Saturday, 26th October 2024

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಮೆ ಕಾರ್ಡ್ ಪಡೆಯಿರಿ

ತುಮಕೂರು ಗ್ರಾಮಾಂತರ: ಕುಟುಂಬದ ಪ್ರತಿಯೊಬ್ಬರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಮೆ ಕಾರ್ಡ್ ಪಡೆಯುವಂತೆ ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ||ಎಂ.ಸಿ ರಾಧಾಕೃಷ್ಣ ತಿಳಿಸಿದರು.

ಗ್ರಾಮಾಂತರದ ಬೆಳ್ಳಾವಿ ಹೋಬಳಿಯ ಸೋರೆಕುಂಟೆ ಪ್ರಾಥಮಿಕ ಉಪ ಆರೋಗ್ಯ ಕೇಂದ್ರದಲ್ಲಿ ಆಯಿಷ್ಮಾನ್ ಆರೋಗ್ಯ ವಿಮಾ ಕಾರ್ಡ್ ವಿತರಣೆಯಲ್ಲಿ ಭಾಗವಹಿಸಿ, ಫಲಾನುಭವಿಗಳಿಗೆ ವಿಮೆ ಕಾರ್ಡ್ ವಿತರಿಸಿ ಮಾತನಾಡಿದ ಅವರು,ದಿನೇ,ದಿನೇ ಆರೋಗ್ಯ ದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿದ್ದು, ಬಡವರು ಹೆಚ್ಚು ಹಣ ವ್ಯಯ ಮಾಡಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಬಡವರು, ಕೂಲಿ ಕಾರ್ಮಿಕರು, ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬ ಗಳಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶ ದಿಂದ ಕೇಂದ್ರ ಸರಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವಿಮೆ ಕಾರ್ಡ್ ನೀಡಲಾಗುತ್ತಿದೆ. ಆಯಾ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಡ್ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಕರೆ ನೀಡಿದರು.

6 ವರ್ಷ ಮೇಲ್ಪಟ್ಟ ಎಲ್ಲರು ವಿಮೆ ಕಾರ್ಡ್ ಪಡೆಯಬೇಕು, ಆಯಾ ಭಾಗದ ಕುಟುಂಬಸ್ಥರು,ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿಗಳೊಂದಿಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯಾಧಿಕಾರಿ ರಾಮಕೃಷ್ಣ,ಪ್ರಾಥಮಿಕ ಆರೋಗ್ಯ ಕೇಂದ್ರದ ಸಂರಕ್ಷಣಾಧಿಕಾರಿ ಮಲ್ಲಿಕಾ, ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ,ಆರೋಗ್ಯ ನಿರೀಕ್ಷಕ ಜಗದೀಶ್,ಆಶಾ ಕಾರ್ಯಕರ್ತೆ ಸುವರ್ಣಮ್ಮ,ಗ್ರಾಮ ಒನ್ ಡಿಟಿಒ ಹರೀಶ್ ಮುಂತಾದವರು ಭಾಗವಹಿಸಿದ್ದರು.