Kempegowda Jayanthi: ಬೆಂಗಳೂರು ವಿಭಜನೆ ತಡೆಗೆ ಸಂಘಟಿತ ಪ್ರಯತ್ನವಾಗಬೇಕು: ಪ್ರಲ್ಹಾದ್ ಜೋಶಿ
Pralhad Joshi: ಮಹಾನಗರಗಳನ್ನು ವಿಭಜಿಸಿದ ಎಲ್ಲೆಡೆಯೂ ಅದು ಯಶಸ್ವಿಯಾಗಿಲ್ಲ. ಇದು ಗೊತ್ತಿದ್ದರೂ ರಾಜ್ಯ ಸರ್ಕಾರ ಬೃಹತ್ ಬೆಂಗಳೂರನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಲು ಹೊರಟಿದೆ. ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ನಾವಿದನ್ನು ಪ್ರಾಮಾಣಿಕವಾಗಿ ತಡೆಯುವ ಪ್ರಯತ್ನ ಮಾಡಲೇಬೇಕಿದೆ ಎಂದು ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.


ಬೆಂಗಳೂರು: ಬಹುದೊಡ್ಡ ಮೆಟ್ರೋಸಿಟಿ, ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರು ವಿಭಜನೆಯನ್ನು ತಡೆಯುವ ಸಂಘಟಿತ ಪ್ರಯತ್ನ ಇಂದಾಗಬೇಕಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಸಂಜೆ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ 516ನೇ ಜನ್ಮದಿನೋತ್ಸವ ಸಮಾರಂಭದಲ್ಲಿ (Kempegowda Jayanthi) ಮಾತನಾಡಿದ ಅವರು, ಕೆಂಪೇಗೌಡರು ಕಟ್ಟಿದಂತಹ ಈ ಸಿಲಿಕಾನ್ ಸಿಟಿಯನ್ನು ಸರ್ಕಾರ ಒಡೆಯಲು ಹೊರಟಿರುವುದು ದುರಾದೃಷ್ಟ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಾನಗರಗಳನ್ನು ವಿಭಜಿಸಿದ ಎಲ್ಲೆಡೆಯೂ ಅದು ಯಶಸ್ವಿಯಾಗಿಲ್ಲ. ಇದು ಗೊತ್ತಿದ್ದರೂ ರಾಜ್ಯ ಸರ್ಕಾರ ಬೃಹತ್ ಬೆಂಗಳೂರನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸಲು ಹೊರಟಿದೆ. ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ನಾವಿದನ್ನು ಪ್ರಾಮಾಣಿಕವಾಗಿ ತಡೆಯುವ ಪ್ರಯತ್ನ ಮಾಡಲೇಬೇಕಿದೆ ಎಂದು ಹೇಳಿದರು.
ದೇಶದ ರಾಜಧಾನಿ ದೆಹಲಿಯನ್ನು ಮೂರು ಭಾಗವಾಗಿ ವಿಭಜಿಸಿದ್ದರು. ಮೂರು ಕಾರ್ಪೋರೇಷನ್ಗಳ ಪೈಕಿ ಎರಡು ಕಾರ್ಪೋರೇಷನ್ ನಡೆಯಲಿಲ್ಲ. ತೀವ್ರ ಆರ್ಥಿಕ ಹಿನ್ನಡೆ ಅನುಭವಿಸಿದವು. ನಿರೀಕ್ಷೆಯಂತೆ ತೆರಿಗೆ ಸಂಗ್ರಹವಾಗಲಿಲ್ಲ. ಆದಾಯ ಕ್ರೋಡೀಕರಣ ಆಗಲಿಲ್ಲ. ದೆಹಲಿಯ ಈ ಪರಿಸ್ಥಿತಿ ಗೊತ್ತಿದ್ದರೂ ರಾಜ್ಯ ಸರ್ಕಾರ ಇಲ್ಲಿ ಬೆಂಗಳೂರನ್ನು ಒಡೆಯಲು ಹೊರಟಿದ್ದು, ಇದನ್ನು ತಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಬೇಕು ಎಂದು ಹೇಳಿದರು.
ಹಸಿರು ಬೆಂಗಳೂರು ನಿರ್ಮಾತೃ ಕೆಂಪೇಗೌಡರು
500 ವರ್ಷಗಳ ಹಿಂದೆ ಒಬ್ಬ ಸಾಮಂತ ರಾಜನಾಗಿ ನಾಡಪ್ರಭು ಕೆಂಪೇಗೌಡರು ಹಸಿರು ಬೆಂಗಳೂರನ್ನು ನಿರ್ಮಿಸಿದರು. 347 ದೊಡ್ಡ ಕೆರೆಗಳು, 1200ಕ್ಕೂ ಅಧಿಕ ಸಣ್ಣ ಕೆರೆಗಳನ್ನು ನಿರ್ಮಿಸಿ ಬೃಹತ್ ಬೆಂಗಳೂರಿಗೆ ನೀರಿನ ಕೊರತೆ, ಹಸಿರಿನ ಕೊರತೆ ಆಗದಂತೆ ಹೆಸರು ಮಾಡಿದವರು ಕೆಂಪೇಗೌಡರು ಎಂದು ಸಚಿವ ಜೋಶಿ ತಿಳಿಸಿದರು.
