#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Padma Awards 2025: 2025ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕಕ್ಕೆ 1 ಪದ್ಮ ವಿಭೂಷಣ, 2 ಪದ್ಮ ಭೂಷಣ, 6 ಪದ್ಮ ಶ್ರೀ ಗರಿ

2025ರ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಒಟ್ಟು 9 ಸಾಧಕರಿಗೆ ಈ ಪುರಸ್ಕಾರ ಲಭಿಸಿದೆ. ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

2025ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ; ಕರ್ನಾಟಕದ 9 ಸಾಧಕರ ಪರಿಚಯ ಇಲ್ಲಿದೆ

ಅನಂತ್‌ ನಾಗ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌

Profile Ramesh B Jan 25, 2025 11:29 PM

ಬೆಂಗಳೂರು: 2025ರ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (Padma Awards 2025) ಪ್ರಕಟಗೊಂಡಿದ್ದು, ಕರ್ನಾಟಕದ ಒಟ್ಟು 9 ಸಾಧಕರಿಗೆ ಈ ಪುರಸ್ಕಾರ ಲಭಿಸಿದೆ. ಈ ಪೈಕಿ 1 ಪದ್ಮ ವಿಭೂಷಣ (ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ- ಕಲೆ), 2 ಪದ್ಮ ಭೂಷಣ (ಎ.ಸೂರ್ಯ ಪ್ರಕಾಶ್‌-ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ಅನಂತ್‌ ನಾಗ್‌-ಕಲೆ) ಮತ್ತು 6 ಪದ್ಮ ಶ್ರೀ (ರಿಕ್ಕಿ ಕೇಜ್‌, ವೆಂಕಪ್ಪ ಅಂಬಾಜಿ ಸುಗಟೇಕರ್‌, ಹಾಸನ ರಘು, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ- ಕಲೆ, ಡಾ. ವಿಜಯಲಕ್ಷ್ಮೀ ದೇಶಮಾನೆ-ವೈದ್ಯಕೀಯ, ಪ್ರಶಾಂತ್‌ ಪ್ರಕಾಶ್‌-ಕೈಗಾರಿಕೆ) ಪ್ರಶಸ್ತಿ ಲಭಿಸಿದೆ. ಇಲ್ಲಿದೆ ಈ ಸಾಧಕರ ಪರಿಚಯ.

ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ: ರಾಜ್ಯದ ಪ್ರಸಿದ್ಧ ಪಿಟೀಲು ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಚೆನ್ನೈ ಮೂಲದ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಪರಿಗಣಿಸಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. 1947ರ ಜುಲೈ 23ರಂದು ವಿ. ಲಕ್ಷ್ಮೀನಾರಾಯಣ ಅಯ್ಯರ್ ಮತ್ತು ಸೀತಾಲಕ್ಷ್ಮಿ ದಂಪತಿ ಮಗನಾಗಿ ಸುಬ್ರಮಣ್ಯಂ ಅವರು ಮದ್ರಾಸ್‌ನಲ್ಲಿ ಜನಿಸಿದರು. ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರು ಕರ್ನಾಟಕ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಪ್ರಸಿದ್ಧ ಪಿಟೀಲು ವಾದಕರು. ಸಂಗೀತದಲ್ಲಿ ಇವರ ವೃತ್ತಿಜೀವನವು 1973 ರಲ್ಲಿ ಪ್ರಾರಂಭವಾಯಿತು ಮತ್ತು ಅಂದಿನಿಂದ ಅವರು 200ಕ್ಕೂ ಹೆಚ್ಚು ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದ್ದಾರೆ.

