2 ಲಕ್ಷ ರೂ ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರಾ ಗಿದೆ.ವಿಚಾರಣೆಗೆ ನಿಯಮಿತವಾಗಿ ಹಾಜರಿರಬೇಕು. ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಇನ್ನು, ಪ್ರಕರಣದ 7 ಪ್ರಮುಖ ಆರೋಪಿಗಳಿಗೆ ಜಾಮೀನು ದೊರೆತಿಲ್ಲ.

ಕಳೆದ ಜನೆವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ಲಾಡ್ಜ್​ನಲ್ಲಿ ಜೋಡಿ ತಂಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲವು ಯುವಕರು ಲಾಡ್ಜ್​ಗೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದರು.ಬಳಿಕ ಹೊರಗೆ ಎಳೆದುಕೊಂಡು ಬಂದು ಇಬ್ಬರಿಗೂ ಬೆದರಿಕೆ ಹಾಕಿದ್ದರು.ಹಾನಗಲ್ ಸಮೀಪದ ಅರಣ್ಯ ಪ್ರದೇಶಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು.ನಂತರ ಸಂತ್ರಸ್ತ ಮಹಿಳೆಯ ಹೇಳಿಕೆಯ ಪ್ರಕಾರ ಜಡ್ಜ್ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರು.