Saturday, 26th October 2024

ಸಿದ್ದರಾಮಯ್ಯನವರು ಕೊಟ್ಟಿದ್ದು ಅಕ್ಕಿ ಅಲ್ಲ, ಕೇವಲ ಚೀಲ

ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಟ್ಟಿದಾಗಲೇ ಕಾಂಗ್ರೆಸ್‌ನಲ್ಲಿರಲಿಲ್ಲ. ಜನತಾದಳದಲ್ಲಿದ್ದು ಎಲ್ಲಾ ಬಗೆಯ ಅಧಿಕಾರ ಅನುಭವಿಸಿದ ಅವರು, ಅಧಿಕಾರದ ಆಸೆಗಾಗಿಯೇ ಕಾಂಗ್ರೆಸ್‌ಗೆ ಬಂದರು. ಇವರು ಮಾಡಿದ ಪಾಪದ ಕೆಲಸದಿಂದಾಗಿಯೇ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಅಜ್ಜವಾರದಲ್ಲಿ ೪೯೪ ಕುಟುಂಬಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.

ಕಾಂಗ್ರೆಸ್‌ನವರು ಪ್ರಜಾ ಧ್ವನಿ ಯಾತ್ರೆಯ ಹೆಸರಿನಲ್ಲಿ ನನ್ನ ವಿರುದ್ಧ ಪ್ರಚಾರ ಸಭೆ ಮಾಡಿದ್ದಾರೆ. ಆದರೆ ನಾನು ಅವರ ವಿರುದ್ದ ಮಾಡಿದ ಆರೋಪ ಗಳಿಗೆ ಒಂದೇ ಒಂದು ಉತ್ತರ ನೀಡಲು ಸಾಧ್ಯ ವಾಗಿಲ್ಲ. ಆದರ ಬದಲಿಗೆ ವೈಯಕ್ತಿಕ ಆರೋಪವನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿದ್ದವರು, ಸಚಿವರಾಗಿದ್ದವರು, ಜನಪ್ರತಿನಿಧಿಗಳು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂದು ಮೊದಲು ಕಲಿಯಬೇಕು. ಬಾರ್‌ನಲ್ಲಿ ಕುಡಿದು ಬಂದAತೆ ಸಭೆಯಲ್ಲಿ ಮಾತನಾಡಬಾರದು ಎಂದರು.

ಕಾAಗ್ರೆಸ್‌ನಲ್ಲಿ ನನಗೆ ಟಿಕೆಟ್ ದೊರೆಯುವಲ್ಲಿ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. ನನಗೆ ೨೦೧೩ರಲ್ ಟಿಕೆಟ್ ಕೊಡಿಸಿದ್ದು ನನ್ನ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ಹಾಗೂ ಡಾ.ಜಿ.ಪರಮೇಶ್ವರ್ ಅವರು. ನಾನು ಸಿದ್ದರಾಮಯ್ಯ ಅವರ ಬಳಿ ಟಿಕೆಟ್ ಗಾಗಿ ಏನೂ ಸಹಾಯ ಕೇಳಿಯೇ ಇಲ್ಲ. ಶಾಸಕನಾದ ಬಳಿಕ ನನ್ನನ್ನು ವಿಶ್ವಾಸದಿಂದ ನೋಡಿದ್ದಾರೆ. ಆಗ ನಾನೂ ಅವರನ್ನು ಸಮರ್ಥನೆ ಮಾಡಿದ್ದೆ. ಆದರೆ ತಪ್ಪು ಮಾಡಿದಾಗ ಅದನ್ನು ನೇರವಾಗಿ ಖಂಡಿಸಿದ್ದೇನೆ ಎಂದರು.

ಚುನಾಯಿತ ಪ್ರತಿನಿಧಿಗಳು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕು. ಆದರೆ ಆ ಎಲ್ಲಾ ಗುಣಮಟ್ಟ ಬಿಟ್ಟು ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಇದ್ದರೇ? ಅವರು ಮೊದಲು ಜನತಾದಳದಲ್ಲಿದ್ದರು. ಅದೇ ಪಕ್ಷದಲ್ಲಿದ್ದು ಸಚಿವ, ಉಪಮುಖ್ಯಮಂತ್ರಿಯಾದರು. ಅಂದಮೇಲೆ ಕಾಂಗ್ರೆಸ್ ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗೆ ಮಾಡುವಾಗ, ಯುವಕರಾದವರು ನಾವೇನು ಮಾಡಬೇಕು? ಸಿದ್ದರಾಮಯ್ಯನವರು ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ, ಅನೈತಿಕವಾಗಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಲು ನಮ್ಮನ್ನು ಬಲಿಪಶು ಮಾಡಿದ್ದರು ಎಂದರು.

ನಾನು ನನ್ನ ಫಲಿತಾಂಶ ನೋಡಿ ದೇವನಹಳ್ಳಿಗೆ ಹೋಗುವ ವೇಳೆಗೆ ಸಿದ್ದರಾಮಯ್ಯನವರು ಜನತದಾಳದ ಕೈ ಹಿಡಿದುಕೊಂಡುಬಿಟ್ಟಿದ್ದರು. ಇದು ಸರಿಯಲ್ಲ, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಸ್ಪಷ್ಟವಾಗಿ ಹೇಳಿದ್ದೆ. ಸಿದ್ದರಾಮಯ್ಯನವರ ಮನೆಗೆ ಹೋಗಿ ಮಾತನಾಡಿದಾಗ, ರಾಹುಲ್ ಗಾಂಧಿಯವರ ಮಾತಿನಂತೆ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಹೇಳಿದ್ದರು. ಆದರೆ ನಾವೇನೂ ಒಪ್ಪಿಕೊಳ್ಳಬೇಕು ಎಂದೇನಿಲ್ಲ ಎಂದರು.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತಾವೇ ತಂದಿದ್ದು ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಬಂದು ಆರು ವರ್ಷದ ಮಗುವನ್ನು ಕೇಳಿದರೂ ಯಾರು ಈ ಯೋಜನೆ ತಂದಿದ್ದು ಎಂದು ಹೇಳುತ್ತದೆ. ಎಚ್‌ಎನ್ ವ್ಯಾಲಿ ಬಗ್ಗೆ ಇವರಿಗೆ ಗೊತ್ತೇ ಇರಲಿಲ್ಲ. ಶಿವಶಂಕರರೆಡ್ಡಿ ಹಾಗೂ ರಮೇಶ್‌ಕುಮಾರ್ ಅವರಿಗೂ ಗೊತ್ತೇ ಇರಲಿಲ್ಲ. ಇದೇ ಸಿದ್ದರಾಮಯ್ಯನವರು, ಎಚ್‌ಎನ್ ವ್ಯಾಲಿ ಯೋಜನೆ ಜಾರಿಯಾಗಲು ಸುಧಾಕರ್ ಕಾರಣ ಎಂದು ಇಲ್ಲಿಗೇ ಬಂದು ಭಾಷಣ ಮಾಡಿದ್ದರು. ಅಂದು ಒಂದು ಮಾತನಾಡುತ್ತಾರೆ, ಈಗ ಮತ್ತೊಂದು ಮಾತನಾಡುತ್ತಾರೆ. ಭಾಷಣ ಮಾಡಲಿ, ಆದರೆ ಅದರಲ್ಲಿ ಸತ್ಯ ಇರಬೇಕು ಎಂದರು.

