Saturday, 26th October 2024

ರೌಡಿ ಶೀಟರ್ ರಾಜಾ ಕೊಲೆ ಪ್ರಕರಣ: ದಾಳಿ, ಪ್ರತಿದಾಳಿ

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರೌಡಿ ಶೀಟರ್ ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವ ವೇಳೆಯಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಿದ್ದು, ಪೊಲೀಸರು ಆರೋಪಿಗಳ ಮೇಲೆ ಫೈರ್ ಮಾಡಿದ್ದಾರೆ.

ಗ್ಲೋಬಲ್ ಹೆರಿಟೇಜ್ ಲೇಔಟ್ ನಲ್ಲಿ ಘಟನೆ ನಡೆದಿದ್ದು, ರಾಜಾ ಕೊಲೆ ಆರೋಪಿಗಳಾದ ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಯಾನ್ ಬಿಂದಾಸ್ ಮನೋಜ್ ಈ ಲೇಔಟ್ ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿದೆ.

ಪೊಲೀಸರು ಮತ್ತು ಆರೋಪಿಗಳ ನಡುವೆ ಘರ್ಷಣೆಯಾಗಿದ್ದು, ಹರಿತವಾದ ಆಯುಧ ದಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳು ಹರಿತವಾದ ಆಯುಧ ಬಳಸುತ್ತಿದ್ದಂತೆಯೇ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಆರೋಪಿಗಳ ಮೇಲೆ ಫೈರ್ ಮಾಡಿದ್ದಾರೆ. ಒಟ್ಟು ಐದು ಸುತ್ತು ಫೈರ್ ಆಗಿದ್ದು ಮೂರು ಸುತ್ತು ಗಾಳಿಯಲ್ಲಿ ಗುಂಡು ಮತ್ತು ಎರಡು ಸುತ್ತು ಇಬ್ಬರು ಆರೋಪಿಗಳ ಕಾಲಿಗೆ ಫೈರ್ ಮಾಡಿದ್ದಾರೆ.

ಘಟನೆಯಲ್ಲಿ ಸಿಸಿಬಿ ಪಿಎಸ್‌ಐ ನಾಗೇಂದ್ರ,ಸಿಸಿವಿ ಎಎಚ್ ಸಿ ಸಂತೋಷ್, ಎಎಸ್‌ಐ ಡೇವಿಡ್ ಎಂಬುವವರಿಗೆ ಕೈಗೆ ಮತ್ತು ಮುಖದ ಭಾಗಕ್ಕೆ ಗಾಯವಾಗಿದೆ. ಗಾಯಾಳು ಪೊಲೀಸರನ್ನು ಸುರತ್ಕಲ್ ನ‌ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.