Thursday, 19th September 2024

Ganeshotsava: ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಕೆ

ವಿಶೇಷವಾಗಿ ಕೇರಳದ ವಾನಂಬಾಡಿ, ಚಂಡಮದ್ದಲೇ ನೃತ್ಯ ಆಗಮನ

ಕೊರಟಗೆರೆ: ಕೊರಟಗೆರೆ(Koratagere) ಪಟ್ಟಣದ ಇತಿಹಾಸದಲ್ಲೇ ಪ್ರಪಥಮ ಭಾರಿಗೆ ಎಲ್ಲಾ ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೈಸೂರು ದಸರಾ(Mysore Dasara) ವೈಭದಂತೆ ನಡೆಯಿತು.

ಪಟ್ಟಣದಲ್ಲಿ 14 ಗಣಪತಿಗಳನ್ನು ಒಟ್ಟಾಗಿ ಮೆರವಣಿಗೆ ಮಾಡಿದ ಐತಿಹಾಸಿಕ ದಿನವಾಯಿತು. ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜೀ, ತಹಶೀಲ್ದಾರ್ ಮಂಜುನಾಥ್‌ರವರ ಸಿಪಿಐ ಅನಿಲ್, ಪಿಎಸ್‌ಐ ಚೇತನ್‌ ಕುಮಾರ್‌ರವರ ನೇತೃತ್ವದಲ್ಲಿ ಕೊರಟಗೆರೆ ಪಟ್ಟಣದಲ್ಲಿ ಪ್ರಥಮ ಭಾರಿಗೆ ಒಂದೇ ದಿನ ಗಣಪತಿಗಳನ್ನ ವಿಸರ್ಜನೆ ಮಾಡಲು ತಿರ್ಮಾನದಿಂದ ಬುಧವಾರ ವಿಸರ್ಜನಾ ಕಾರ್ಯಕ್ರಮ ಯಶ್ವಸಿಗೊಳಿಸಿದರು.

ಪಟ್ಟಣದ ಗಣೇಶ ಸಮಾನ ಮನಸ್ಥಿತಿ ಗೆಳೆಯರ ಬಳಗ, ಕೊರಟಗೆರೆ ಸ್ನೇಹ ಬಳಗ ಸೇರಿದಂತೆ ಹಲವು ಸಂಘಟನೆಗಳು ಒಟ್ಟಾಗಿ ಕೈ ಜೋಡಿಸಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು, ಮರವಣಿಗೆಯಲ್ಲಿ ವಿವಿಧ ಜನಪದ ವಾದ್ಯಗಳು, ತಮಟೆ, ನಾಸಿಕ್ ಡೋಲ್‌ಗಳು, ಕೇರಳದ ವಾನಂಬಾಡಿ, ಚಂಡಮದ್ದಲೇ, ಹಕ್ಕಿ ಕುಣಿತ, ಕರ್ನಾಟಕದ ವೀರಗಾಸೆ, ದೇವಿಕುಣಿತ, ಸೇರಿದಂತೆ ವಿವಿಧ ವಾದ್ಯಗಳಿಗೆ ಜನರು ನೈತ್ಯದ ಮೂಲಕ ಹೆಜ್ಜೆ ಹಾಕಿದರು.

ಕೊರಟಗೆರೆ ಪೊಲೀಸ್ ಬಂದೋಬಸ್ತ್ನಲ್ಲಿ ಪಟ್ಟಣದ ಕೋಟೆ ವೆಂಕಟರವಣಸ್ವಾಮಿ ಕಲ್ಯಾಣಿಯಲ್ಲಿ ಗಣಪತಿಗಳನ್ನ ವಿಸರ್ಜಿಸಲಾಯಿತು. ಪಟ್ಟಣದ ಸತ್ಯಗಣಪತಿ ಸೇವಾ ಮಂಡಳಿಯಿ0ದ ಲಾಟರಿ ಯೋಜನೆ ಮಾಡಿದ್ದು ಬುಧವಾರ ಮದ್ಯಾಹ್ನ 12 ಗಂಟೆಗೆ ಬಸ್ವಾಂಡ್ ವೃತ್ತದಲ್ಲಿ ಸಾರ್ವಜನಿಕರ ಮುಂದೆ ಮಕ್ಕಳ ಮೂಲಕ ಲಾಟರಿ ಡ್ರಾ ಮಾಡಿ ಬಹುಮಾನ ವಿತರಿಸಿದರು.

