Friday, 20th September 2024

MLA S N Subbareddy: ನಾಗರೀಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಜನಸ್ಪಂದನಾ ಕಾರ್ಯಕ್ರಮ ಉಪಯುಕ್ತ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

600ಕ್ಕೂ ಹೆಚ್ಚು ಅರ್ಜಿ ಅಲ್ಲಿಕೆ : ನಾನಾ ಸೌಲಭ್ಯಗಳ ೧೧೩೦ ಆದೇಶ ಪತ್ರಗಳ ವಿತರಣೆ; 10 ಮಂದಿಗೆ ಸಾಮೂಹಿಕ ಸೀಮಂತ

ಬಾಗೇಪಲ್ಲಿ: ಗ್ರಾಮೀಣ ಜನರು ಸರಕಾರಿ ಸೌಲಭ್ಯ ಸೇರಿದಂತೆ ಹಲವಾರು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಿದ್ದು, ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಪೈಪಾಳ್ಯದಲ್ಲಿ ತಾಲೂಕು ಕಂದಾಯ ಇಲಾಖೆ, ತಾಲೂಕು ಪಂಚಾಯತಿಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಪೋಲನಾಯಕನಹಳ್ಳಿ ಮತ್ತು ಜೂಲಪಾಳ್ಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ನಾಗರೀಕರ ಕುಂದು ಕೊರತೆಗಳನ್ನು ಪರಿಹರಿಸಲು ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು.

ಜನಸ್ಪಂದನಾ ಕಾರ್ಯಕ್ರದ ಮೂಲಕ ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಕಾಣಿಸಿಕೊಳ್ಳುವುದಲ್ಲದೆ, ಕಾರ್ಯಕ್ರಮ ನಡೆಯುವ ಗ್ರಾಮಕ್ಕೆ ಆಗಮಿಸಿ ಈ ಭಾಗದ ನಾಗರೀಕರ  ಸಮಸ್ಯೆಗಳನ್ನು ಖುದ್ದು ಆಲಿಸಿ, ಸ್ಥಳದಲ್ಲಿಯೇ ಪರಿಹಾರೋಪಾಯಗಳನ್ನು ನೀಡುತ್ತಾರೆ.ಹಾಗಾಗಿ ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

೬೦೦ ಕ್ಕೂ ಹೆಚ್ಚು ಅರ್ಜಿಗಳ ಸಲ್ಲಿಕೆ

ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಎರಡೂ ಗ್ರಾಮ ಪಂಚಾಯತಿಗಳ ವತಿಯಿಂದ 4 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ರಸ್ತೆ, ನಿವೇಶನ, ವಸತಿ, ಪಡಿತರ ಚೀಟಿ, ಸಾರಿಗೆ ಸಮಸ್ಯೆ, ಕುಡಿಯುವ ನೀರು ಸಮಸ್ಯೆ ಸೇರಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಗೃಹಲಕ್ಷ್ಮೀ, ಅನ್ನ ಭಾಗ್ಯ ಪಡಿತರ ಕಾರ್ಡ್,ಜಮೀನು ಸಮಸ್ಯೆ, ಜಮೀನಿಗೆ ರಸ್ತೆ ವ್ಯವಸ್ಥೆ, ವಿದ್ಯುತ್ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ 600 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಯಾಗಿವೆ ಎಂದು ಶಾಸಕರು ತಿಳಿಸಿದರು.

ನಾನಾ ಸೌಲಭ್ಯಗಳ ೧೧೩೦ ಆದೇಶ ಪತ್ರಗಳ ವಿತರಣೆ

ಜನಸ್ಪಂದನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ 300 ಕ್ಕೂ ಹೆಚ್ಚು ಪಿಂಚಣಿ, ಭಾಗ್ಯಲಕ್ಷ್ಮಿ ಬಾಂಡ್ , 90 ಮಂದಿಗೆ ಹಕ್ಕು ಪತ್ರಗಳನ್ನು, 21 ಗ್ರಾಮಗಳಿಗೆ ಸ್ಮಶಾನ ಮಂಜುರಾತಿ ಪತ್ರಗಳು, ಸಾಗುವಳಿ ಚೀಟಿ, ಖಾತೆಗಳು, ಮನೆ ಹಾನಿ, ಆಕಸ್ಮಿಕವಾಗಿ ಮರಣ ಹೊಂದಿದವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ಗಳು, ತಾಲೂಕು ಪಂಚಾ ಯತಿ ವತಿಯಿಂದ ನರೇಗಾ ಜಾಬ್ ಕಾರ್ಡ್, ಎನ್‌ಆರ್ ಎಲ್.ಎಮ್ ಯೋಜನೆ ಸೇರಿದಂತೆ ನಾನಾ ಯೋಜನೆಗಳ 1130 ಫಲಾನುಭವಿಗಳಿಗೆ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.

ಇದೇ ವೇಳೆ 10 ಮಂದಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಮಂಜುನಾಥರೆಡ್ಡಿ, ತಹಶೀಲ್ದಾರ್ ಮನಿಷಾ ಮಹೇಶ್.ಎಸ್.ಪತ್ರಿ,ಇಓ ರಮೇಶ್, ಬಿಇಓ ಎನ್.ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ, ಸರ್ಕಲ್ ಇನ್ಸ್ ಪೆಕ್ಟರ್ ಪ್ರಶಾಂತ್ ಆರ್ ವರ್ಣಿ, ಸಿಡಿಪಿಓ ರಾಮಚಂದ್ರ, ಮುಖಂಡರಾದ ಬೂರಗಮಡುಗು ನರಸಿಂಹಪ್ಪ, ಪಿ.ಮಂಜುನಾಥರೆಡ್ಡಿ, ಜೂಲಪಾಳ್ಯ ಮತ್ತು ಪೋಲನಾಯಕನಹಳ್ಳಿ ಗ್ರಾಮ ಪಂಚಾಯತಿಗಳ ಪಿಡಿಓ, ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.