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ವಂತ ಅನುದಾನದಿಂದ ಮಾಡಿದ್ದೇನೆ. ನಿವೇಶನಗಳನ್ನು ನೀಡಿದ್ದೇನೆ. ಮನೆಗಳನ್ನು ಗ್ರಾಮ ಸಭೆಯಲ್ಲೇ ಆಯ್ಕೆ ಮಾಡುವ ಕೆಲಸ ಮಾಡಿದ್ದೇನೆ. ನನಗೆ ನನ್ನ ಜನರ ಬಗ್ಗೆ ಬದ್ಧತೆ ಇದೆ. ನನ್ನ ವಿರುದ್ಧ ಅಭ್ಯರ್ಥಿ ಇಲ್ಲದೆ ಹೊರಗಿನಿಂದ ಇಂಪೋರ್ಟ್ ಮಾಡಿಕೊಳ್ಳಲು ಹೊರಟಿದ್ದಾರೆ. ಅಕ್ರಮವಾಗಿ ದಲಿತ ಎಂಬ ಪ್ರಮಾಣಪತ್ರ ಪಡೆದು ಶಾಸಕರಾದವರನ್ನು ನನ್ನ ವಿರುದ್ಧ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಹಾಗೆ ಅಕ್ರಮವಾಗಿ ಪ್ರಮಾಣಪತ್ರ ಹೊಂದಿದವರು ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದರು.

ಕ್ಷೇತ್ರ ಹುಡುಕಾಟ: ಸಿದ್ದರಾಮಯ್ಯನವರು ಒಂದೊ0ದೇ ಕ್ಷೇತ್ರ ಹುಡುಕಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ, ಬಳಿಕ ಕೋಲಾರಕ್ಕೆ ಹೋಗಿದ್ದಾರೆ. ಪ್ರತಿ ಬಾರಿ ಅನ್ನಭಾಗ್ಯ ಕೊಟ್ಟೆ, ಅಕ್ಕಿ ಕೊಟ್ಟೆ ಎಂದು ಹೇಳುತ್ತಾರೆ. ವಾಸ್ತವ ಏನೆಂದರೆ, ಈ ಯೋಜನೆಯಲ್ಲಿ ಒಂದು ಕೆಜಿ ಅಕ್ಕಿಗೆ ೩೨ ರೂ.ನಲ್ಲಿ ೨೯ ರೂ. ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡುತ್ತಿದೆ. ಆದರೆ ಪ್ರಧಾನಿ ಮೋದಿ ಅದನ್ನು ಹೇಳಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯ ನವರು ಅಕ್ಕಿ ನೀಡಲಿಲ್ಲ, ಕೇವಲ ಚೀಲ ನೀಡಿದರು ಎಂದರು.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾನು ಕೇಳಿದ್ದೇನೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್ ಮೊತ್ತ ಹೆಚ್ಚಳ ಮಾಡಿದ್ದು ಏಕೆ ಎಂದು ಕೇಳಿದ್ದೆ. ಆದರೆ ಅದಕ್ಕೆ ಯಾರೂ ಉತ್ತರ ನೀಡಲಿಲ್ಲ. ಇಂತಹ ಸರ್ಕಾರದ ಮಟ್ಟದ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರು ಉತ್ತರ ನೀಡಿಲ್ಲ. ಆದರೆ ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡುತ್ತಾರೆ. ಕೇವಲ ರಾಜಕೀಯ ಕೆಸರೆರೆಚಾಟ ಮಾಡುತ್ತಾರೆ. ಅವರು ಮುಖ್ಯಮಂತ್ರಿಯಾಗಲು ನನ್ನ ಸಹಕಾರವೂ ಕಾರಣ. ಹಿಂದೆ ಇಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿರಲಿಲ್ಲ. ಇಲ್ಲಿ ಜನತಾದಳದ ಶಾಸಕರಿದ್ದರು. ನಾನು ಬಂದ ಮೇಲೆ ದಳದಲ್ಲಿದ್ದ ಸೀಟನ್ನು ಕಾಂಗ್ರೆಸ್‌ಗೆ ನೀಡಿದೆ. ಆದರೆ ಸಿದ್ದರಾಮಯ್ಯನವರು ಮಾಡಿದ ಪಾಪದ ಕೆಲಸದಿಂದ ನಾನು ಕಾಂಗ್ರೆಸ್ ತೊರೆಯಬೇಕಾಯಿತು. ವ್ಯಕ್ತಿಯ ಚಾರಿತ್ರ‍್ಯಹರಣ ಮಾಡುವುದು ಬಹಳ ಸುಲಭ, ಆದರೆ ಅದನ್ನು ಗಳಿಸುವುದು ಕಷ್ಟ ಎಂದರು.