ಕೆಂಪೇಗೌಡರಿಂದಲೇ ಬೆಂಗಳೂರು ಪ್ರಸಿದ್ಧಿಗೆ
ಬೆಂಗಳೂರು ಇಂದು ಸಿಲಿಕಾನ್ ಸಿಟಿ, ಐಟಿ, ತಂತ್ರಜ್ಞಾನ, ಸಂಶೋಧನೆ ಹೀಗೆ ಅನೇಕ ವಿಧದಲ್ಲಿ ಪ್ರಸಿದ್ಧಿ ಪಡೆದಿದ್ದರೆ ಕೆಂಪೇಗೌಡರ ಚಿಂತನಶೀಲತೆ ಮತ್ತು ದೂರದೃಷ್ಟಿಯೇ ಅದಕ್ಕೆ ಕಾರಣ. ಅವರತ ಉದಾತ್ತ ಆರ್ಥಿಕ ಚಿಂತನೆ, ಕೃಷಿ-ನೀರಾವರಿ ಯೋಜನೆಗಳು, ದೂರದೃಷ್ಟಿಯಲ್ಲಿ ನಿರ್ಮಿತವಾದ ವಾಣಿಜ್ಯ-ವಹಿವಾಟಿನ ಪೇಟೆಗಳು ಇಂದಿಗೂ ಮನಗೆ ಮಾದರಿಯಾಗಿವೆ ಎಂದು ಹೇಳಿದರು.
ಬೃಹತ್ ಬೆಂಗಳೂರಿಗೆ ಇಂದಿನ ತಂತ್ರಜ್ಞಾನ ಆಧಾರಿತ ಆಧುನಿಕ ಕಾಲದಲ್ಲಿಯೂ ನಮಗೆ ನೀರು ಕೊಡಲು ಕಷ್ಟವಾಗುತ್ತಿದೆ. ಆದರೆ, ನಾಡಪ್ರಭು ಕೆಂಪೇಗೌಡರು ಟೆಕ್ನಾಲಜಿ, ದೊಡ್ಡ ಆರ್ಥಿಕ ವ್ಯವಸ್ಥೆ ಇದ್ಯಾವುದೂ ಇಲ್ಲದ ಅಂದಿನ ಕಾಲದಲ್ಲೇ 347ಕ್ಕಿಂತ ಹೆಚ್ಚು ಕೆರೆ-ಕಟ್ಟೆ ಕಟ್ಟಿ, ಸುಂದರ-ಹಸಿರು ಬೆಂಗಳೂರಿಗೆ ಅಡಿಪಾಯ ಹಾಕಿದರು. ಅವರೊಬ್ಬ ಸಾಮಂತ ರಾಜರಾಗಿದ್ದರೂ ದಕ್ಷ ಆಡಳಿತಗಾರರು, ಆರ್ಥಿಕ ಚಿಂತಕರು ಮಾತ್ರವಲ್ಲದೆ, ಆಧುನಿಕ ದಾರ್ಶನಿಕರಾಗಿದ್ದರು ಎಂದು ಸಚಿವ ಜೋಶಿ ಸ್ಮರಿಸಿದರು.
ಕೆಂಪೇಗೌಡರು ವಾಣಿಜ್ಯ-ವಹಿವಾಟಿನ ಪರಿಕಲ್ಪನೆಯಲ್ಲಿ ಅಂದಿನ ಕಾಲದಲ್ಲೇ ಬೆಂಗಳೂರನ್ನು ವಾಪಾರಿ ಕೇಂದ್ರವಾಗಿ ರೂಪಿಸಿದ್ದರು. ಅಕ್ಕಿ ಪೇಟೆ, ಅರಳಿಪೇಟೆ, ದೊಡ್ಡ ಪೇಟೆ, ಚಿಕ್ಕಪೇಟೆ, ಕಮ್ಮಾರ ಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿದ್ದರ ಪರಿಣಾಮವಾಗಿ ಬೆಂಗಳೂರು ಇಂದು ಒಂದು ಸಿಲಿಕಾನ್ ಸಿಟಿ, ಐಟಿ ಸಿಟಿಯಾಗಿ ಪರಿವರ್ತನೆ ಹೊಂದಿದೆ. ಇದರಲ್ಲಿ ಕೆಂಪೇಗೌಡರ ಕೊಡುಗೆ ಅನನ್ಯವಾಗಿದೆ ಎಂದರು.
ಪ್ರಧಾನಿ ಮೋದಿಗೆ ವಿಶೇಷ ಕಾಳಜಿ
ನಾಲ್ಕು ಭಾಗದಲ್ಲಿ ಬೆಳೆಯುತ್ತಿದ್ದ ಬೆಂಗಳೂರಿಗೆ ಮೆಟ್ರೋ ನಗರವಾಗಿ ಆಧುನಿಕ ಸ್ಪರ್ಶ ನೀಡಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಅನಂತಕುಮಾರ್ ಕೊಡುಗೆಯೂ ಇದಕ್ಕಿದೆ. ದೇಶದ ಬೇರೆ ಬೇರೆ ಕಡೆ ಮೆಟ್ರೋ ನಗರಗಳು ವಿಸ್ತಾರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಬೆಂಗಳೂರು ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ಸಚಿವ ಜೋಶಿ ಪ್ರತಿಪಾದಿಸಿದರು.
ಈ ಸುದ್ದಿಯನ್ನೂ ಓದಿ | Karnataka Rains: ಯೆಲ್ಲೋ ಅಲರ್ಟ್ ಮುಂದುವರಿಕೆ; ನಾಳೆಯೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ
ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಹಾಸಂಸ್ಥಾನದ ಡಾ.ನಂಜಾವಧೂತ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋತ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಅಶ್ವತ್ಥ ನಾರಾಯಣ, ಸಿಟಿ ರವಿ, ಸಂಸದರಾದ ಡಾ.ಸಿ.ಎನ್. ಮಂಜುನಾಥ, ಪಿ.ಸಿ. ಮೋಹನ್, ಡಾ. ಸುಧಾಕರ್ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.