Thursday, 28th March 2024

ಜೈನ ಪ್ರವಾಸಿ ತಾಣ ರದ್ದುಪಡಿಸಲು ಆಗ್ರಹ

ತುಮಕೂರು: ಜೈನ ಸಮಾಜದ ಅತ್ಯಂತ ಪವಿತ್ರ ಸ್ಥಳವಾದ ಜಾರ್ಖಂಡ್‌ನ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣ ಎಂದು ಅಲ್ಲಿನ ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಜೈನ ಸಮುದಾಯದ ಮುಖಂಡರು ಪ್ರತಿ ಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಹಾವೀರ ಭವನದಿಂದ ನರಸಿಂಹರಾಜ ಪುರದ ಶ್ರೀಜ್ವಾಲ ಮಾಲಿನಿದೇವಿ ಆದಿಶಕ್ತಿ ಪೀಠದ ಶ್ರೀ ಲಕ್ಷ್ಮಿಸೇನ ಬಂಡಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೈನ ಸಮು ದಾಯ ದವರು ಪ್ರತಿಭಟನಾ ಮೆರವಣಿಗೆ ಎಂ.ಜಿ.ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ತಲುಪಿದ್ದು, ಶಿಖರ್ಜಿ ಕ್ಷೇತ್ರವನ್ನು ಜೈನರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಉಳಿಸಬೇಕು ಎಂಬ ನಾಮಫಲಕಗಳನ್ನು ಪ್ರದರ್ಶಿಸುವ ಮೂಲಕ ಸರಕಾರಕ್ಕೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ದರು.
ಈ ವೇಳೆ ಮಾತನಾಡಿದ ನರಸಿಂಹರಾಜಪುರದ ಶ್ರೀಜ್ವಾಲಮಾಲಿನಿ ದೇವಿ ಆದಿಶಕ್ತಿ ಪೀಠದ ಶ್ರೀ ಲಕ್ಷ್ಮಿ ಸೇನ ಬಂಡಾರಕ ಸ್ವಾಮೀಜಿ, ಜಾರ್ಖಂಡ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮದ ತೀರ್ಥಕ್ಷೇತ್ರ 20 ಜನ ಜೈನ ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ.ಜೈನ ಸಮುದಾಯಕ್ಕೆ ಈ ಕ್ಷೇತ್ರ ದರ್ಶನ ದಿಂದ ಸಕಲ ಪಾಪಗಳು ಕಳೆದು ಹೋಗುತ್ತವೆ ಎಂಬ ನಂಬಿಕೆ ಇದೆ.ಈ ಕ್ಷೇತ್ರದ ದರ್ಶನಕ್ಕಾಗಿ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿರುವ ಜೈನರು ಆಗಮಿಸುತ್ತಾರೆ ಎಂದರು
ಸಮುದ್ರ ಮಟ್ಟಕ್ಕಿಂತ ಸುಮಾರು 4472 ಅಡಿ ಎತ್ತರದಲ್ಲಿರುವ ಈ ಕ್ಷೇತ್ರವನ್ನು ಬ್ರಿಟಿಷರ ಆಳ್ವಿಕೆಯಲ್ಲಿಯೂ ಪವಿತ್ರ ಕ್ಷೇತ್ರವೆಂದು ಘೋಷಿಸಲ್ಪಟ್ಟಿತ್ತು.ಅಲ್ಲದೆ ಅಕ್ಬರ್ ರಾಜನಾಗಿದ್ದ ಕಾಲದಲ್ಲಿಯೂ ಈ ಪವಿತ್ರ ಕ್ಷೇತ್ರದ ಮಹತ್ವ ಅರಿತು ಇದನ್ನು ಧಾರ್ಮಿಕ ಕ್ಷೇತ್ರವೆಂದು ಆದೇಶ ಹೊರಡಿಸಿದ್ದು, ಸ್ವಾತಂತ್ರ ನಂತರದ ಸರಕಾರಗಳು ಜೈನರ ಪವಿತ್ರ ಕ್ಷೇತ್ರಗಳನ್ನು ರಕ್ಷಿಸುವಲ್ಲಿ ವಿಫಲ ವಾಗಿವೆ. ಜೈನರ ವಿರೋಧದ ನಡುವೆಯೂ ಜಾರ್ಖಂಡ್ ಸರಕಾರ ಶಿಖರ್ಜಿಯನ್ನು ಪ್ರವಾಸಿ ತಾಣವೆಂದು ಘೋಷಿಸಿರುವುದನ್ನು ಜೈನ ಸಮುದಾಯ ತೀವ್ರವಾಗಿ ಖಂಡಿಸು ತ್ತದೆ. ಕೂಡಲೇ ಸದರಿ ಆದೇಶ ರದ್ದು ಪಡಿಸಿ, ಧಾರ್ಮಿಕ ಕ್ಷೇತ್ರವೆಂದು ಘೋಷಿಸ ಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು  ನುಡಿದರು.
ದಿಗಂಬರ ಸಮಾಜದ ಅಧ್ಯಕ್ಷ ಎಸ್.ಜೆ.ನಾಗರಾಜು ಮಾತನಾಡಿ,ಜೈನ ಸಮುದಾಯದವರಿಗೆ ಸಮ್ಮೇದು ಶಿಖರ್ಜಿ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಜೀವಿತದ ಒಮ್ಮೆಯಾದರೂ ಈ ಕ್ಷೇತ್ರದ ಯಾತ್ರ ಮಾಡಬೇಕೆಂಬ ಪ್ರತೀತ ನಮ್ಮ ಸಮದಾಯದಲ್ಲಿದೆ.ಇಂತಹ ಧಾರ್ಮಿಕ ಪಾವಿತ್ರತೆ ಉಳ್ಳ ಸಮಾಜವನ್ನು ಪ್ರವಾಸಿ ತಾಣ ವೆಂದು ಘೋಷಿಸಿ, ಅಲ್ಲಿ ಎಲ್ಲಾ ರೀತಿಯ ಅನೈತಿಕ ಚಟುವಟಿಕೆಗಳು ನಡೆಯಲು ಅವಕಾಶ ಕಲ್ಪಿಸುವ ಮೂಲಕ ಕ್ಷೇತ್ರ ಅಪವಿತ್ರಗೊಳಿಸುವ ಹುನ್ನಾರವನ್ನು ಅಲ್ಲಿನ ಸರಕಾರ ಮಾಡಿದೆ. ಕೂಡಲೇ ಸದರಿ ಆದೇಶ ವನ್ನು ಹಿಂಪಡೆಯಬೇಕು ಎಂದರು.
ದಿಗಂಬರ ಹಾಗೂ ಶ್ವೇತಾಂಬರ ಜೈನ ಮುಖಂಡರಾದ ಸುರೇಶಕುಮಾರ್,ಪಚ್ಚೇಶ್ ಜೈನ ಮತ್ತಿತರರು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಾಹುಬಲಿ ಬಾಬು, ವಿನಯ್‌ಜೈನ್, ಮಹಾವೀರ ಜೈನ್,ಪದ್ಮರಾಜ್, ಶಾಂತ ಪ್ರಸಾದ್,ರಂಗನಾಥ್,ದಿನೇಶ್,ಶೀಥಲ್,ಜಲಜಾ ಜೈನ್,ಪ್ರಶಾಂತ್ ಜೈನ್,ಮಂಜುಳ,ಶ್ವೇತ  ಹಾಗೂ ಜೈನ ಸಮುದಾಯದವರು ಭಾಗವಹಿಸಿದ್ದರು.
error: Content is protected !!