ಭಾವೈಕ್ಯತೆ ಮೆರೆದ ಗಣೇಶ ವಿಸರ್ಜನೆ; ಪಟ್ಟಣದಲ್ಲಿ ಪ್ರಾರಂಭವಾದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಹಲವು ಮುಸ್ಲಿಂ ಬಾಂದವರು ಬಸ್ಟಾಂಡ್ ವೃತ್ತಕ್ಕೆ ಬಂದು ಸಾವಿರಾರು ಜನರಿಗೆ ಮಜ್ಜಿಗೆ ಪ್ಯಾಕೆಟ್‌ಗಳನ್ನು ವಿತರಿಸಿ ಗಣೇಶ ಮೆರವಣಿಗೆಗೆ ಬಂದು ಶುಭಕೊರಿದರು, ಹಾಗೂ ಮಕ್‌ಬುಲ್ ವೃತ್ತದಲ್ಲಿ ಮುಸ್ಲಿಂ ಮುಖಂಡರು ಗಣೇಶ ಮೆರವಣಿಗೆಯಲ್ಲಿ ಬಂದ ಭಕ್ತರಿಗೆ ತುಂಪಾನಿಯ, ಮಜ್ಜಿಗೆ, ನೀರನ್ನು ವಿತರಿಸಿ ಅಭಿನಂದಿಸಿದರು ಇದು ಭಾವೈಕ್ಯತೆ ಸಂಕೇತವಾಗಿ ಎಲ್ಲಾ ಮೆಚ್ಚಗೆಗೆ ಪಾತ್ರವಾಯಿತು.

ಪಟ್ಟಣದ ವಾರ್ಡ್ಗಲ್ಲಿ ಇಟ್ಟ ಗಣಪತಿಗಳು; ಗಣೇಶ ಮೆರವಣಿಗೆಯಲ್ಲಿ ಸತ್ಯಗಣಪತಿ, ಕಟ್ಟೆಗಣಪತಿ, ಕೋಟೆ ಗಣಪತಿ, ರಾಮಾಜಣ್ಣ ಗಣಪತಿ, ವಾಲ್ಮೀಕಿ ನಗರ ಗಣಪತಿ, ತಾಲ್ಲೂಕು ಕಚೇರಿ ಗಣಪತಿ, ಮೊದಲವಾರ್ಡ್ ಗಣಪತಿ, ದೊಡ್ಡಪೇಟೆ ಗಣಪತಿ, ವಿದ್ಯಾ ಗಣಪತಿ, ಸಿದ್ದಿಗಣಪತಿ, ಶಿವಗಣಪತಿ ಸೇರಿದಂತೆ ಹಲವು ಗಣಪತಿಗಳು ಮೆರವಣಿಗೆ ಯಲ್ಲಿ ಭಾಗವಹಿಸಿದರು.

ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿಎಸೈ ಚೇತನ್‌ಕುಮಾರ್ ನೇತೃತ್ವದಲ್ಲಿ ಸಿಪಿಐ 01 ಪಿಎಸೈ 06, ಎಎಸೈ 08, ಪೊಲೀಸ್ ಅಧಿಕಾರಿಗಳು 60, ಹೋಮ್ ಗಾರ್ಡ್ಸ್ 25 ಜನರ ತಂಡ ಬಂದೋಬಸ್ತ್ ಏರ್ಪಡಿಸಿ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.

ಮೆರವಣಿಗೆಯಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮಿಜಿ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ತಹಶೀಲ್ದಾರ್ ಕೆ. ಮಂಜುನಾಥ್, ಸಿಪಿಐ ಅನಿಲ್, ಪಿಎಸೈ ಚೇತನ್‌ಕುಮಾರ್ ಯೋಗೀಶ್, ಪಪಂ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಪೋಲೀಸ್ ಅಧಿಕಾರಿಗಳು ಸಿಬ್ಬಂದಿಗಳು 14 ಗಣಪತಿಗಳ ಅದ್ಯಕ್ಷರು ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.

ಇದನ್ನೂ ಓದಿ: Tumkur News: ಇಂಗ್ಲೀಷ್ ಪ್ರಭಾವದಿಂದ ಹಿಂದಿ ಭಾಷೆಗೆ ಹಿನ್ನಡೆ