Thursday, 19th September 2024

ಅಮೆರಿಕದ ಜನಪ್ರತಿನಿಧಿಗಳು, ಸಿಖ್‌ ಪ್ರಮುಖರಿಂದ ಬೆಂಬಲ ವ್ಯಕ್ತ

ವಾಷಿಂಗ್ಟನ್: ನೂತನ ಕೃಷಿ ಕಾಯ್ದೆಗಳನ್ನು ರದ್ದಗೊಳಿಸುವಂತೆ ಭಾರತದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಅಮೆರಿ ಕದ ಕೆಲವು ಜನಪ್ರತಿನಿಧಿಗಳು ಹಾಗೂ ಸಿಖ್‌ ಸಮುದಾಯದ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ತಮ್ಮ ಜೀವನೋಪಾಯಕ್ಕಾಗಿ ಹಾಗೂ ತಮ್ಮನ್ನು ದಾರಿತಪ್ಪಿಸುತ್ತಿರುವ ಸರ್ಕಾರದ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ಪಂಜಾಬ್‌ ರೈತರ ಬೆಂಬಲಕ್ಕೆ ನಿಲ್ಲುತ್ತಿದ್ದೇನೆ’ ಎಂದು ಕೆಳಮನೆ ಸಂಸತ್ತಿನ ಸದಸ್ಯ ಡೌಕ್‌ ಲಾಮಲ್ಫಾ ಹೇಳಿದ್ದಾರೆ. ‘ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ಪಂಜಾಬ್‌ನ ರೈತರಿಗೆ ಅವಕಾಶ ನೀಡಬೇಕು’ ಎಂದು ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಭಾರತದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭತ್ವ ರಾಷ್ಟ್ರವಾಗಿದೆ. ತಮ್ಮ ನಾಗರಿಕರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅಲ್ಲಿನ ಸರ್ಕಾರ ಅವಕಾಶ ಕೊಡಬೇಕು. ಪ್ರಧಾನಿ ಮೋದಿಯವರು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸುವುದನ್ನು ನಾನು ಪ್ರೋತ್ಸಾಹಿಸುತ್ತೇನೆ’ ಎಂದು ಡೆಮಾಕ್ರಟಿಕ್ ಪಕ್ಷದ ಕೆಳಮನೆ ಸದಸ್ಯ ಜೋಶ್ ಹಾರ್ಡರ್ ಹೇಳಿದ್ದಾರೆ.

‘ಶಾಂತಿಯುತ ಪ್ರದರ್ಶನದ ಹಕ್ಕನ್ನು ಭಾರತ ಎತ್ತಿಹಿಡಿಯಬೇಕು ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಮತ್ತೊಬ್ಬ ಸದಸ್ಯ ಟಿ ಜೆ ಕಾಕ್ಸ್ ಹೇಳಿದ್ದಾರೆ. ಅಮೆರಿಕದಲ್ಲಿರುವ ಸಿಖ್‌ ಸಮುದಾಯದ ಮುಖಂಡರು ಸೋಮವಾರ ರೈತರ ಬೇಡಿಕೆಗಳನ್ನು ಸ್ವೀಕರಿಸಿ, ಅವರೊಂದಿಗೆ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದರು.