Saturday, 26th October 2024

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯವಾಗಿದೆ : ಕೆ.ಎನ್.ರಘು

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟ ಮಾಡುವ ಮೂಲಕ ಎಲ್ಲ ಸಮುದಾಯಗಳ ಏಳಿಗೆಗಾಗಿ, ಯುವಜನತೆಗೆ ಉದ್ಯೋಗ ನೀಡುವ ಮೂಲಕ ಅಭಿವೃದ್ದಿಯ ಪಥದಲ್ಲಿ ತೆತೆದುಕೊಂಡು ಹೋಗಲು ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಎನ್. ರಘು ತಿಳಿಸಿದರು.

ತಾಲೂಕಿನ ಶ್ರೀಭೋಗನಂಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಚಿಕ್ಕಬಳ್ಳಾಪುರ ವಿಧಾನ ಸಭಾ ಚುನಾವಣೆಯ ಪ್ರಬಲ ಅಕಾಂಕ್ಷಿಯಾಗಿ ಅರ್ಜಿಸಲ್ಲಿಸಲು ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಇಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಸಚಿವ ಡಾ.ಕೆ.ಸುಧಾಕರ್ ಅಕಾರ ರಾಜಕಾರಣಕ್ಕೇರುವಂತಾಗಿದೆ.ಇವರ ಆಡಳಿತದಲ್ಲಿ ಕ್ಷೇತ್ರವು ಬಡವಾಗಿ ದೆಯೇ ವಿನಃ ಅಭಿವೃದ್ದಿಯನ್ನು ಕಂಡಿಲ್ಲ. ಅಭಿವೃದ್ದಿ ಆಗಿದೆ ಎನ್ನುವುದು ಬರೀ ಸುಳ್ಳಿನ ಮಾತು ಎಂಬುದು ಜನತೆಗೆ ಅರಿವಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪಕ್ಷವು ನನಗೇ ಟಿಕೆಟ್ ನೀಡುವ ಭರವಸೆ ನನಗಿದೆ. ನನ್ನನ್ನು ಸೇರಿದಂತೆ ಇನ್ನಿತರ ಮುಖಂಡರೂ ಇರುವುದು ನನಗೆ ಅರಿವಿದೆ. ಚಿಕ್ಕಬಳ್ಳಾರದ ದುರಾಡಳಿತ ತೊಲಗಿಸಲು ಯಾರೇ ಟಿಕೆಟ್ ಪಡೆದುಕೊಂಡು ಬಂದರೂ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು.ಬಹಳ ಮುಖ್ಯವಾಗಿ ನನಗೇ ಟಿಕೆಟ್ ನೀಡುತ್ತಾರೆಂಬ ಬಲವಾದ ನಂಬಿಕೆ ನನಗಿದೆ. ಏಕೆಂದರೆ ಕಳೆದ ಹಲವಾರು ವರ್ಷಗಳಿಂದ ನಾನು ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಕ್ಷೇತ್ರದ ಜನತೆಗೆ ಮುಟ್ಟಿದ್ದೇನೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜನತೆ ಸ್ವಯಿಚ್ಚೆಯಿಂದ ಬಂದರೆ ಬಿಜೆಪಿ ಕಾರ್ಯಕ್ರಮಗಳಿಗೆ ಹಣಕೊಟ್ಟು ಕರೆದರೂ ಜನತೆ ಹೋಗುತ್ತಿಲ್ಲ. ಇದೇ ಜನಾದೇಶ ಎಂದರು.

ಚಿಕ್ಕಬಳ್ಳಾಪುರ ಜನತೆ ಹಣ ಪಡೆದು ಮತಚಲಾಯಿಸುವರು ಎನ್ನುವ ಭ್ರಮೆಯಲ್ಲಿ ಕೆಲವರು ತೇಲಾಡುತ್ತಿದ್ದಾರೆ.ಅವರ ಕನಸು ಈಬಾರಿ ಈಡೇರುವುದಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಕಾರಕ್ಕೆ ಬರುವುದು ಖಚಿತ.ಬಿಜೆಪಿ ದೂರಾಡಳಿತ ದೂರವಾಗುವುದು ನಿಜ.ನಮ್ಮ ತಂದೆ ನಾಗಿರೆಡ್ಡಿ ಮಾಡಿರುವ ಕೆಲಸಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಆಗಲಿವೆ ಎಂದರು.

ಈ ವೇಳೆ ರಘು ಅವರ ಮಡದಿ ಕಾವ್ಯ ಕಾಂಗ್ರೆಸ್ ಮುಖಂಡರಾದ ನಾಯನಹಳ್ಳಿ ನಾರಾಯಣಸ್ವಾಮಿ, ಕಾರ್ಮಿಕ ಘಟಕದ ಕೋದಂಡ, ಶಂಕರ್,ಜಗದೀಶ್,ಮಂಗಳಾ ಪ್ರಕಾಶ್,ಮುಷ್ಟೂರು ನಾರಾಯಣಮ್ಮ, ಕಾರ್ಯಕರ್ತರು ಇದ್ದರು.