DK Shivakumar: ನಾಳೆ ಸಚಿವ ಸಂಪುಟ ಸಭೆ ಹೊರತಾಗಿ ಉಳಿದ ಎಲ್ಲ ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ: ಡಿಕೆಶಿ
18 ವರ್ಷಗಳ ಸುದೀರ್ಘ ಅವಧಿ ಬಳಿಕ ತಮ್ಮ ನೆಚ್ಚಿನ ತಂಡ ಗೆದ್ದಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನ ತಮ್ಮ ಕೆಲಸ, ಕಾರ್ಯ ಬಿಟ್ಟು ಕ್ರಿಕೆಟ್ ಆಟಗಾರರನ್ನು ಕಣ್ತುಂಬಿಕೊಳ್ಳಲು ಬಂದಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ನಾಳೆ ಸಚಿವ ಸಂಪುಟ ಸಭೆ ಹೊರತು ಪಡಿಸಿ ವಿಶ್ವ ಪರಿಸರ ದಿನ ಸೇರಿದಂತೆ ಉಳಿದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ. ಪೊಲೀಸರು ಮುಂಜಾಗೃತಾ ಕ್ರಮವಾಗಿ ತೆರೆದ ವಾಹನ ಮೆರವಣಿಗೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಇದೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಈಗ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಬಂಧ ಸಿಎಂ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಬುಧವಾರ ರಾತ್ರಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಕಾಲ್ತುಳಿತದ ಸಾವುಗಳಿಗೆ ಸರ್ಕಾರವೇ ಹೊಣೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, ʼʼಬುಧವಾರ ಬೆಳಗ್ಗೆ ವಿಮಾನ ನಿಲ್ದಾಣದಿಂದಲೇ ಮೆರವಣಿಗೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದರು. ಈ ತೀರ್ಮಾನವನ್ನು ಖಂಡಿಸಿದ್ದ ಬಿಜೆಪಿ, ಪರಮೇಶ್ವರ್ ಅವರನ್ನು ಅಸಮರ್ಥ ಗೃಹಮಂತ್ರಿ ಎಂದು ಕರೆದು ಮುಂಜಾಗೃತಾ ಕ್ರಮವಾಗಿ ಪೊಲೀಸರು ಕೈಗೊಂಡ ಕ್ರಮವನ್ನು ಎಕ್ಸ್ ಖಾತೆಯಲ್ಲಿ ಟೀಕಿಸಿತ್ತುʼʼ ಎಂದು ಅವರು ಆರೋಪಿಸಿದರು.
ʼʼಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ವಿಮಾನ ನಿಲ್ದಾಣಕ್ಕೆ ತೆರಳಿದೆ. ವಿಧಾನಸೌಧದ ಕಾರ್ಯಕ್ರಮದ ವೇಳೆ ಕಬ್ಬನ್ ಪಾರ್ಕ್ ಗೇಟ್ ಅನ್ನು ಮುಚ್ಚಿ ಅಗತ್ಯವಾದ ಕ್ರಮ ಕೈಗೊಳ್ಳಲಾಯಿತುʼʼ ಎಂದು ಹೇಳಿದರು. ʼʼಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಸೇರುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಜನದಟ್ಟಣೆ ಹೆಚ್ಚಾದ ಪರಿಣಾಮ ನಾವು 2 ತಾಸುಗಳ ಕಾಲ ಮೆಟ್ರೋ ಸಂಚಾರವನ್ನು ನಿಲ್ಲಿಸಿದ್ದೆವು. ಇಷ್ಟೆಲ್ಲ ಮಾಡಿದರೂ ಬಿಜೆಪಿ ಇದರಲ್ಲಿ ರಾಜಕಾರಣ ಮಾಡುತ್ತಿದೆʼʼ ಎಂದು ದೂರಿದರು.
ʼʼಇದೇ ಸಿ.ಟಿ. ರವಿ ಹಾಗೂ ಬಿಜೆಪಿ ಏನು ಟ್ವಿಟ್ ಮಾಡಿದ್ದಾರೆ. ಜನರ ಈ ಪ್ರೀತಿ, ವ್ಯಾಮೋಹವನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಈ ದುರ್ಘಟನೆಯಿಂದ ನಮಗೂ ನೋವಾಗಿದೆ. ಐ ಆಮ್ ಸಾರಿ, ಈ ರೀತಿ ಆಗಬಾರದಿತ್ತುʼʼ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸಂಭ್ರಮಾಚರಣೆ, ಸರ್ಕಾರಿ ಕಾರ್ಯಕ್ರಮ ಮುಂದೂಡಿಕೆ
ʼʼ18 ವರ್ಷಗಳ ಸುದೀರ್ಘ ಅವಧಿ ಬಳಿಕ ನಮ್ಮ ನೆಚ್ಚಿನ ತಂಡ ಗೆದ್ದಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನ ತಮ್ಮ ಕೆಲಸ, ಕಾರ್ಯ ಬಿಟ್ಟು ಕ್ರಿಕೆಟ್ ಆಟಗಾರರನ್ನು ಕಣ್ತುಂಬಿಕೊಳ್ಳಲು ಬಂದಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಗುರುವಾರ (ಜೂ. 5) ಸಚಿವ ಸಂಪುಟ ಸಭೆ ಹೊರತು ಪಡಿಸಿ ವಿಶ್ವ ಪರಿಸರ ದಿನ ಸೇರಿದಂತೆ ಉಳಿದ ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ'' ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Chinnaswamy Stadium Stampede: ಚಿನ್ನಸ್ವಾಮಿ ಸ್ಟೇಡಿಯಂ ದುರಂತದ ಮ್ಯಾಜಿಸ್ಟ್ರಿಯಲ್ ತನಿಖೆಗೆ ಸಿಎಂ ಆದೇಶ
ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, ''ಇಲ್ಲಿ ಯಾರ ಮೇಲೂ ದೂಷಣೆ ಮಾಡಲು ಆಗುವುದಿಲ್ಲ. ಈ ರೀತಿ ಏಕಾಏಕಿ, ಕುಟುಂಬ ಸಮೇತರಾಗಿ ಮಕ್ಕಳನ್ನು ಕರೆದುಕೊಂಡು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ಯಾರು ನಿರೀಕ್ಷೆ ಮಾಡಿದ್ದರು?'ʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.