ಇವರು ಖ್ಯಾತ ಸಂಗೀತಗಾರರಾದ ಯೆಹೂದಿ ಮೆನುಹಿನ್, ಸ್ಟೀಫನ್ ಗ್ರಾಪ್ಪೆಲ್ಲಿ, ರುಗ್ಗಿರೋ ರಿಕ್ಕಿ, ಜೀನ್-ಪಿಯರ್ ರಾಂಪಾಲ್, ಹರ್ಬಿ ಹ್ಯಾನ್‌ಕಾಕ್, ಜಾರ್ಜ್ ಹ್ಯಾರಿಸನ್ ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ. ಇವರು ʼಸಲಾಮ್ ಬಾಂಬೆʼ (1988) ಮತ್ತು ʼಮಿಸ್ಸಿಸ್ಸಿಪ್ಪಿ ಮಸಾಲಾ; (1991) ದಂತಹ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1981ರಲ್ಲಿ ಅವರ ಆಲ್ಬಮ್ ಇಂಡಿಯನ್ ಶಾಸ್ತ್ರೀಯ ಸಂಗೀತಕ್ಕಾಗಿ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಎ.ಸೂರ್ಯ ಪ್ರಕಾಶ್‌: ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಮೂಲಕ ಹುದ್ದೆಯನ್ನು ನಿರ್ವಹಿಸಿದ ಎರಡನೇ ಕನ್ನಡಿಗ ಎಂಬ ಹೆಮ್ಮೆಗೂ ಇವರು ಪಾತ್ರರಾಗಿದ್ದಾರೆ. ಸೂರ್ಯ ಪ್ರಕಾಶ್ ಅವರು ‘ದಿ ಪಯೋನಿರ್’ನಲ್ಲಿ ಕಾರ್ಯನಿರ್ವಾಹಕ ಸಂಪಾದಕ, ‘ಈ ನಾಡು’ ನ್ಯೂಸ್‌ಪೇಪರ್ ಸಮೂಹದ ರಾಜಕೀಯ ಸಂಪಾದಕ, ‘ಜೀ ನ್ಯೂಸ್’ನಲ್ಲಿ ಸಂಪಾದಕ, ಬ್ಯಾಂಕಾಕ್ ಮತ್ತು ಸಿಂಗಾಪುರದಲ್ಲಿ ಪ್ರಕಟವಾಗುವ ‘ಏಷ್ಯಾ ಟೈಮ್ಸ್ ’ದೈನಿಕದಲ್ಲಿ ಇಂಡಿಯಾ ಎಡಿಟರ್, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿ ಬ್ಯುರೋ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.



ಅನಂತ್‌ನಾಗ್‌: ಕನ್ನಡ ಚಲನಚಿತ್ರದ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಅನಂಗ್‌ ನಾಗ್‌ ಕೂಡ ಒಬ್ಬರು. ಅವರು ನಟರಾಗಿ ಮಾತ್ರವಲ್ಲದೆ, ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಲೇಖಕರಾಗಿಯೂ ಅನಂತ್‌ ನಾಗ್‌ ದೊಡ್ಡ ಹೆಸರು ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಅವರು, ಕನ್ನಡ ಭಾಷೆಯಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳ ಪೈಕಿ ʼಅರುಣರಾಗʼ, ʼಅನುಪಮʼ, ʼಮುಳ್ಳಿನ ಗುಲಾಬಿʼ, ʼಹೊಸ ನೀರುʼ, ʼಬಾಡದ ಹೂʼ, ʼಜನ್ಮಜನ್ಮದ ಅನುಬಂಧʼ, ʼಮುಂಗಾರು ಮಳೆʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಅನಂತ್ ನಾಗ್‌ ನಟಿಸಿದ ಪ್ರಮುಖ ಚಿತ್ರಗಳು.

ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ʼಚಾಲೆಂಜ್ ಗೋಪಾಲಕೃಷ್ಣʼ, ʼಗೋಲ್ ಮಾಲ್ ರಾಧಾಕೃಷ್ಣʼ, ʼಗೌರಿ ಗಣೇಶʼ, ʼಗಣೇಶ ಸುಬ್ರಮಣ್ಯʼ, ʼಧೈರ್ಯಲಕ್ಷ್ಮಿʼ, ʼನಾರದ ವಿಜಯʼ, ʼಯಾರಿಗೂ ಹೇಳ್ಬೇಡಿʼ, ʼಗಾಯತ್ರಿ ಮದುವೆʼ, ʼಯಾರಿಗೆ ಸಾಲುತ್ತೆ ಸಂಬಳʼ ಇವು ಅನಂತ ನಾಗ್‌ ನಟನೆಯ ಪ್ರಮುಖ ಹಾಸ್ಯ ಪ್ರಧಾನ ಸಿನಿಮಾಗಳು.

ರಿಕ್ಕಿ ಕೇಜ್‌: ಪ್ರತಿಷ್ಠಿತ ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಪದ್ಮ ಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪಂಜಾಬ್‌ ಕುಟುಂಬ ಮೂಲದ ಅವರು 1981ರಲ್ಲಿ ಅಮೆರಿಕದಲ್ಲಿ ಜನಿಸಿದರು. ಅವರು 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ್ದಾರೆ. 43 ವರ್ಷದ ಅವರು ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ರಮೇಶ್ ಅರವಿಂದ್ ಅವರ 'ಆಕ್ಸಿಡೆಂಟ್', 'ವೆಂಕಟ ಇನ್ ಸಂಕಟ' ಹಾಗೂ 'ಕ್ರೇಜಿ ಕುಟುಂಬ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 30 ದೇಶಗಳಲ್ಲಿ 100 ಮ್ಯೂಸಿಕ್ ಅವಾರ್ಡ್ಸ್‌ಗಳನ್ನು ಪಡೆದ ಅವರು 3,000ಕ್ಕೂ ಅಧಿಕ ಜಿಂಗಲ್ಸ್ ಮಾಡಿದ್ದಾರೆ.

