Tuesday, 22nd October 2024

ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಬಿಜೆಪಿಯಾಗಲಿ ಅಥವಾ ನರೇಂದ್ರ ಮೋದಿಯವರು ಹಾಗೂ ಯಾರೇ ಅಗಲಿ ನನ್ನನ್ನು ಸೈಡ್ ಲೈನ್ ಮಾಡಿಲ್ಲ. ನಾನು ಸ್ವಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಯಾರು ಒತ್ತಡ ತಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗೊಂದಲ ತರುವಂತಹ ಪ್ರಯತ್ನವನ್ನು ಮಾಡಬೇಡಿ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟಿಸೋಣ. ನಮ್ಮೆಲ್ಲರ ಅದೃಷ್ಟಕ್ಕೆ ಜಗತ್ತು ಮೆಚ್ಚಿದ ಮೋದಿ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬೆಂಬಲಿಗರಾಗಿ ನಾವೇಲ್ಲಾ ನಿಂತುಕೊಳ್ಳುತ್ತೇವೆ ಎಂದರು.

ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದೆ. ಅ.20 ಹಾಗೂ 21 ರಂದು ಸಿಂಧಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಅ.22 ಹಾಗೂ 23 ರಂದು ಹಾನಗಲ್ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಅಗತ್ಯ ಬಿದ್ದರೆ ಹಾನಗಲ್ ಕ್ಷೇತ್ರದಲ್ಲಿ ಇನ್ನೂ ಒಂದು ದಿನ ಇರುತ್ತೇನೆ. ಸಿಎಂ ಬೊಮ್ಮಾಯಿ, ನಾನು ಎಲ್ಲರೂ ಓಡಾಡುತ್ತೇವೆ. ನೂರಕ್ಕೆ ನೂರರಷ್ಟು ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಬೊಮ್ಮಾಯಿಯವರು ಇತ್ತೀಚೆಗೆ ಉತ್ತಮ ಕೊಡುಗೆ ನೀಡಿದ್ದು, ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪುತ್ತಿವೆ. ಜೊತೆಗೆ ನಾನಿದ್ದಗಾಲೂ ಮಾಡಿದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಿವೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದೆ. ಲಕ್ಷಾಂತರ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು, ಗೌರವದಿಂದ ಬದುಕುವ ವ್ಯವಸ್ಥೆಯಾಗಿದೆ. ಯಾವುದೇ ಚುನಾವಣೆ ಬಂದರೂ ನಾವು ಹಗುರವಾಗಿ ತೆಗೆದು ಕೊಳ್ಳಲ್ಲ. ಚುನಾವಣೆಯಲ್ಲಿ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಒಬ್ಬ ವಿರೋಧ ಪಕ್ಷದ ನಾಯಕನಾಗಿ ಅವರಿಗೆ ಶೋಭೆ ತರಿಸಲ್ಲ. ಇನ್ನಾದರೂ ಸ್ವಲ್ಪ ನಾಲಿಗೆಯನ್ನು ಹದ್ದು ಬಸ್ತಿನಲ್ಲಿಟ್ಟುಕೊಂಡು ಮಾತನಾಡ್ಬೇಕು. ಇಲ್ಲವಾದರೇ ರಾಜ್ಯದ ಜನರೇ ಸಿದ್ದರಾಮಯ್ಯನವರಿಗೆ ಪಾಠ ಕಲಿಸುತ್ತಾರೆ ಎಂದ ಬಿಎಸ್ವೈ ಹೇಳಿದರು.

ಅಲ್ಪಸಂಖ್ಯಾತರಿಗೆ ವಂಚನೆ ಮಾಡಿದ ಒಂದು ಉದಾಹರಣೆ ಇದ್ದರೇ ನನಗೆ ಕೊಡಿ. ಅವರಿಗೊಂದು ಇವರಿಗೊಂದು ಯಾವತ್ತು ಮಾಡಿಲ್ಲ. ತಾರತಮ್ಯ ಮಾಡದೇ ಎಲ್ಲರಿಗೂ ಒಂದೇ ತರಹ ನೋಡಿದೆ ಎಂದು ಯಡಿಯೂರಪ್ಪ ಹೇಳಿದರು.