Saturday, 26th October 2024

ಬಿಜೆಪಿ ಆಡಳಿತದ ಹಗರಣಗಳನ್ನು ತನಿಖೆಗೆ ಒಳಪಡಿಸಿ: ವಿಪ ಸದಸ್ಯ ರಾಜೇಂದ್ರ ಆಗ್ರಹ

ತುಮಕೂರು: ಬಿಜೆಪಿ ಆಡಳಿತದಲ್ಲಿ ನಡೆದಿರುವ  ಪಿ.ಎಸ್. ಐ ನೇಮಕಾತಿ , ನಲವತ್ತು ಪರ್ಸೆಂಟ್ ಕಮಿಷನ್ ಹಗರಣಗಳನ್ನು ಸಿ.ಬಿ.ಐ ತನಿಖೆಗೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಆಗ್ರಹಿಸಿದ್ದಾರೆ.
ಸುದ್ಧಿಗೋಷ್ಠಿಯನ್ನು ಮಾತನಾಡಿ, ಪಿ ಎಸ್ ಐ ಪರೀಕ್ಷೆಗೆ ಹಣ ನೀಡಿ ನೊಂದವರು ಹಣ ವಾಪಸು ಕೊಡಿಸುವಂತೆ ನನ್ನ ಬಳಿ ಬಂದಿದ್ದರು, ಹಣ ಪಡೆದ ಬಿಜೆಪಿ ಮುಖಂಡರು ವಾಪಸ್ಸು ನೀಡದೆ ಬ್ಲಾಕ್ ಮೇಲ್ ಮಾಡುತ್ತಾ ಬೆದರಿಕೆ ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದಲ್ಲಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಬೆಲೆ ಏರಿಕೆಯ ಪರಿಣಾಮ ಜನರ ಮೇಲೆ  ಬೀರುತ್ತಿದೆ. ನಾನು ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂದು ಹೇಳುವ ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಎಲ್ಲಾ ದುಬಾರಿ ಎಂದು ದೂರಿದರು.
ರಾಜಸ್ಥಾನ ದ ಸರಕಾರ ಶೇ. 1‌ ಕಮಿಷನ್ ಪಡೆದಿದಕ್ಕೆ ತನ್ನ ಮಂತ್ರಿಯನ್ನು ಬಂಧಿಸಿ ಎಫ್ ಐ ಆರ್ ಹಾಕಿಸಿದೆ.ರಾಜ್ಯದಲ್ಲಿ ಶೇ. 40 ಕಮಿಷನ್ ಆರೋಪ ಮಾಡಿ ಪ್ರಧಾನಿ ಮುಖ್ಯ ಮಂತ್ರಿಗಳಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ.
ಗುತ್ತಿಗೆದಾರ ಸಂತೋಷ ಸಹ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು.ಅಲ್ಲದೇ ಯಡ್ಡಿಯೂರಪ್ಪ ಮುಖ್ಯಮಂತ್ರಿ ಗಳಾಗಿ ದಾಗ ಈಶ್ವರಪ್ಪ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ 1200 ಕೋಟಿ ಅನುದಾನ ಸಚಿವನಾದ ನನ್ನ ಗಮನಕ ಬಾರದೆ ವಿನಿಯೋ ಗಿಸಲಾಗಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಈ ಬಗ್ಗೆ  ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪಠ್ಯ ಪುಸ್ತಕಗಳನ್ನು ಸರಕಾರ ವಾಪಸ್ಸು ಪಡೆಯಬೇಕು. ರೋಹಿತ್‌ ಚಕ್ರತೀರ್ಥ  ಕೋಮುವಾದಿ ಮನಸ್ಸು ಹೊಂದಿರುವ ವ್ಯಕ್ತಿಯಾಗಿದ್ದಾನೆ .ಈತ ಕುವೆಂಪು ಅವರ ನಾಡಗೀತೆಯನ್ನು ತಿರುಚಿ ಬರೆದುಕೊಂಡಿದ್ದರು. ಈತನನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷನನ್ನಾಗಿ ಮಾಡಿರುವುದು ದುರಂತ . ಶಿಕ್ಷಣ ಸಚಿವರು ಈ ಬಗ್ಗೆ ಎಚ್ಚೆತ್ತುಕೊಂಡು ಪಠ್ಯಪುಸ್ತಕ ವಾಪಸ್ಸು ಪಡೆಯ ಬೇಕು ಎಂದು ಹೇಳಿದರು.
ದಲಿತರ ಸಾವಿನ ಬಗ್ಗೆ ಏಕೆ ಮೌನ?: ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿ ಯಲ್ಲಿ ದಲಿತ ಯುವಕರ ಜೋಡಿ ಕೊಲೆಗೆ ಸಂಬಂಧಿಸಿ ದಂತೆ ಸ್ಥಳೀಯ  ಶಾಸಕರಾಗಲಿ, ಜಿಲ್ಲಾ ಉಸ್ತುವರಿ ಸಚಿವರು, ಗೃಹಮಂತ್ರಿಗಳು ಘಟನೆ ನಡೆದ ಸ್ಥಳಕ್ಕೂ ಸಹ ಭೇಟಿ ನೀಡದೆ  ತಾರತಮ್ಯ ಎಸಿಗಿದ್ದಾರೆ, ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ಇಡೀ ಸರ್ಕಾರವೇ ಅಲ್ಲಿ ಇತ್ತು. ದಲಿತರೆಂದರೆ ಯಾಕೆ ಈ ಅಸಡ್ಡೆ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಲ್ಲಳ್ಳಿ ದೇವರಾಜು, ಗಂಗಣ್ಣ, ಶಶಿಹುಲಿಕುಂಟೆ ಇತರರಿದ್ದರು.