ಹಾಸನ ರಘು: ಸೈನ್ಯದಲ್ಲಿದ್ದು ಸ್ವಯಂ ನಿವೃತ್ತಿಯ ನಂತರ ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಲು ಆರಂಭಿಸಿದವರು ಹಾಸನ ರಘು. ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುವ ಮೂಲಕ ಇವರು ಜನಪ್ರಿಯರಾಗಿದ್ದಾರೆ. ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ನೂರಾರು ಸಾಹಸ ಕಲಾವಿದರನ್ನು ತಯಾರು ಮಾಡಿದ್ದಾರೆ. ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ವೆಂಕಪ್ಪ ಅಂಬಾಜಿ ಸುಗಟೇಕರ್‌: ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿದ ಜಾನಪದ ಗಾಯಕ, ಬಾಗಲೋಕಟೆಯ ಅವರಿಗೆ ಪದ್ಮಶ್ರೀ ಪ್ರಕಟವಾಗಿದೆ. ಔಪಚಾರಿಕ ಶಿಕ್ಷಣ ಪಡೆಯದ ಅವರಿಗೆ ಈಗ 81 ವರ್ಷ. ಅಜ್ಜನಿಂದ ಬಳುವಳಿಯಾಗಿ ಬಂದ ಕಲೆಯನ್ನು ಅವರು ಮುಂದುವಿಸುತ್ತಿರುವುದು ವಿಶೇಷ. ಜತೆಗೆ ಉಚಿತವಾಗಿ ಸಾವಿರಾರು ಜನರಿಗೆ ಅವರು ಗೊಂದಲಿ ಹಾಡುವುದನ್ನು ಕಲಿಸಿದ್ದಾರೆ. ತಮ್ಮ 10ನೇ ವಯಸ್ಸಿನಲ್ಲಿ ಕಲಾಸೇವೆಗೆ ತೊಡಗಿದ ಅವರು 71 ವರ್ಷಗಳಿಂದ ಪದ ಹಾಡುತ್ತಿದ್ದಾರೆ. 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡು ಹಾಡಿದ್ದಾರ. ಕರ್ನಾಟಕ ಸರ್ಕಾರ 2022ರಲ್ಲಿ ಗೊಂದಲಿ ಪದ ಸೇವೆಗೆ ಜಾನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡ ಪ್ರದಾನ ಮಾಡಿದೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ವೆಂಕಪ್ಪ ಬಂದಿವೆ.

ಭೀಮವ್ವ ಶಿಳ್ಳೇಕ್ಯಾತ: ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ 96 ವರ್ಷ ವಯಸ್ಸು. ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಭೀಮವ್ವ ಅವರು ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್, ಜಪಾನ್‌, ಜರ್ಮನಿ ಮೊದಲಾದ ಕಡೆ ತೊಗಲು ಗೊಂಬೆಯಾಟದ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು. ಇವರು ಮಹಾಭಾರತ ಮತ್ತು ರಾಮಾಯಣವನ್ನು ಮನಮುಟ್ಟುವಂತೆ ನಿರೂಪಿಸುತ್ತಾರೆ. ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಉಳಿಸಿ ಬೆಳೆಸುವಲ್ಲಿ ಇವರ ಕೊಡುಗೆ ಅಪಾರ. ಕೊಪ್ಪಳ ತಾಲೂಕಿನ‌ ಮೊರನಾಳ ಗ್ರಾಮ ಇವರ ಹುಟ್ಟೂರು. 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Padma Shri 2025: ರಿಕ್ಕಿ ಕೇಜ್‌, ಹಾಸನ ರಘು ಸೇರಿ ಕರ್ನಾಟಕದ 6 ಮಂದಿ ಸಾಧಕರಿಗೆ ಪದ್ಮ ಶ್ರೀ

ಡಾ. ವಿಜಯಲಕ್ಷ್ಮೀ ದೇಶಮಾನೆ: ಕಲಬುರಗಿ ಮೂಲದ, 70 ವರ್ಷದ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ಸುಮಾರು 2 ದಶಕಗಳಿಂದ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿದ್ದಾರೆ. ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್., ಎಂ.ಎಸ್. (ಜನರಲ್ ಸರ್ಜರಿ), ಎಫ್.ಎ.ಐ.ಎಸ್. ಪದವಿ ಪಡೆದಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.