Thursday, 19th September 2024

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರನ ‘ಪೆರೋಲ್’ ರದ್ದು

ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ 14 ‘ಪೆರೋಲ್’ ನೀಡಿದ್ದ ಗುಜರಾತ್ ಹೈಕೋರ್ಟ್‌ನ ಆದೇಶ ವನ್ನು ಸುಪ್ರೀಂ ಕೋರ್ಟ್‌ ಬುಧವಾರ ತಳ್ಳಿ ಹಾಕಿದೆ.

ಗುಜರಾತ್ ಹೈಕೋರ್ಟ್‌ ನಾರಾಯಣ ಸಾಯಿಗೆ ಜೂನ್ 24ರಂದು ಪೆರೋಲ್ ಮಂಜೂರು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರ ಚೂಡ್ ಮತ್ತು ಬಿ.ವಿ.ನಾಗರತ್ನ ಅವನ್ನೊಳಗೊಂಡ ಪೀಠ ಮಾನ್ಯ ಮಾಡಿತು.

ಸಾಯಿ ಅವರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದರಿಂದ, ಪೆರೊಲ್ ನೀಡುವ ವಿಷಯದಲ್ಲಿ ಜೈಲಿನ ಮೇಲ್ವಿಚಾರಕರು ನಕಾರಾತ್ಮಕ ಅಭಿಪ್ರಾಯ ನೀಡಿದ್ದಾರೆ. ಹೀಗಾಗಿ ಪೆರೊಲ್‌ ನೀಡುವುದು ಸೂಕ್ತವಾದ ಕ್ರಮವಲ್ಲ ಹಾಗೂ ಅದು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೈಕೋರ್ಟ್‌ನ ಏಕಸದಸ್ಯಪೀಠ ಸಾಯಿ ಅವರಿಗೆ ನೀಡಿದ್ದ ಪೆರೋಲ್‌ಗೆ ವಿಭಾಗೀಯ ಪೀಠ ಆಗಸ್ಟ್‌ 12ರಂದು ತಡೆಯಾಜ್ಞೆ ನೀಡಿತ್ತು.