Thursday, 19th September 2024

೫ಲಕ್ಷ ರೂ ಹಣ ಕ್ಷಣಾರ್ಧದಲ್ಲಿ ದೋಚಿದ ಕಳ್ಳರು

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಘಟನೆ  

ಚಿಂತಾಮಣಿ : ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಯಾಷ್ ಟೇಬಲ್ ಮುರಿದ ಕಳ್ಳರು ೫ ಲಕ್ಷ ರೂ ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಚಿಂತಾಮಣಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಧವಸಧಾನ್ಯ ಮಾರುಕಟ್ಟೆಯಲ್ಲಿ ಭಾನುವಾರ ನಡೆದಿದೆ.

ನಗರದ ಚೇಳೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೈಲಾಸ ಟ್ರೇಡರ್ಸ್ ಅಂಗಡಿಯ ಮಾಲೀಕರಾದ ಎಂ.ಎಲ್.ರಾಮಕೃಷ್ಣಪ್ಪ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಭಾನುವಾರ ಸಂತೆ ದಿನವಾಗಿದ್ದು ಹೆಚ್ಚಿನ ಮಂದಿ ಅಕ್ಕಿ ಖರೀದಿಗೆ ಬರುತ್ತಾರೆ.ಹೀಗೆ ಬಂದಿದ್ದ ಗಿರಾಕಿಯೊಬ್ಬರಿಗೆ ಎರಡು ಅಕ್ಕಿ ಮೂಟೆಗಳನ್ನು ಮಾರಾಟ ಮಾಡಿದ ನಂತರ ಪಕ್ಕದ ಅಂಗಡಿಯಲ್ಲಿ ತನಗೆ ಬೇಕಾದ ಅಕ್ಕಿ ಖರೀದಿ ಮಾಡುವ ಸಲುವಾಗಿ ಅಕ್ಕಿಯನ್ನು ನೋಡಲು ಹೋಗಿ ಬರುವಷ್ಟರಲ್ಲಿ, ಅಂಗಡಿಯಲ್ಲಿ ಬೀಗ ಹಾಕಿದ್ದ ಕ್ಯಾಷ್ ಟೇಬಲ್‌ನ ಡೋರ್ ಬಾಗಿಲು ಮುರಿದ ಕಳ್ಳರು ಕ್ಷಣಾರ್ಧದಲ್ಲಿ ೫ ಲಕ್ಷ ರೂಗಳನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಭಾನುವಾರ ಸಂತೆಯ ದಿನವಾಗಿರುವುದರಿಂದ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಅಂಗಡಿ ಯಲ್ಲಿ ಕೂಡ ಲಕ್ಷಾಂತರ ರೂ ಹಣದ ವ್ಯವಹಾರ ನಡೆಯುತ್ತಿದೆ. ಅದೇ ರೀತಿ ಕೈಲಾಸ್ ಟ್ರೇರ‍್ಸ್ ಮಾಲೀಕರು ಇಂದು ಮಾರಾಟ ಮಾಡಿದ್ದ ಅಕ್ಕಿಯ ಹಣವನ್ನು ಕ್ಯಾಷ್ ಟೇಬಲ್‌ನಲ್ಲಿ ಇಟ್ಟಿರುವುದನ್ನು ಗಮನಿಸಿರುವ ಖತರ್‌ನಾಕ್ ಕಳ್ಳರು ಈ ಕೃತ್ಯ ನಡೆಸಿದ್ದಾರೆ.

ಈ ಘಟನೆಯಿಂದ ದಿಗ್ಬಾçಂತರಾಗಿರುವ ಅಂಗಡಿಯ ಮಾಲೀಕ 55 ವರ್ಷದ ಎಂ.ಎಲ್, ರಾಮಕೃಷ್ಣರವರು ಆಘಾತ ದಿಂದ ಚೇತರಿಸಿಕೊಂಡು ಚಿಂತಾಮಣಿ ನಗರಠಾಣೆಗೆ ಬಂದು ಭಾನುವಾರ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಸಹ ಕರೆಸಿ ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.