Sunday, 8th September 2024

ವಿಜಯಪುರ ಜಿಲ್ಲೆ ಮರುನಾಮಕರಣಕ್ಕೆ ಕಾಂಗ್ರೆಸ್ ಸರ್ಕಾರ ಚಿತ್ತ

ವಿಜಯಪುರ: ಬಿಜಾಪುರವನ್ನು ವಿಜಯಪುರ ಎಂದು ಮರುನಾಮಕರಣ ಮಾಡಿದ ಕಾಂಗ್ರೆಸ್ ಸರ್ಕಾರ ಮತ್ತೆ ಜಿಲ್ಲೆಗೆ ಮರುನಾಮಕರಣ ಮಾಡುವತ್ತ ಚಿತ್ತ ಹರಿಸಿದೆ.

ಇದೀಗ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ಹೆಸರನ್ನು ವಿಜಯಪುರಕ್ಕೆ ಮರುನಾಮಕರಣ ಮಾಡಲು ಸರಕಾರ ಮುಂದಾಗಿದೆ.

ಬಸವೇಶ್ವರರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ಜನಿಸಿದ್ದರು.

ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಬಸವೇಶ್ವರರ ಹೆಸರನ್ನು ಜಿಲ್ಲೆಗೆ ಮರುನಾಮ ಕರಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬ್ಲನ್ ತಿಳಿಸಿದ್ದಾರೆ.

ಬಸವೇಶ್ವರರ ಕೊಡುಗೆಗಳನ್ನು ಪರಿಗಣಿಸಿ ಸರ್ಕಾರವು ಜಿಲ್ಲೆಯನ್ನು ‘ಬಸವೇಶ್ವರ ಜಿಲ್ಲೆ’ ಅಥವಾ ‘ಬಸವ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಬಯಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಚುನಾಯಿತ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ಎನ್‌ಜಿಒಗಳು ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿದೆ. 15 ದಿನಗಳೊಳಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಇದೇ ವೇಳೆ ಕಾಂಗ್ರೆಸ್, ದಲಿತ ಸಮುದಾಯದ ಕೆಲವರು ಸೇರಿದಂತೆ ಹಲವು ಮುಖಂಡರು, ಇತಿಹಾಸಕಾರರು ಜಿಲ್ಲೆಗೆ ಮತ್ತೆ ನಾಮಕರಣ ಮಾಡುವ ವಿಚಾರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಹೆಸರು ಬದಲಿಸುವ ಸರ್ಕಾರದ ನಿರ್ಧಾರ ವಿರೋಧಿಸಿದ ಇತಿಹಾಸಕಾರ, ಲೇಖಕ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಕೊಲ್ಹಾರ ಕುಲಕರ್ಣಿ, ಜಿಲ್ಲೆಯ ಹೆಸರನ್ನು ಮತ್ತೆ ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!