Hemavathi canal: ಹೇಮಾವತಿ ನಾಲೆ ಕಾಮಗಾರಿ ಪರಿಶೀಲಿಸಿದ ಶಾಸಕ ಸಿ.ಬಿ.ಸುರೇಶ್ಬಾಬು
Hemavathi canal: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳೊಂದಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ, ಪರಿಶೀಲಿಸಿದ್ದಾರೆ.


ಚಿಕ್ಕನಾಯಕನಹಳ್ಳಿ, ಜೂನ್ 23: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹೇಮಾವತಿ ನಾಲೆ ಕಾಮಗಾರಿಯನ್ನು (Hemavathi canal) 2026ರ ಜೂನ್ ತಿಂಗಳೊಳಗೆ ಸಂಪೂರ್ಣಗೊಳಿಸಿ, ತಾಲೂಕಿನ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಭರವಸೆ ನೀಡಿದರು. ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.
ಯೋಜನೆಯಡಿ ಈಗಾಗಲೇ ಕಾಮಗಾರಿ ನಡೆದಿರುವ ಶೆಟ್ಟಿಕೆರೆ ಭಾಗದ ಕಾಲುವೆಯ ಸೇತುವೆಗಳ ಬಳಿ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿತ್ತು. ಸುಮಾರು 60 ರಿಂದ 90 ಅಡಿಗಳಷ್ಟು ಆಳವಿರುವ ಈ ಕಾಲುವೆಯಲ್ಲಿ ಮಳೆಯಿಂದಾಗಿ ಮಣ್ಣು ಕುಸಿತವಾಗಿ ಹೂಳು ತುಂಬಿಕೊಂಡಿದೆ. ಇದನ್ನು ತೆರವುಗೊಳಿಸಲು 28 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆರು ಸೇತುವೆಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ಈಗಾಗಲೇ ಎರಡು ಸೇತುವೆಗಳಲ್ಲಿ ಕೆಲಸ ಮುಗಿದಿದೆ. ಈ ಬಾರಿ ಹೇಮಾವತಿ ನೀರು ಹರಿಯುವುದರೊಳಗೆ ಉಳಿದ ಸೇತುವೆಗಳಲ್ಲೂ ಮಣ್ಣು ತೆಗೆಸಲಾಗುವುದು. ಇದರಿಂದ ಈ ಬಾರಿ ಪೆಮ್ಮಲದೇವರಹಳ್ಳಿ ಕೆರೆ, ಶೆಟ್ಟಿಕೆರೆ ಮಾರ್ಗವಾಗಿ ಹುಳಿಯಾರು ಕೆರೆಗೆ ಹೇಮಾವತಿ ನೀರು ತಲುಪುವುದು ನಿಶ್ಚಿತ," ಎಂದು ಭರವಸೆ ನೀಡಿದರು.

ಶಾಶ್ವತ ಪರಿಹಾರಕ್ಕೆ 150 ಕೋಟಿ ರೂ. ಪ್ರಸ್ತಾವನೆ:
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ 'ಕಟ್ ಅಂಡ್ ಕವರ್' (Cut and Cover) ಮೂಲಕ ನೀರು ಹರಿಸಲು 150 ಕೋಟಿ ರೂ. ಅನುದಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಸಂಸದರು ಮಾಹಿತಿ ಕೇಳಿದ್ದು, ಶೀಘ್ರದಲ್ಲಿಯೇ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಭೂಸ್ವಾಧೀನ ಸಮಸ್ಯೆ ನಿವಾರಣೆ, ರೈತರ ಮನವೊಲಿಕೆ:
ಕಾಮಗಾರಿ ನಿಧಾನವಾಗಲು ಪ್ರಮುಖ ಕಾರಣವಾಗಿದ್ದ ಭೂಸ್ವಾಧೀನ ಪ್ರಕ್ರಿಯೆಯ ಕೈಬಿಟ್ಟ ಪ್ರಕರಣಗಳಿಗೆ ತಕ್ಷಣವೇ ಕ್ರಮವಹಿಸಿ, ರೈತರಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಹಾರದ ಹಣ ನೀಡುವವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಅಡ್ಡಿಪಡಿಸಿದ್ದ ರೈತರ ಮನೆಗಳಿಗೆ ಭೇಟಿ ನೀಡಿ, ಅವರನ್ನು ಮನವೊಲಿಸಲಾಗಿದೆ. ರೈತರು ಕಾಮಗಾರಿಗೆ ತಮ್ಮ ಅಭ್ಯಂತರವಿಲ್ಲ, ಪರಿಹಾರದ ಹಣವನ್ನು ಶೀಘ್ರವೇ ನೀಡುವಂತೆ ಕೋರಿದ್ದಾರೆ. ಸದ್ಯ 15 ಕೋಟಿ ರೂ. ಹಣ ಲಭ್ಯವಿದ್ದು, ಇಂದು ಸರಿಯಾದ ದಾಖಲೆ ನೀಡಿರುವ 12 ಜನ ರೈತರಿಗೆ 3.5 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ. ಉಳಿದವರಿಗೂ ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಸುರೇಶ್ಬಾಬು ತಿಳಿಸಿದರು.
ಅಧಿಕಾರಿಗಳಿಂದ ಸಹಕಾರಕ್ಕೆ ಮನವಿ:
ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್ ಎಂಜಿನಿಯರ್ ಸುವರ್ಣ ಜಿ ಮಾತನಾಡಿ, ಕಾಮಗಾರಿ ವಿಳಂಬಕ್ಕೆ ಭೂಸ್ವಾಧೀನ ಪ್ರಕ್ರಿಯೆಯೇ ಮುಖ್ಯ ಕಾರಣ. ಈಗಾಗಲೇ ಕೆಲವು ಪ್ರಕರಣಗಳಲ್ಲಿ 91 ಅಡಕ (Award) ಆಗಿದ್ದು, ನೇರವಾಗಿ ರೈತರ ಖಾತೆಗಳಿಗೆ ಪರಿಹಾರ ಹಣ ಜಮಾ ಆಗಲಿದೆ. ಇನ್ನು ಬಾಕಿ ಇರುವ ಪ್ರಕರಣಗಳಲ್ಲಿ ರೈತರನ್ನು ಮನವೊಲಿಸಿ ಕಾಮಗಾರಿ ಮುಂದುವರಿಸಲಾಗುವುದು, ನಂತರ ಅವರಿಗೆ ಪರಿಹಾರ ನೀಡಲಾಗುವುದು. ಇದಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಯನ್ನೂ ಓದಿ | Chikkanayakanahalli (Tumkur) news: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಸಕರ ನಿರಂತರ ಪ್ರಯತ್ನ
ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಹೇಮಾವತಿ ನಾಲಾ ವಲಯದ ಎಇಇ ಮುರುಳಿಧರ್, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್, ಹೇಮಾವತಿ ನಾಲಾ ವಲಯದ ಎಇಇ ಸೈಯದ್ಇಬ್ರಾಹಿಂ, ಎಇ ಸೌಜನ್ಯ, ಮುಖಂಡರಾದ ನಿವೃತ್ತ ಎಎಸ್ಐ ಕೃಷ್ಣಪ್ಪ, ನಿವೃತ್ತ ಪಶುವೈದ್ಯಾಧಿಕಾರಿ ಚಂದ್ರಶೇಖರ್ ಸೇರಿದಂತೆ ಗುತ್ತಿಗೆದಾರರು ಹಾಜರಿದ್ದರು.